ದಿನಬಳಕೆ ಪದಾರ್ಥಗಳ ಬೆಲೆ ಏರಿಕೆಯಾಗುವ ಆತಂಕ

ತುಮಕೂರು

     ಕೊರೊನಾ ಕಾರಣದಿಂದ ದೇಶವೇ ಲಾಕ್‍ಡೌನ್ ಆಗಿ ಬಹುತೇಕ ಎಲ್ಲಾ ವ್ಯಾಪಾರ ವಹಿವಾಟು ಅಸ್ತವ್ಯಸ್ತವಾಗಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದೆ. ವ್ಯಾಪಾರಸ್ಥರು, ರೈತರು, ಕೂಲಿ ಕಾರ್ಮಿಕರು, ಸಣ್ಣಪುಟ್ಟ ಉದ್ದಿಮೆಗಳು ವ್ಯವಹಾರವಿಲ್ಲದೆ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿವೆ. ಹೆಚ್ಚುಕಮ್ಮಿ ಅಸಹಾಯಕರಾಗಿ ಮನೆಯಲ್ಲಿ ಕೈಕಟ್ಟಿ ಕೂರುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ಸರ್ಕಾರಗಳೂ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ.

      ಕೈಗಾರಿಕೆ, ವ್ಯಾಪಾರ-ಉದ್ಯಮ ವಹಿವಾಟು ಆರಂಭವಾಗದೆ ಆರ್ಥಿಕ ಚಟುವಟಿಕೆ ವೃದ್ಧಿಯಾಗಲು ಸಾಧ್ಯವಿಲ್ಲ. ಲಾಕ್‍ಡೌನ್ ಮುಂದುವರೆದರೆ ಪರಿಸ್ಥಿತಿ ಇನ್ನಷ್ಟು ಆತಂಕಕಾರಿಯಾಗುತ್ತದೆ. ಆದರೇನು ಮಾಡುವುದು ವ್ಯವಹಾಕ್ಕಿಂತಾ ಜೀವ ಉಳಿಸಿಕೊಳ್ಳುವುದೇ ಮುಖ್ಯ ಎನ್ನುವಂತಾಗಿದೆ ಎಂದು ಕೈಗಾರಿಕೋದ್ಯಮಿ, ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್.ಜಗದೀಶ್ ಹೇಳುತ್ತಾರೆ.

     ಆದಾಯವಿಲ್ಲದೆ ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದಂತಾಗದೆ. ಕೊಳ್ಳುವ-ಮಾರುವ ವ್ಯವಸ್ಥೆ ಇಲ್ಲವಾದರೆ ಆರ್ಥಿಕ ವಹಿವಾಟು ನಡೆಯುವುದಿಲ್ಲ. ಸದ್ಯ ಸಂಘಸಂಸ್ಥೆಗಳು, ಸರ್ಕಾರ ಬಡವರಿಗೆ ಆಹಾರ ನಿಡುತ್ತಿರಬಹುದು. ಅಕ್ಕಿ, ಮತ್ತಿತರ ಆಹಾರಧಾನ್ಯ ಕೊಡುತ್ತಿರಬಹುದು. ಆದರೆ ಇದು ಎಷ್ಟ ದಿನ ಸಾಧ್ಯ? ಜನರ ಆದಾಯ ಮೂಲ ಇಲ್ಲದೆ ಬದುಕು ಸಾಧ್ಯವಿಲ್ಲ. ಲಾಕ್‍ಡೌನ್ ಅನ್ನು ಈಗ ಕೊನೆಗೊಳಿಸಿದರೂ ಎಲ್ಲರ ಸ್ಥಿತಿಗತಿಗಳು ಚೇತರಿಸಿಕೊಳ್ಳಲು ಕನಿಷ್ಟ ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಎಂದು ಹೇಳಿದರು.

