ಚಳ್ಳಕೆರೆ
ಮುಂಬರುವ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಮಾದಿಗ ಸಮುದಾಯದ ಸ್ಥಳೀಯ ಅಭ್ಯರ್ಥಿಯಾದ ಕಳೆದ ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಕಳೆದ 2009ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಯುವ ಮುಖಂಡ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿಯವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ಮಾದಿಗ ಯುವ ಸೇನೆ ಆಗ್ರಹ ಪಡಿಸಿದೆ.
ಇಲ್ಲಿನ ಛೇಂಬರ್ ಆಫ್ ಕಾರ್ಮಸ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಾದಿಗ ಯುವ ಸೇನೆ ಸಭೆಯಲ್ಲಿ ಈ ಆಗ್ರಹವನ್ನು ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ವರಿಷ್ಠರಿಗೂ ಸಹ ಈ ಬಗ್ಗೆ ವಿಶೇಷ ಮನವಿ ಮಾಡಲಾಗಿದೆ ಎಂದು ಯುವ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಪ್ಪ ತಿಳಿಸಿದ್ಧಾರೆ.
ಸಭೆಯಲ್ಲಿ ಮಾತನಾಡಿದ ಅವರು, ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ನಿರಂತರವಾಗಿ ಕಾಂಗ್ರೆಸ್ ಪಕ್ಷದಲ್ಲೇ ಹಲವಾರು ಹುದ್ದೆಗಳನ್ನು ಹಂತ ಹಂತವಾಗಿ ಅಲಂಕರಿಸಿ ಸಂಘಟನಾ ಶಕ್ತಿಯಾಗಿ ರೂಪುಗೊಂಡಿದ್ಧಾರೆ. ಈ ಹಿಂದೆ ಸ್ಪರ್ಧಿಸಿದ್ದ ಅವರು, ಕೇವಲ ಅಲ್ಪ ಮತಗಳಿಂಂದ ಸೋಲು ಅನುಭವಿಸಿದ್ದು, 2014ರ ಲೋಕಸಭಾ ಚುನಾವಣೆಯಲ್ಲೂ ಸಹ ಅವರಿಗೆ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಪ್ರಸ್ತುತ 2019ರ ಲೋಕಸಭಾ ಚುನಾವಣೆಯಲ್ಲಿ ಡಾ.ಜಿ.ತಿಪ್ಪೇಸ್ವಾಮಿಯವರಿಗೆ ಅವಕಾಶ ಮಾಡಿಕೊಡುವಂತೆ ಅವರ ಕಾಂಗ್ರೆಸ್ ಪಕ್ಷದ ನೇತಾರರನ್ನು ಒತ್ತಾಯಿಸಿದ್ದಾರೆ.
ಮಾದಿಗ ಯುವ ಸೇನಾ ಜಿಲ್ಲಾ ಕಾರ್ಯದರ್ಶಿ ಎಂ.ಸುರೇಶ್ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟವಾದ ಅನುಭವವನ್ನು ಹೊಂದಿರುವ ಪ್ರಭಾವಿ ರಾಜಕಾರಣಿಯಾದ ಡಾ.ಬಿ.ತಿಪ್ಪೇಸ್ವಾಮಿ ಈ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ವ್ಯಕ್ತಿಯಾಗಿದ್ಧಾರೆ. ಈಗಾಗಲೇ ನಿರಂತರವಾಗಿ ಕ್ಷೇತ್ರದ ಮಾದಿಗ ಸಮುದಾಯದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ಧಾರೆ. ಎಲ್ಲಾ ಸಮುದಾಯದ ವಿಶ್ವಾಸವನ್ನು ಗಳಿಸಿದ್ದು, ಕಾಂಗ್ರೆಸ್ ಪಕ್ಷ ಇವರನ್ನು ಈ ಬಾರಿಯ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವರು. ಈ ಬಾರಿಯ ಈ ಕ್ಷೇತ್ರದ ಲೋಕಸಭಾ ಚುನಾವಣೆ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಹೆಚ್ಚು ಪ್ರತಿಷ್ಠೆಯಾಗಿದ್ದು, ಕಾಂಗ್ರೆಸ್ ವರಿಷ್ಟರು ಈ ಬಗ್ಗೆ ಚಿಂತಿಸಿ ಕಾಯೋನ್ಮುಖರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿ.ವೆಂಕಟೇಶ್, ಎಸ್.ರುದ್ರಮುನಿಯಪ್ಪ, ಪೆನ್ನಪ್ಪ, ಬೋರಯ್ಯ, ರಮೇಶ್, ಎಂ.ಸುರೇಶ್, ಆರ್.ಮಹಂತೇಶ್, ಎಸ್.ಮಲ್ಲಪ್ಪ, ಬಿ.ರಾಜಪ್ಪ, ರಾಮಣ್ಣ, ಎಚ್.ಮಹಂತೇಶ್ ಮುಂತಾದವರು ಸಭೆಯಲ್ಲಿ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿಯವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
