ತಿಪಟೂರು
ಕೊರೊನಾ ವಾರಿಯರ್ಸ್ಗಳು ತಮ್ಮ ಅಗತ್ಯಕ್ಕಿಂತ ಹೆಚ್ಚಿನ ಶ್ರಮವನ್ನು ಹಾಕಿ ಲಾಕ್ಡೌನ್ ಸಮಯದಲ್ಲಿ ಕೊರೊನಾ ಹರಡದಂತೆ ಅವಿತರವಾಗಿ ಶ್ರಮಿಸಿ, ತಾಲ್ಲೂಕನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದೇ ಕೊರೋನಾ ವಾರಿಯರ್ಸ್ಗಳನ್ನು ಇಂದು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.
ತಾಲ್ಲೂಕಿನಲ್ಲಿ ಕೊರೊನಾ ನಿಧಾನವಾಗಿ ತನ್ನ ಕಬಂಧ ಬಾಹುವನ್ನು ಚಾಚುತ್ತಿದ್ದು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 18 ಜನ ಸೋಂಕಿತರಲ್ಲಿ 7 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಸಕ್ರಿಯ ಸೋಂಕಿತರು 11 ಜನರಿದ್ದಾರೆ. ಸೋಂಕಿತರು ಇರುವ ನಗರದ ಮತ್ತು ಗ್ರಾಮಾಂತರ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ಕೊರೋನಾ ಹರಡದಂತೆ ಹೋರಾಡುತ್ತಿರುವ ವಾರಿಯರ್ಸ್ಗಳಾದ ಮುಖ್ಯವಾಗಿ ಆಶಾಕಾರ್ಯಕರ್ತೆಯರು, ಅಂಗನವಾಡಿ ಮತ್ತು ನಗರಸಭೆಯ ನೌಕರರು, ಆರಕ್ಷಕರು, ಆಸ್ಪತ್ರೆಯ ಸಿಬ್ಬಂದಿ ತಮ್ಮ ಜೀವನ ಮತ್ತು ಕುಟುಂಬವನ್ನು ಬದಿಗೊತ್ತಿ ಮಾಡಿದ ಸೇವಾ ಕಾರ್ಯವು ಶ್ಲಾಘನೀಯವಾದುದು. ಆದರೂ ಅವರು ಮಾಡಿದ ಕಾರ್ಯವು ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ.
ಮರೆಯಾದ ವ್ಯಕ್ತಿಗತ ಅಂತರ:
ಲಾಕ್ಡೌನ್ ಸಮಯದಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು. ಇನ್ನೊಂದು ಕಡೆ ಆರಕ್ಷಕರು ಮತ್ತು ನಗರಸಭೆಯ ಸಿಬ್ಬಂದಿಗೆ ಹೆದರಿಯಾದರೂ ಗುಂಪುಗೂಡುವುದನ್ನು ಕಡಿಮೆ ಮಾಡಿದ್ದರು. ಅದೇ ಸಾರ್ವಜನಿಕರು ಇಂದು ಯಾವುದೇ ಲಗಾಮು ಇಲ್ಲದಂತೆ ಎಲ್ಲಿ ಬೇಕೆಂದರಲ್ಲಿ ಗುಂಪುಗೂಡುತ್ತಿದ್ದಾರೆ. ಮೊದಮೊದಲಿಗೆ ಬ್ಯಾಂಕುಗಳಲ್ಲಿ ಸ್ಯಾನಿಟೈಸರ್ ನೀಡಿ, ಸರದಿಯಂತೆ ಗ್ರಾಹಕರನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಆಗ ಬೆಳಗಿನ ಜಾವವೇ ಬಂದು ಸರದಿಯಲ್ಲಿ ನಿಲ್ಲುತ್ತಿದ್ದ ಜನರು, ಈಗ ಹೇಗೂ ಬ್ಯಾಂಕ್ ಇದ್ದೇ ಇರುತ್ತದಲ್ಲವೆ ಎಂದು ಬ್ಯಾಂಕ್ಗಳ ಮುಂದೆ, ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ಕೊರೊನಾ ಭಯವಿಲ್ಲದೇ ಸಾಮಾಜಿಕ ಅಂತರವನ್ನು ಮರೆತು ನಿಲ್ಲುತ್ತಿರುವುದು ವಿಪರ್ಯಾಸವಾಗಿದೆ.