     ಬ್ಯಾಂಕುಗಳಲ್ಲಿ ಸಾಲ ವಸೂಲಾಗುತ್ತಿಲ್ಲ. ಪಾವತಿಸಲು ಜನರಲ್ಲಿ ಹಣವೂ ಇಲ್ಲ, ಆದಾಯವೂ ಇಲ್ಲ. ಬ್ಯಾಂಕುಗಳು ಕಷ್ಟದಲ್ಲಿವೆ. ಸಬ್‍ರಿಜಿಸ್ಟ್ರಾರ್ ಕಚೇರಿ ಬಂದ್ ಆಗಿ ಯಾವುದೇ ನೊಂದಣಿ ಆಗುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಮಾರುವ, ಕೊಳ್ಳುವ ವ್ಯವಹಾರವೂ ನಿಂತಿದೆ. ಸಬ್‍ರಿಜಿಸ್ಟ್ರಾರ್ ಕಚೇರಿ ಸೇವೆಯನ್ನು ಆರಂಭ ಮಾಡಬೇಕು. ಇದರಿಂದ ಸರ್ಕಾರಕ್ಕೂ ಆದಾಯವಿದೆ, ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದು ಎನ್.ಆರ್. ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

     ಉದ್ದಿಮೆಗಳು ಮುಚ್ಚಿಹೋಗಿವೆ. ಈ ಪರಿಸ್ಥಿತಿಯಲ್ಲಿ ನೌಕರರಿಗೆ, ಕಾರ್ಮಿಕರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಸಂಬಳ ಕೊಡಬೇಕು ಎಂದು ಸರ್ಕಾರ ಹೇಳಿದೆ, ಉದ್ದಿಮೆದಾರರು ಎಲ್ಲಿಂದ ತಂದುಕೊಡುತ್ತಾರೆ, ಅವರಿಗೆ ವಹಿವಾಟು ನಡೆದರಲ್ಲವೆ ಸಂಬಳ ಕೊಡಲಾಗುವುದು ಎಂದರು.ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಘೋಷಣೆಯಾಗಿರುವ ಲಾಕ್‍ಡೌನ್‍ನಿಂದಾಗಿ ಕೃಷಿ, ಕೈಗಾರಿಕೆ, ವ್ಯಾಪಾರ ವಹಿವಾಟು ಸಂಪೂರ್ಣ ನಿಂತು ಹೋಗಿವೆ. ರೈತರು ಬೆಳೆದ ಆಹಾರಧಾನ್ಯ, ಹಣ್ಣು, ತರಕಾರಿ, ಹೂವುನ್ನು ಮಾರುಕಟ್ಟೆಗೆ ತರಲಾಗದೆ ಜಮೀನಿನಲ್ಲೇ ನಾಶವಾಗುತ್ತಿವೆ.

      ತಮ್ಮ ಬದುಕಿಗೆ ಇದನ್ನೇ ನಂಬಿಕೊಂಡಿದ್ದ ರೈತರು ಕಂಗಾಲಾಗಿದ್ದಾರೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯದಿದ್ದರೆ ಅದು ಕೇವಲ ರೈತರಿಗೆ ಮಾತ್ರವಲ್ಲ, ಇಡೀ ರಾಜ್ಯ, ದೇಶಕ್ಕೆ ಆಗುವ ನಷ್ಟ. ಮೊದಲು ಸರ್ಕಾರ ರೈತರ ಉತ್ಪನ್ನಗಳು ಮಾರಾಟವಾಗಲು ಮೊದಲ ಆದ್ಯತೆ ನೀಡಬೇಕು. ಆ ಮೂಲಕ ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      ರೈತರ ನಂತದ ದೇಶದ ಪ್ರಮುಖ ದುಡಿಯುವ ವರ್ಗ ಕಾರ್ಮಿಕರು. ಅದರಲ್ಲೂ ಕೂಲಿ ಕಾರ್ಮಿಕರ ಹಿತ ಕಾಯುವುದು ಸರ್ಕಾರದ ಆದ್ಯ ಕರ್ತವ್ಯ. ಕೂಲಿ ಅರಸಿ ಬಂದ ಕಾರ್ಮಿಕರು, ಲಾಕ್‍ಡೌನಿಂದಾಗಿ ಕೂಲಿ ವಂಚಿತರಾಗಿ ಅಸಹಾಯಕರಾಗಿ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಬಸ್ಸುಗಳಿಲ್ಲದೆ ನಡೆದು ಹೋಗುತ್ತಿದ್ದಾರೆ. ಹಲವರಿಗೆ ಮಾರ್ಗ ಮಧ್ಯೆ ಸರ್ಕಾರ ತಾತ್ಕಾಲಿಕ ಆಶ್ರಯ ನೀಡಿದೆ. ಆದರೆ, ವಲಸೆ ಕೂಲಿ ಕಾರ್ಮಿಕರನ್ನು ಅವರ ಊರುಗಳಿಗೆ ಸುರಕ್ಷಿತವಾಗಿ ತಲುಪಿಸುವ ಇಲ್ಲವೇ, ಅವರು ಇರುವ ಸ್ಥಳದಲ್ಲೇ ಪುನರ್ವಸತಿ ಕಲ್ಪಿಸುವ ಕೆಲಸ ಆಗಬೇಕಾಗಿತ್ತು. ರೈತರು, ಕೂಲಿ ಕಾರ್ಮಿರಿಲ್ಲದೆ ಯಾವುದೇ ಆರ್ಥಿಕ ಚಟುವಟಿಕೆ ನಡೆಯಲು ಸಾಧ್ಯವಿಲ್ಲ ಎಂದರು.

