ಕೊರೋನಾ ಹಿನ್ನೆಲೆ ಮಂಕಾದ ಹಬ್ಬದ ಭರಾಟೆ

ತುರುವೇಕೆರೆ

    ಕೊರೋನಾ ಸಂಕಷ್ಟಕ್ಕೆ ಸಿಲುಕಿ ತಾಲ್ಲೂಕಿನ ಜನತೆ ನಲುಗುತ್ತಿರುವ ಮಧ್ಯೆಯೇ ಗೌರಿ-ಗಣೇಶ ಹಬ್ಬ ಬಂದಿದ್ದು, ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದ ನಡುವೆಯೂ ಸಹ ಸಂಪ್ರದಾಯದಂತೆ ಹಬ್ಬ ಆಚರಣೆ ಸಲುವಾಗಿ ಮಂಗಳವಾರ ಪಟ್ಟಣದಲ್ಲಿ ಜನರು ಹಲವು ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.

   ಪ್ರತಿ ವರ್ಷದಂತೆ ಈ ಬಾರಿ ಗೌರಿ-ಗಣೇಶ ಹಬ್ಬ ಆಚರಣೆ ಅಷ್ಟೇನೂ ಹೆಚ್ಚಾಗಿ ಜನರಲ್ಲಿ ಕಂಡು ಬರುತ್ತಿಲ್ಲ. ಏನೋ ಸಂಪ್ರದಾಯ ಮಾಡಬೇಕು, ಮಾಡಿದರಾಯಿತು ಎಂಬಂತೆ ಮಾಡುತ್ತಿರುವುದನ್ನು ನೋಡಿದರೆ ಜನರಲ್ಲಿ ಆಸಕ್ತಿ ಕಡಿಮೆಯಾದಂತಿದೆ. ಹಿಂದಿನ ವರ್ಷಗಳಲ್ಲಿ ಗೌರಿ-ಗಣೇಶ ಹಬ್ಬ ಎಂದರೆ ಹಬ್ಬದ ಮುನ್ನಾ ದಿನ ಪಟ್ಟಣಕ್ಕೆ ಲಗ್ಗೆ ಇಡುತ್ತಿದ್ದರು. ಕೊಳ್ಳುವವರು-ಮಾರುವವರು ಕಿಕ್ಕಿರಿದು ಸೇರುತ್ತಿದ್ದು, ಕೊಳ್ಳುವವರಲ್ಲಿ ಏನೋ ಒಂದು ರೀತಿಯ ಹುಮ್ಮಸ್ಸು ಹುರುಪು ಕಾಣಬರುತ್ತಿತ್ತು. ಹೆಂಗಳೆಯರು ಬಾಗಿನ ಸಾಮಾನು ಕೊಂಡರೆ, ಗಂಡಸರು ಮನೆಗೆ ಬೇಕಾದ ಸಾಮನು-ಸರಂಜಾಮು ಖರೀದಿಸುತ್ತಿದ್ದರು. ಇನ್ನು ಹಳ್ಳಿಯ ಪಡ್ಡೆ ಹುಡುಗರು, ಮಕ್ಕಳಾದಿಯಾಗಿ ಗೌರಿ-ಗಣೇಶ ವಿಗ್ರಹಗಳನ್ನು ಕೊಳ್ಳಲು ಪಟ್ಟಣಕ್ಕೆ ಲಗ್ಗೆ ಇಡುತ್ತಿದ್ದರು. ಹಬ್ಬದ ಹಿಂದಿನ ದಿನ ಒಂದು ರೀತಿ ಪಟ್ಟಣದಲ್ಲಿ ಜಾತ್ರೆಯ ವಾತಾವರಣವೇನೋ ಎಂಬಂತೆ ಕಾಣ ಬರುತ್ತಿತ್ತು.

    ಸರಳ ಆಚರಣೆಗೆ ಸರ್ಕಾರ ಅನುಮತಿ: ಕೊರೋನಾ ಪ್ರಯುಕ್ತ ಸರ್ಕಾರದ ಪರಿಷ್ಕøತ ಮಾರ್ಗಸೂಚಿಯಂತೆ ಗೌರಿ-ಗಣೇಶ ಹಬ್ಬ ಸರಳವಾಗಿ ಆಚರಣೆಗೆ ಅವಕಾಶ ಕೊಟ್ಟಿದ್ದರೂ ಸಹ ಜನತೆ ನಿರಾಸಕ್ತಿ ತಾಳಿದಂತಿದೆ. ಆರ್ಕೆಷ್ಟ್ರಾ, ಡಿ.ಜಿ.ಸೌಂಡ್, ಪಟಾಕಿ, ಕುಣಿತ ಇವುಗಳನ್ನೆಲ್ಲ ಸರ್ಕಾರ ಕೊರೋನ ಪ್ರಯುಕ್ತ ನಿಷೇಧಿಸಿರುವುದರಿಂದ ಯುವಕರಲ್ಲಿ ಆಸÀಕ್ತಿ ಕಡಿಮೆಯಾಗಿದ್ದು, ಗೌರಿ-ಗಣೇಶ ವಿಗ್ರಹಗಳನ್ನು ಕೊಳ್ಳುವವರೆ ಇಲ್ಲದಂತಾಗಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪಟ್ಟಣದಲ್ಲಿ ಗಣಪತಿ ಮಾರಾಟ ಮಾಡುತ್ತಿದ್ದರೂ ಕೊಳ್ಳುವವರ ಸಂಖ್ಯೆ ಕ್ಷೀಣಿಸಿದೆ. ಸರ್ಕಾರ ಗ್ರಾಮಕ್ಕೊಂದು ಹಾಗೂ ಪಟ್ಟಣದಲ್ಲಿ ವಾರ್ಡ್‍ಗೊಂದರಂತೆ ಗಣಪತಿ ಪೂಜಿಸಲು ಅವಕಾಶ ಕಲ್ಪಿಸುವ ಜೊತೆಗೆ ಪರಿಸರ ಗಣಪತಿಗೆ ಹೆಚ್ಚು ಒತ್ತು ನೀಡುವಂತೆ ಆದೇಶಿಸಿದೆ.

