ಬೆಂಗಳೂರು :
‘ನಮಗೆ ಜಾತಿಯನ್ನು ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ. ತನ್ನನ್ನು ಬೆಳೆಸಿದ ಪಕ್ಷಕ್ಕೆ ಮೋಸ ಮಾಡಿದ್ದು, ಹೆತ್ತ ತಾಯಿಗೆ ದ್ರೋಹ ಬಗೆದಿದ್ದಾರೆ. ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಶನಿವಾರ ಪ್ರಚಾರ ಮಾಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು, ‘ಈ ಚುನಾವಣೆ ಯಾವ ಕಾರಣಕ್ಕೆ ಬಂದಿದೆ? ಹಣ ಹಾಗೂ ಅಧಿಕಾರದ ಆಸೆಗೆ ಮತದಾರರಿಗೆ, ತನ್ನನ್ನು ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಇಲ್ಲಿನ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಡುತ್ತೇವೆ. ಕ್ಷೇತ್ರದ ಮತದಾರ ಬದಲಾವಣೆ ಬಯಸಿದ್ದು, ಇವರಿಗೆ ತಕ್ಕ ಪಾಠ ಕಲಿಸಲಿದ್ದಾನೆ ಎಂದರು.
ಕಷ್ಟಪಟ್ಟು ಪಕ್ಷ ಕಟ್ಟಿದ ಬಿಜೆಪಿ ಕಾರ್ಯಕರ್ತರು ನಾಯಕರಿಗೆ ಅಧಿಕಾರ ಇಲ್ಲ. ತಮ್ಮ ಮಾತೃ ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಡಿಯೂರಪ್ಪನವರು ಅಧಿಕಾರ ನೀಡಿದ್ದಾರೆ. ಕಳೆದೊಂದು ವರ್ಷದಿಂದ ಈ ಬಿಜೆಪಿ ಅಭ್ಯರ್ಥಿಯನ್ನು ಮನೆಯಲ್ಲಿ ಕೂರಿಸಿದ್ದರು. ಹೀಗಾಗಿ ಜನರ ಆಕ್ರೋಶಕ್ಕೆ ಹೆದರಿ ಯಡಿಯೂರಪ್ಪನವರು ಬಿಜೆಪಿ ನಾಯಕರು ಇಲ್ಲಿ ಪ್ರಚಾರಕ್ಕೆ ಬಂದಿಲ್ಲ ಎಂದರು.
ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಶಾಸಕರು ಬರಲು ಸಿದ್ಧವಾಗಿದ್ದಾರೆ ಎನ್ನುತ್ತಿದ್ದಾರೆ. ಅವರು ಆದಷ್ಟು ಬೇಗ ಆ ಕೆಲಸ ಮಾಡಲಿ. ತಡ ಮಾಡಬಾರದು. ಯಾರೆಲ್ಲ ಬರುತ್ತಾರೋ ಅವರನ್ನು ಕರೆದುಕೊಂಡು ಹೋಗಲಿ. ಒಂದಿಬ್ಬರು ಮಾತ್ರವಲ್ಲ ನಮ್ಮ ಪಕ್ಷದಲ್ಲಿರುವ ಎಲ್ಲರನ್ನು ಕರೆದುಕೊಂಡು ಹೋಗಲಿ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