     ಈಗಾಗಲೇ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಉದ್ದಿಮೆಗಳು ಅರ್ಧದಷ್ಟು ವೇತನ ನೀಡಬೇಕು ಎಂದು ಸರ್ಕಾರ ಹೇಳಿದೆ. ಇದರ ಜೊತೆಗೆ ಕೈಗಾರಿಕೋದ್ಯಮಿಗಳು ಬ್ಯಾಂಕಿನಿಂದ ಪಡೆದ ಸಾಲ ಮರುಪಾವತಿ, ಕನಿಷ್ಟ ವಿದ್ಯುತ್ ಬಿಲ್ ಪಾವತಿ ಮಾಡುವುದು ಹೇಗೆ ಎನ್ನುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಮಾಜಿ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ;

     ಲಾಕ್‍ಡೌನ್ ಅವಧಿಯನ್ನು ಕಾರ್ಮಿಕರ ಸಿಕ್ ಲೀವ್ ಎಂದು ಪರಿಗಣಿಸಿ ಇಎಸ್‍ಐ ಮೂಲಕ ಪರಿಹಾರ ನೀಡಬೇಕು. ಕೈಗಾರಿಕೆಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಕನಿಷ್ಟ ಆರು ತಿಂಗಳ ಕಾಲ ಕೈಗಾರಿಕೆಗಳಿಗೆ ಪಡೆದ ಬ್ಯಾಂಕ್ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಕೈಗಾರಿಕೋದ್ಯಮಿಗಳು ಸ್ವಾಗತಿಸಿದ್ದಾರೆ ಎಂದು ಹೆಚ್.ಟಿ.ಚಂದ್ರಶೇಖರ್ ಹೇಳಿದರು.

    ಸರ್ಕಾರ ಲಾಕ್‍ಡೌನ್ ಸಡಿಲಿಸಿ ಶೇಕಡ 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾರ್ಖಾನೆ ಚಾಲನೆ ಮಾಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ, ಹೀಗಾದರೆ, ಇದೊಂದು ಆಶಾದಾಯಕ ಬೆಳವಣಿಗೆ ಎಂದರು.ಲಾಕ್‍ಡೌನ್ ಅವಧಿಯಲ್ಲಿ ದಿನ ಬಳಕೆ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ ಎಂದು ಜನ ಆತಂಕ ಪಟ್ಟಿದ್ದಾರೆ, ಆದರೆ ಅಂತಹ ಸಂದರ್ಭ ಸದ್ಯಕ್ಕೆ ಬರುವುದಿಲ್ಲ, ಸಾಕಷ್ಟು ಸರಕು ಬರುತ್ತಿದೆ, ವಹಿವಾಟೂ ನಡೆಯುತ್ತಿದೆ ಎಂದು ತುಮಕೂರು ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಜಿ.ಹೆಚ್.ಪರಮಶಿವಯ್ಯ ಹೇಳಿದರು.