ವಾರಿಯರ್ಸ್ಗೆ ಅಂಟಿದ ಸೋಂಕು :
ಇನ್ನು ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ನಗರಸಭೆಯ ನೌಕಕರನ್ನೆ ಗುರಿಯಾಗಿಸಿಕೊಂಡ ಕೊರೊನಾ ಇದುವರೆಗೂ 5 ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರಿಂದ ಹೆದರಿದಂತೆ ಕಾಣುತ್ತಿರುವ ನೌಕರರರು ನಮಗೆ ಇಲ್ಲದ ಉಸಾಬರಿ ಏಕೆ? ಜನರು ನಾವು ಹೇಳಿದ ಮಾತನ್ನು ಕೇಳುತ್ತಿಲ್ಲವೆಂದು ತಿಳಿದು ಕಚೇರಿ ಒಳಗೆ ಸೇರಿದ್ದಾರೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದವರಿಗೆ ದಂಡವನ್ನು ವಿಧಿಸಬೇಕೆನ್ನುವುದನ್ನು ಮರೆತಿದ್ದಾರೆ. ಇದರಿಂದ ವ್ಯಾಪಾರಸ್ಥರು, ಗ್ರಾಹಕರು ಸ್ವೇಚ್ಛೆಯಾಗಿ ನಗರದ ಅಂಗಡಿಗಳಲ್ಲಿ ಸಂಚರಿಸುತ್ತಿರುವುದು ಮುಂದಿನ ದಿನಗಳಲ್ಲಿ ಸಾಕಷ್ಟು ಕಠಿಣತೆಯನ್ನು ಉಂಟು ಮಾಡುತ್ತದೆ. ಈಗಲಾದರು ನಗರಸಭೆಯ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಕೊರೊನಾವನ್ನು ಸೇರಿಸಿಕೊಂಡು ಸಾಮಾಜಿಕ ಅಂತರ, ಸ್ಯಾನಿಟೈಸರ್ ಇಲ್ಲದ ಅಂಗಡಿಗಳನ್ನು ಗುರುತಿಸಿ ದಂಡವನ್ನು ವಿಧಿಸುವ ಮೂಲಕ ಸಾರ್ವಜನಿಕರಲ್ಲಿ ಕೊರೊನಾ ಜಾಗೃತಿಯನ್ನು ಮೂಡಿಸಬೇಕಾಗಿದೆ.
ಆಸ್ಪತ್ರೆಗೆ ಸಾಗಲು ವಾಹನಗಳಿಲ್ಲ :
ಕೊರೊನಾ ಪರಿಸ್ಥಿತಿ ಕೆಲವು ಜನರಿಗೆ ಚೆಲ್ಲಾಟವಾದರೆ ಇನ್ನೂ ಕೆಲವರಿಗೆ ಜೀವನವನ್ನು ಸಾಗಿಸುವುದು ಕಷ್ಟವಾಗಿದೆ. ಇದರಲ್ಲಿ ಗ್ರಾಮೀಣ ಜನರ ಬದುಕಂತೂ ತುಂಬಾ ದುಸ್ತರವಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಾದರೂ ನಗರಕ್ಕೆ ಬರಲು ಸಾಧ್ಯವಿಲ್ಲ. ಇವರಿಗೆ ಇರುವ ಏಕೈಕ ಮಾರ್ಗವೆಂದರೆ ಆಟೋಗಳು. ಇವುಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟ ಸಾಧ್ಯ. ಏಕೆಂದರೆ 4 ಜನರನ್ನು ಕೂರಿಸಿಕೊಂಡು ನಗರಕ್ಕೆ ಬಂದರೆ ಚಾಲಕನಿಗೆ ಲಾಭವಿಲ್ಲ ಮತ್ತು ಅವರು ಕೊರೊನಾ ಪರಿಸ್ಥಿತಿಯಲ್ಲಿ ಕಂತನ್ನು ಕಟ್ಟಲು ಸಾಧ್ಯವಾಗುವುದೇ ಇಲ್ಲ.
