ಮೂಡುಬಿದಿರೆ :
ದಿನೇದಿನೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಹಿತ ದೃಷ್ಠಿಯಿಂದ, ಪೋಷಕರಲ್ಲಿ ಆತಂಕದ ನಡುವೆ ಶಾಲೆಗಳನ್ನು ತರಾತುರಿಯಲ್ಲಿ ಪುನರಾರಂಭ ಮಾಡುವುದು ಸಮಂಜಸವಲ್ಲ. ಶಾಲೆಗಳ ಪುನರಾರಂಭಕ್ಕೆ ಆರು ತಿಂಗಳು ಅಥವಾ ಒಂದು ವರ್ಷ ತಡವಾದರೂ ದೇಶ ಮುಳುಗುವುದಿಲ್ಲ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಶಾಸಕ ಎಸ್. ಎಲ್. ಭೋಜೇಗೌಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಮಕ್ಕಳ ಆರೋಗ್ಯ ಬಹಳ ಮುಖ್ಯ. ಪರಿಸ್ಥಿತಿಯು ಸುಧಾರಿಸಿ, ಸಾರ್ವಜನಿಕ ವಲಯದಲ್ಲಿ ಆತಂಕ ದೂರವಾದ ಮೇಲೆ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಅಭಿಪ್ರಾಯ ಪಡೆದು ಮತ್ತೊಮ್ಮೆ ಚರ್ಚೆ ಮಾಡಬೇಕಾಗಿದೆ. ಶಾಲೆಗಳನ್ನು ಈಗಲೇ ಪ್ರಾರಂಭಿಸಬೇಕೆಂದು ತೀರ್ಮಾನ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಬಹಳ ದುಷ್ಪರಿಣಾಮಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಶಿಕ್ಷಣದಲ್ಲಿ ಮಕ್ಕಳ ಭವಿಷ್ಯ ಎಷ್ಟು ಮುಖ್ಯವೋ ಅದಕ್ಕಿಂತ ಮಕ್ಕಳ, ಶಿಕ್ಷಕರ ಆರೋಗ್ಯ ಹಾಗೂ ಪೋಷಕರ ಮನ ಶಾಂತಿ ಕೂಡ ಅಷ್ಟೇ ಮುಖ್ಯ. ಪ್ರತಿ ದಿನ ಶಿಕ್ಷಕರು ಆತಂಕದಲ್ಲಿ ಶಾಲೆಗೆ ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಇರುವ ಆತಂಕವನ್ನು ದೂರಮಾಡಬೇಕು,ಶಿಕ್ಷಕರು ಬಹಳ ನೆಮ್ಮದಿಯಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಗಳನ್ನು ಮಾಡುವ ಮುಖಾಂತರ ವಿದ್ಯಾರ್ಥಿಗಳ ಶಿಕ್ಷಕರ ಮತ್ತು ಪೋಷಕರ ಆರೋಗ್ಯವನ್ನು ಕಾಪಾಡಬೇಕು.ಶಾಲಾ ಕಾಲೇಜುಗಳಿಗೆ ಇಂತಹ ಸಂಧರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರವು ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