     ಲಾಕ್‍ಡೌನ್ ಸಮಯದಲ್ಲಿ ಆಹಾರ ಸಾಮಗ್ರಿ ಸರಕು ಸಾಕಾಣಿಕೆಗೆ ಸರ್ಕಾರ ಅವಕಾಶ ನೀಡಿದೆ, ರೈತರು ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ಅವಕಾಶವಿದೆ. ಹೀಗಾಗಿ, ದಿನಸಿ ಹಾಗೂ ತರಕಾರಿಗೆ ಯಾವುದೂ ತೊಂದರೆ ಆಗುವುದಿಲ್ಲ, ಅಭಾವವೂ ಉಂಟಾಗುವುದಿಲ್ಲ. ಜೊತೆಗೆ ದಿನಬಳಕೆ ಪದಾರ್ಥ ವ್ಯಾಪಾರಕ್ಕೂ ತೊಂದರೆಯಾಗಿಲ್ಲ ಎಂದರು.

     ತುಮಕೂರಿನ ಮಂಡಿಪೇಟೆಯಲ್ಲಿ ಪ್ರತಿ ದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿ ತೆರೆದು ವ್ಯಾಪಾರ ಮಾಡಲು ಧಾನ್ಯ ವರ್ತಕರ ಸಂಘ ನಿರ್ಧಾರ ಮಾಡಿದೆ. ಈ ನಿರ್ಧಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಮಂಡಿಪೇಟೆಯಲ್ಲಿ ದಿನಸಿ ಅಂಗಡಿಗಳ ಜೊತೆಗೆ ಗೊಬ್ಬರದ ಅಂಗಡಿಗಳು, ಕೃಷಿ ಉಪಕರಣಗಳ ಅಂಗಡಿಗಳು, ಬೋರ್‍ವೆಲ್ ರಿಪೇರಿ ಅಂಗಡಿಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಅಂಗಡಿಗಳ ಬಳಿ ಐದು ಜನರಿಗಿಂತಾ ಹೆಚ್ಚು ಸೇರಿ ಜನಜಂಗುಳಿ ಆಗದಂತೆ ವ್ಯಾಪಾರಸ್ಥರು ಎಚ್ಚರವಹಿಸಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನುಅನುಸರಿಸಬೇಕು. ಉಲ್ಲಂಘನೆ ಮಾಡಿ, ಪೊಲೀಸರು ಕ್ರಮ ತೆಗೆದುಕೊಂಡರೆ ನೀವೇ ಜವಾಬ್ದಾರಿ ಎಂದು ವರ್ತಕರಿಗೆ ತಿಳಿಸಿರುವುದಾಗಿ ಜಿ.ಹೆಚ್.ಪರಮಶಿವಯ್ಯ ತಿಳಿಸಿದರು.

     ಉಚಿತವಾಗಿ ಹಾಲನ್ನು ವಿತರಣೆ ಮಾಡುವುದು ಸರಿಯಲ್ಲ, ಇದರಿಂದ ಕೆಲವರು ಹಾಲನ್ನು ಸಂಗ್ರಹಿಸಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ಉಚಿತವಾಗಿ ನಿಡುವ ಬದಲು ಸ್ವಯಂಸೇವಕರ ಮೂಲಕ ಪ್ರತಿ ಮನೆಗೆ ಕನಿಷ್ಟ ದರದಲ್ಲಿ ಹಾಲು ವಿತರಣೆ ಮಾಡಲು ಕೆಎಂಎಫ್ ಹಾಗೂ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು. ಯಾವುದನ್ನೂ ಉಚಿತವಾಗಿ ಕೊಡಬಾರದು, ಆದರೆ ಕಷ್ಟ ಕಾಲದಲ್ಲಿ ರಿಯಾಯಿತಿ ಬೆಲೆಯಲ್ಲಿ ಕೊಟ್ಟು ನೆರವಾಗಲಿ ಎಂದರು.

