ಬೆಳಗಾವಿ:
ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಅಸಮಾಧಾನಿತ ಶಾಸಕರಿಗೆ ಇನ್ನಷ್ಟು ನಿರಾಶೆ ಎದುರಾಗಿದೆ.ಯಾರೊಬ್ಬ ಕಾಂಗ್ರೆಸ್ ನಾಯಕರು ನೇತೃತ್ವವಹಿಸಿಕೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ನಮ್ಮ ಕೆಲಸಗಳಾಗುತ್ತಿಲ್ಲ,ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ.
ನಮ್ಮ ಮುಖಂಡರು ಬಂದಿಲ್ಲ,ಮುಖ್ಯಮಂತ್ರಿಯನ್ನೇ ಕರೆಯುವ ಶಾಸಕಾಂಗ ಪಕ್ಷದ ಸಭೆ ಮುಂದಕ್ಕೆ ಹೋಗಿದೆ ಎಂಬ ಅಭಿಪ್ರಾಯವನ್ನು ಶಾಸಕರು ವ್ಯಕ್ತಪಡಿಸುತ್ತಾರೆ.ಆದರೆ ಅದನ್ನು ಧೈರ್ಯವಾಗಿ ಹೇಳುವುದಕ್ಕೆ ಶಾಸಕರು ಹಿಂದೇಟು ಹಾಕುತ್ತಾರೆ.ಎರಡು ಮೂರು ದಿನಗಳಲ್ಲಿ ಬೆಂಗಳೂರಿನ ಶಾಸಕರು ಸಭೆ ಕರೆಯಬಹುದೆಂಬ ಆಸೆಯನ್ನು ಕೆಲ ಶಾಸಕರು ಹೊಂದಿದ್ದಾರೆ.ಆದರೆ ಬೆಂಗಳೂರಿನ ಹಿರಿಯ ಶಾಸಕರು ಮಾತ್ರ ತಮಗೇಕೆ ಎಂಬ ಮೌನಕ್ಕೆ ಶರಣಾಗಿದ್ದಾರೆ.
ಬೆಂಗಳೂರು ನಗರ ಹೊರತುಪಡಿಸಿ ಇನ್ನುಳಿದ ಯಾವುದೇ ಜಿಲ್ಲೆಯ ಶಾಸಕರು ಮಾತ್ರ ಸಭೆ ಸೇರಿ ತಮ್ಮ ಅಸಮಾಧಾನವನ್ನು ಹೊರ ಹಾಕಬೇಕು ಎಂಬ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ.
ಫಲಿತಾಂಶಕ್ಕಾಗಿ ಕಾಯುತ್ತಿರುವ ಶಾಸಕರು
ತಮ್ಮ ಅಸಮಾಧಾನ ಹಾಗೂ ಅತೃಪ್ತಿ ಹೊರ ಹಾಕಲು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶಕ್ಕೆ ಕೆಲವರು ಕಾಯುತ್ತಿದ್ದಾರೆ. ಆ ಫಲಿತಾಂಶ ನೋಡಿಕೊಂಡು ಮುಂದಿನ ನಿರ್ಧಾರ ಮಾಡಲಿದ್ದಾರೆ ಎಂಬ ಮಾತನ್ನು ಕಾಂಗ್ರೆಸ್ನ ಕೆಲ ಶಾಸಕರು ಹೇಳುತ್ತಾರೆ. ಫಲಿತಾಂಶ ಕಾಂಗ್ರೆಸ್ಗೆ ಪೂರಕವಾಗಿ ಬಂದರೆ ಹೈಕಮಾಂಡ್ ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ. ಆಗ ಯಾವೊಬ್ಬ ಶಾಸಕರು ಇಲ್ಲಿ ಸಭೆ ನಡೆಸಲು ಅಥವಾ ಬೇರೆ ರೂಪದಲ್ಲಿ ಅತೃಪ್ತಿ ಹೊರ ಹಾಕಲು ಹೋಗುವುದಿಲ್ಲ. ಇಲ್ಲದಿದ್ದರೆ ಅತೃಪ್ತ ಬೇರೆ ರೂಪ ಪಡೆದು ಹೊರಬರಬಹುದು ಎಂಬುದು ಕೆಲ ಶಾಸಕರ ಅಭಿಪ್ರಾಯವಾಗಿದೆ.
ಯಾವುದೇ ಶಾಸಕರಿಗೂ ಪಕ್ಷ ಬಿಟ್ಟು ಹೋಗುವ ಧೈರ್ಯ ಇಲ್ಲ,ಅನಗತ್ಯ ಚುನಾವಣೆ ಎದುರಿಸುವುದಕ್ಕೂ ಸಿದ್ಧರಿಲ್ಲ, ಆದ್ದರಿಂದ ಯಾವ ಅತೃಪ್ತಿಯೂ ಸ್ಪೋಟ ಆಗುವ ಮಟ್ಟಕ್ಕೆ ಹೋಗಲ್ಲವೆಂಬುದು ಬಳ್ಳಾರಿ ಭಾಗದ ಶಾಸಕರೊಬ್ಬರ ಅಭಿಪ್ರಾಯ.ಮೈಸೂರು ಭಾಗದ ಶಾಸಕರ ಪ್ರಕಾರ, ಡಿ.22ಕ್ಕೆ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ಕಾಯಲು ನಿರ್ಧರಿಸಿದ್ದೇವೆ.
