ಬೆಂಗಳೂರು
ಅಧಿಕಾರಕ್ಕೆ ಬಂದ ಕೂಡಲೇ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ಸರ್ಕಾರದ ನಿರ್ಧಾರದ ವಿರುದ್ದ ವಿಧಾನಸಭೆಯಲ್ಲಿಂದು ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ.ಬೆಳಿಗ್ಗೆ ಸದನ ಸೇರುತ್ತಿದ್ದಂತೆಯೇ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ವಿಧಾನ ಪೂರ್ಣಗೊಂಡಿತಲ್ಲದೆ ಬಿಜೆಪಿಯ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಜಾಗದಲ್ಲಿ ಪ್ರತಿಷ್ಟಾಪಿತರಾದರು.
ತದ ನಂತರ ಮುಖ್ಯಮಂತ್ರಿಗಳು,ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಸದನದ ಹಲವರು ನೂತನ ಸ್ಪೀಕರ್ಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ನಂತರ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಮಾತನಾಡಿ ಸದನಕ್ಕೆ ಧನ್ಯವಾದ ಸಲ್ಲಿಸಿದರು.ಆನಂತರ ಸದನವನ್ನು ಮುಂದೂಡಲು ಅವರು ಸಜ್ಜಾದಾಗ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಎದ್ದು ನಿಂತು:ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಲು ನೂತನ ಸರ್ಕಾರ ನಿರ್ಧರಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅವರು ಹೀಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದನದಿಂದ ಹೊರನಡೆದರಾದರೆ ಸಿದ್ಧರಾಮಯ್ಯ ಮಾತ್ರ:ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಲು ಕೈಗೊಂಡ ತೀರ್ಮಾನ ತಪ್ಪು ಎಂದರು.ಈ ಹಂತದಲ್ಲಿ ಸದನದಲ್ಲಿದ್ದ ಕಾಂಗ್ರೆಸ್ ಸದಸ್ಯರು ಮೇಲೆದ್ದು ನಿಂತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ನಡೆಸಲಾಗುತ್ತಿದ್ದ ಟಿಪ್ಪುಜಯಂತಿಯನ್ನು ರದ್ದುಪಡಿಸಿದ ನೂತನ ಸರ್ಕಾರದ ಕ್ರಮವನ್ನು ಖಂಡಿಸಿದರು.
ಆದರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ:ಈ ವಿಷಯ ಪ್ರಸ್ತಾಪವಾಗುತ್ತಿದೆ ಎಂದು ಯಾರಿಗೂ ಗೊತ್ತಿರಲಿಲ್ಲ.ಹಾಗೆಯೇ ಇದನ್ನು ಪ್ರಸ್ತಾಪ ಮಾಡುವ ಕುರಿತು ನನ್ನ ಗಮನಕ್ಕೂ ನೀವು ತಂದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಹೇಳಿದರು.
ಸಭೆಯ ನಿಯಮಾವಳಿಗಳ ಪ್ರಕಾರ ನೀವು ಈ ವಿಷಯದ ಕುರಿತು ಮಾತನಾಡುವುದಿದ್ದರೆ ನನ್ನ ಗಮನಕ್ಕೆ ತರಬೇಕಿತ್ತು .ಆದರೆ ತಂದಿಲ್ಲ.ಅದೇ ರೀತಿ ವಿಷಯ ಗೊತ್ತಿಲ್ಲದೆ ಇರುವುದರಿಂದ ಸರ್ಕಾರದ ಪರಿವಾಗಿಯೂ ಯಾರು ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದರು .ಆದರೆ ಇದನ್ನು ಒಪ್ಪದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು:ಈ ಸದನದಲ್ಲಿ ನಾನು 83 ರಿಂದ ಕೆಲಸ ಮಾಡುತ್ತಿದ್ದೇನೆ.ಇಲ್ಲಿ ಪ್ರಸ್ತಾಪವಾಗುವ ಪ್ರತಿಯೊಂದು ವಿಷಯವನ್ನು ಸ್ಪೀಕರ್ ಗಮನಕ್ಕೆ ತಂದೇ ಪ್ರಸ್ತಾಪ ಮಾಡಬೇಕು ಎಂದೇನಿಲ್ಲ ಅಂತ ಅಭಿಪ್ರಾಯ ಪಟ್ಟರು.
ವಿಷಯ ಗಂಭೀರವಾದುದು.ಹೀಗಾಗಿ ಇಂದೇ ಈ ವಿಷಯವನ್ನು ಪ್ರಸ್ತಾಪ ಮಾಡಬೇಕಿದೆ.ಇದನ್ನು ಪ್ರಸ್ತಾಪ ಮಾಡುವಾಗ ಮುಖ್ಯಮಂತ್ರಿಗಳು ಕಡ್ಡಾಯವಾಗಿ ಇರಬೇಕು ಎಂದು ನೀವು ಹೇಳಬೇಕು.ಆದರೆ ಈ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದನ್ನು ಬಿಟ್ಟರೆ ಒಬ್ಬ ಸಚಿವರೂ ಇಲ್ಲ.
ಹೀಗಾಗಿ ಈ ವಿಷಯವನ್ನು ನಾವು ಯಾರ ಬಳಿ ಹೇಳಬೇಕು?ಎಂದವರು ಪ್ರಶ್ನಿಸಿದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು,ಯಡಿಯೂರಪ್ಪ ಅವರು ಎಲ್ಲಿಗೆ ಹೋಗುತ್ತಾರೆ ಎಂಬುದು ನಿಮಗೆ ತಿಳಿದಿದೆ.ಅಂತ್ಯಸಂಸ್ಕಾರವೊಂದರಲ್ಲಿ ಭಾಗವಹಿಸಲು ಅವರು ಚಿಕ್ಕಮಗಳೂರು ಜಿಲ್ಲೆಗೆ ತೆರಳಬೇಕಿದೆ ಎಂದು ಹೇಳಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ:ನಾವು ಕೂಡಾ ತೆರಳಬೇಕಿದೆ.ಹೀಗಾಗಿ ಇಲ್ಲೇ ಕುಳಿತು ಪ್ರತಿಪಕ್ಷಗಳ ಪ್ರಸ್ತಾಪವನ್ನು ಕೇಳಿ ಎಂದು ನೀವು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಬೇಕಿತ್ತು ಎಂದು ಒತ್ತಾಯಿಸಿದರು.ಆದರೆ ಸಿದ್ಧರಾಮಯ್ಯ ಅವರ ಮಾತನ್ನು ಒಪ್ಪದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಿ ಹೊರನಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