   ಗಣಪತಿ ತಯಾರಕರ ಅಳಲು: ಮಣ್ಣಿನಿಂದ ಮಡಕೆ ಹಾಗೂ ಇತರೆ ವಸ್ತುಗಳನ್ನು ತಯಾರು ಮಾಡುವ ಕುಂಬಾರ ಸಮುದಾಯದವರೆ ಗಣಪತಿ ವಿಗ್ರಹಗಳನ್ನು ಮಾಡುವಲ್ಲಿ ಹೆಚ್ಚು ಅವಲಂಬಿತರಾಗಿದ್ದು, ಈ ಬಾರಿ ಕೊರೋನಾ ಹೊಡೆತ ಅವರಿಗೆ ಹೆಚ್ಚು ತಟ್ಟಿದೆ. ಮಣ್ಣಿನ ಗಡಿಗೆ, ಮಡಕೆ, ಹೂಜಿ ಮುಂತಾದ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಿದ್ದ ಕುಂಬಾರರು ಕೊರೋನಾಕ್ಕೆ ಸಿಲುಕಿ ಮಾರಾಟ ಮಾಡಲು ತಯಾರಿಸಿದ್ದ ಮಡಕೆ-ಕುಡಿಕೆಗಳು ಕೊಳ್ಳುವವರಿಲ್ಲದೆ ಮನೆ ಮುಂದೆ ರಾಶಿ ಇಟ್ಟುಕೊಂಡಿದ್ದು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ದಂಡಿನಶಿವರ, ಬಳ್ಳೆಕಟ್ಟೆ, ಹರಿಶಿಣದಹಳ್ಳಿ, ಅಕ್ಕಳಸಂದ್ರ ಸೇರಿದಂತೆ ಕೆಲವು ಗ್ರಾಮದ ಕುಂಬಾರ ಕುಟುಂಬಗಳು ಬೀದಿಗೆ ಬರುವಂತಾಗಿದೆ.

    ಗಣೇಶ ತಯಾರಕರಾದ ಕಲಾವಿದ ರಾಜಣ್ಣ ಮಾತನಾಡಿ, ಪ್ರತಿವರ್ಷ ವಿವಿಧ ಆಕರ್ಷಕ ಗಣಪತಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದು, ಈ ಬಾರಿ ಕೊರೋನಾದಿಂದ ಕೆಲವೇ ಗಣಪತಿ ತಯಾರಿಸಿದ್ದೇವೆ. ಅವುಗಳನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿಲ್ಲ. ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚು ಗಣಪತಿ ಮಾರಾಟವಾಗದ್ದರಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ ಎಂದು ಅಲವತ್ತುಕೊಂಡರು.

   ಅಗತ್ಯ ವಸ್ತುಗಳ ಬೆಲೆ ಏರಿಕೆ: ಕೊರೋನಾ ಸಂದರ್ಭದಲ್ಲಿ ಗೌರಿ-ಗಣೇಶ ಹಬ್ಬ ಆಚರಣೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಾಳೆಹಣ್ಣು ಕೆ.ಜಿ.ಗೆ 80 ರೂ. ನಿಂದ 100 ರೂ., ಹೂವು ಮಾರು 100 ರೂ., ಹಣ್ಣುಗಳು ಕೆ.ಜಿ 150 ರೂ.ಗಳಿಗೇರಿದ್ದು ಜನತೆ ಕೊಳ್ಳಲು ಹಿಂದು ಮುಂದು ಯೋಚಿಸುವಂತಾಗಿದೆ. ಗೌರಿ ಗಣೇಶನ ಹಬ್ಬಕ್ಕೆ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ನೀಡುವ ಸಲುವಾಗಿ ಸಂಪ್ರದಾಯದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲೇಬೇಕಾಗಿದೆ. ಆದರೆ ಈ ವರ್ಷ ಸಕಾಲಕ್ಕೆ ಮಳೆಯಾಗಿದ್ದರೂ ಸಹ ಕೊರೋನಾ ಭಯದಲ್ಲಿ ರೈತರು ಹಾಗೂ ಪಟ್ಟಣದ ಜನತೆ ಸಂಪ್ರದಾಯದಂತೆ ಇತ್ತ ಹಬ್ಬ ಆಚರಿಸಲೂ ಆಗದೆ, ಬಿಡಲೂ ಆಗದಂತ ಪರಿಸ್ಥಿತಿಯಲ್ಲಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link