ಇನ್ನು ಇರುವ 4 ಜನರನ್ನು 1 ರೂ. ಹೆಚ್ಚಿಗೆ ಕೇಳಿದರು ಕೊಡುವುದಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿರುವ ಜನರು ವಯೋವೃದ್ಧರನ್ನು ತಮ್ಮ ದ್ವಿಚಕ್ರವಾಹನದಲ್ಲಿ ಇನ್ನೊಬ್ಬರ ಸಹಾಯವನ್ನು ಪಡೆದು ಮಧ್ಯದಲ್ಲಿ ಕೂರಿಸಿಕೊಂಡು ನಗರದ ಕೆಲಸಗಳಾದ ಬ್ಯಾಂಕ್ ಮತ್ತು ಆಸ್ಪತ್ರೆಗಳಿಗೆ ಬರುತ್ತಿರುವುದು ಶೋಚನೀಯವಾಗಿದೆ. ದ್ವಿಚಕ್ರ ವಾಹನವಿರುವವರ ಸ್ಥಿತಿ ಇದಾದರೆ, ಇನ್ನು ದ್ವಿಚಕ್ರವಾಹನ ವಿಲ್ಲದವರ ಪಾಡಂತೂ ಹೇಳತೀರದ್ದಾಗಿದ್ದು, ವಾಹನದ ಮಾಲೀಕರನ್ನು ಕಾಡುವ ಸ್ಥಿತಿಯಂತು ಯಾರಿಗೂ ಬೇಡದಂತಾಗಿದೆ.
ಸ್ವಯಂ ಲಾಕ್ಡೌನ್ಗೆ ನಿರ್ಧಾರ: ನಗರದಲ್ಲಿ ಮೊದಲು ಕ್ಷೌರಿಕರು ತಮ್ಮ ಅಂಗಡಿಗಳನ್ನು ಸ್ವಯಂ ಲಾಕ್ಡೌನ್ ಮಾಡಿಕೊಂಡ ನಂತರ, ಮುದ್ರಕರ ಸಂಘ, ಹಾರ್ಡ್ವೇರ್, ಗ್ಲಾಸ್& ಪ್ಲೈವುಡ್, ದಿನಸಿ ವರ್ತಕರು, ಗಿರವಿ, ಪಾದರಕ್ಷೆ ಅಂಗಡಿಯವರು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮತ್ತೆ ಕೆಲವರು ಸಂಜೆ 5 ರವರೆಗೆ ಕಾರ್ಯನಿರ್ವಹಿಸಿ ಮುಂದಿನ ಸಮಯದಲ್ಲಿ ಲಾಕ್ ಮಾಡುತ್ತಿದ್ದಾರೆ.
ಕೊರೊನಾದ ಅಬ್ಬರವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಮನೆಮನೆಯಲ್ಲಿ ರೋಗಿಗಳಾಗುವುದರಲ್ಲಿ ಸಂಶಯವಿಲ್ಲ. ಆದರೆ ಇದರ ಬಗ್ಗೆ ಸಾರ್ವಜನಿಕರಲ್ಲಿ ಸ್ವಯಂ ಅರಿವು ಮೂಡಬೇಕೋ, ಇಲ್ಲ ಸರಕಾರಿ ಅಧಿಕಾರಿಗಳು ಅವರಿಗೆ ಜಾಗೃತಿ ಮೂಡಿಸಬೇಕೊ ಎಂಬುದು ತಿಳಿಯದಾಗಿದೆ. ಸಾರ್ವಜನಿಕರಲ್ಲಿ ಸ್ವಯಂ ಅರಿವು ಮೂಡುವವರೆಗೆ ಕೊರೊನಾ ಕಟ್ಟಿಹಾಕುವುದಂತು ಕಷ್ಟಸಾಧ್ಯದ ಮಾತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