     ಬಹುತೇಕ ಎಲ್ಲಾ ಅಂಗಡಿಗಳಲ್ಲೂ ದಿನ ಬಳಕೆ ವಸ್ತುಗಳ ದಾಸ್ತಾನು ಖಾಲಿಯಾಗುತ್ತಾ ಬಂದಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಸರಕು ತರಿಸಿಕೊಳ್ಳಲು ಸಾಗಾಣಿಕೆಯ ಸಮಸ್ಯೆ ಇದೆ. ಜೊತೆಗೆ ಕಾರ್ಖಾನೆ ಹಂತದಲ್ಲೇ ಈಗ ಬೆಲೆ ಏರಿಕೆ ಮಾಡಲಾಗಿದೆ ಎಂದು ನಗರದ ಮಂಡಿಪೇಟೆಯ ನಂಜುಂಡೇಶ್ವರ ಟ್ರೇಡರ್ಸ್‍ನ ಆರ್.ಎನ್.ನಾಗೇಂದ್ರ ಹೇಳುತ್ತಾರೆ.

      ಸ್ಥಳೀಯ ಉತ್ಪನ್ನಗಳು ಇಲ್ಲಿ ದೊರೆಯಬಹುದು ಆದರೆ, ಗುಣಪಟ್ಟದ ಪದಾರ್ಥಗಳನ್ನು ತರಿಸಿ ಮಾರಾಟ ಮಾಡುವುದು ಕಷ್ಟವಾಗಿದೆ. ಬೀದರ್, ಗುಲ್ಬರ್ಗ, ರಾಯಚೂರಿನಿಂದ ತರಿಸಿಕೊಳ್ಳಲಾಗುತ್ತಿದ್ದ ತೊಗರಿ ಬೇಳೆ ಇನ್ನಿತರ ಪದಾರ್ಥ ತರಲು ಲಾಕ್‍ಡೌನ್‍ನಿಂದಾಗಿ ಸಾಗಾಣಿಕೆ ತೊಂದರೆಯಾಗಿದೆ. ಮುಂಬೈ, ರಾಜಸ್ಥಾನ, ಮಧ್ಯಪ್ರದೇಶದಿಂದ ಹೆಸರುಕಾಳು ಮತ್ತಿತರ ಪದಾರ್ಥಗಳನ್ನು ತರಿಸಲಾಗುತ್ತಿಲ್ಲ. ಅಲ್ಲಿನ ಅನೇಕ ಕಾರ್ಖಾನೆಗಳು ಬಂದ್ ಆಗಿರುವುದು ಕೂಡಾ ಈ ಸಮಸ್ಯೆಗೆ ಕಾರಣವಾಗಿದೆ. ಬೆಂಗಳೂರು ಎಪಿಎಂಸಿಯಲ್ಲಿ ಬೆಲೆ ವಿಚಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಆವರು ಬಾಯಿಗೆ ಬಂದಷ್ಟು ಬೆಲೆ ಹೇಳುತ್ತಾರೆ. ಆ ಬೆಲೆಯಲ್ಲಿ ಖರೀದಿ ಮಾಡಿ ತಂದು ನಾವು ಗ್ರಾಹಕರಿಗೆ ಮಾರಾಟ ಮಾಡಲು ಕಷ್ಟವಾಗುತ್ತದೆ ಎಂದರು.

     ಬಹುತೇಕ ಎಲ್ಲಾ ಪದಾರ್ಥಗಳದ್ದೂ ಇದೇ ಸ್ಥಿತಿ ಇದೆ. ಲಾಕ್‍ಡೌನ್ ಮುಂದುವರೆದರೆ ಎಲ್ಲಾ ವಸ್ತುಗಳ ಬೆಲೆ ದುಬಾರಿ ಆಗುವ ಸಾಧ್ಯತೆಗಳಿವೆ. ಸಾಗಾಣಿಕೆ ನಿರ್ಬಂಧ, ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಂಡರಷ್ಟೇ ಸಾಧ್ಯ ಇಲ್ಲವಾದರೆ, ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೂ ತೊಂದರೆಯಾಗುತ್ತದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link