ತುಮಕೂರು
ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯುವಲ್ಲಿ ವಿವಿಧ ಅಧಿಕಾರಿಗಳ ಪಾತ್ರ ಬಹಳಷ್ಟಿದೆ. ಜೊತೆಗೆ ಮಾಧ್ಯಮದವರ ಸಹಕಾರದಿಂದ ಚುನಾವಣೆ ಉತ್ತಮವಾಗಿ ನಡೆದಿದೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಗಿದ್ದಂತಹ ಮತದಾನಕ್ಕಿಂತ ಈ ಬಾರಿ ಹೆಚ್ಚಾಗಿದೆ. ಈ ಬಾರಿ ದೇಶದೆಲ್ಲೆಡೆ ಮೋದಿ ಅಲೆಯಿದ್ದು ಚುನಾವಣೆಯಲ್ಲಿ ಗೆಲ್ಲುವುದು ಖಚಿತವಾಗಿದೆ. ನಾನು ಚುನಾವಣೆಯಲ್ಲಿ ಮೈತ್ರಿ ಪಕ್ಷದ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದೇನೆಯೆ ಹೊರತು ದೇವೇಗೌಡರ ವಿರುದ್ಧವಲ್ಲ. ನನಗೂ ಅವರಿಗೂ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ ಎಂದು ತಿಳಿಸಿದರು.
ಚುನಾವಣೆಗೆ ಮುಂಚೆ ಎಲ್ಲಾ ಮುಖಂಡರು, ಕಾರ್ಯಕರ್ತರು ಹಗಲು, ರಾತ್ರಿ ಎನ್ನದೆ, ಬಿಸಿಲನ್ನು ಸಹ ಲೆಕ್ಕಿಸಿದೆ ಭರ್ಜರಿಯಾಗಿ ಮತ ಯಾಚನೆ ಮಾಡಿದ್ದಾರೆ. ಅದರಂತೆಯೇ ಈ ಬಾರಿ ಮತದಾನದ ಶೇಕಡಾವಾರು ಪ್ರಮಾಣ ಕೂಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಅಮೇರಿಕಾದಲ್ಲಿ ಎಂಜಿನಿಯರ್ ಆಗಿರುವ ಸೌರವ್ಬಾಬು ಮಾತನಾಡಿ, ಭಾರತದಿಂದ ವಲಸೆ ಹೋಗಿ ಇತರೆ ದೇಶಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಅನೇಕ ಎನ್ಆರ್ಐಗಳು ತಮ್ಮ ಸ್ವಗ್ರಾಮಕ್ಕೆ ತೆರಳಿ ಮತದಾನ ಮಾಡಿದ್ದಾರೆ. ಈ ದೇಶದ ಅಭಿವೃದ್ಧಿಗೆ ಮೋದಿಯವರು ಪಡುತ್ತಿರುವ ಶ್ರಮಕ್ಕೆ ಬೆಂಬಲ ನೀಡುವ ಸಲುವಾಗಿ ವಿವಿಧ ರಾಷ್ಟ್ರಗಳಿಂದ ಭಾರತಕ್ಕೆ ಮರಳಿ ಬಂದು ಮತದಾನ ಮಾಡಿದ್ದಲ್ಲದೆ, ಇತರರಿಗೆ ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಆರ್.ಹುಲಿನಾಯ್ಕರ್, ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್, ಹೆಬ್ಬಾಕ ರವಿ, ಸಿ.ಎನ್.ರಮೇಶ್, ನಾಗರಾಜರಾವ್, ರುದ್ರೇಶ್, ರವೀಶ್ ಸೇರಿದಂತೆ ಇನ್ನಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/DSC_9583.gif)