ಹುಳಿಯಾರು
ರಾಜ್ಯ ಹೆದ್ದಾರಿ ಹುಳಿಯಾರು-ತಿಪಟೂರು ರಸ್ತೆಯ ಹರೇನಹಳ್ಳಿ ಗೇಟ್ನಿಂದ ಶೆಟ್ರುಕಟ್ಟೆ ಗೇಟ್ ವರೆಗಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಪರಿಣಾಮ ಗುಂಡಿಯನ್ನೇನೋ ಮುಚ್ಚಿದರು ಆದರೆ ಕಾಟಚಾರಕ್ಕೆ ಎನ್ನುವಂತೆ ಮುಚ್ಚಿದ್ದಾರೆ.
ಹುಳಿಯಾರು-ತಿಪಟೂರು ರಸ್ತೆಯು ದಶಕಗಳಿಂದ ಸರಿಯಾದ ನಿರ್ವಹಣೆಯಿಲ್ಲದೆ ಗುಂಡಿ ಬಿದ್ದು ಸುಗಮ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದ ಪರಿಣಾಮ ಇತ್ತೀಚೆಗೆ ಗುಂಡಿ ಮುಚ್ಚುವ ಕಾರ್ಯ ಮಾಡಲಾಯಿತು.
ಹುಳಿಯಾರಿನಿಂದ ಹರೇನಹಳ್ಳಿ ಗೇಟ್ವರೆವಿಗೂ, ಶೆಟ್ರುಕಟ್ಟೆ ಗೇಟ್ನಿಂದ ಮತ್ತಿಘಟದವರೆವಿಗೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ್ದಾರೆ. ಆದರೆ ಹರೇನಹಳ್ಳಿ ಗೇಟ್ನಿಂದ ಶೆಟ್ರುಕಟ್ಟೆ ಗೇಟ್ವರೆವಿಗೆ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯಿಸಿದ್ದಾರೆ.ಪರಿಣಾಮ ರಸ್ತೆಯ ಗುಂಡಿಗಳು ದಿನದಿಂದ ದಿನಕ್ಕೆ ಹೆಚ್ಚಾಗುವ ಜೊತೆಗೆ ಗುಂಡಿಯಿಂದ ಹೊರಬರುತ್ತಿರುವ ಜಲ್ಲಿಕಲ್ಲುಗಳು ವಾಹನ ಸವಾರರ ಸುಗಮ ಸಂಚಾರಕ್ಕೆ ತೊಡಕ್ಕುಂಟು ಮಾಡುತ್ತಿವೆ. ಬೈಕ್ ಸವಾರರ ಗುಂಡಿ, ಕಲ್ಲು ತಪ್ಪಿಸಲು ಹೋಗಿ ಬಿದ್ದ ನಿದರ್ಶನಗಳಿವೆ.
ಹಾಗಾಗಿ ಈ ರಸ್ತೆಯ ನಿರ್ವಹಣೆಯ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಅಧಿಕಾರಿಗಳು ತಕ್ಷಣ ಈ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಇಲ್ಲಿನ ಗ್ರಾಪಂ ಮಾಜಿ ಅಧ್ಯಕ್ಷ ಆನಚಿದ್ ಅವರು ಒತ್ತಾಯಿಸಿದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಪರಿಣಾಮ ಪತ್ರಿಕೆಯ ವರದಿ ದಿನವೇ ರಾತ್ರೋರಾತ್ರಿ ಗುಂಡಿಗಳನ್ನು ಮುಚ್ಚಿದರಾದರೂ ಡಾಂಬರ್ ಹಾಕದೆ ವೆಟ್ ಮಿಕ್ಸ್ ಮಾತ್ರ ಹಾಕಿ ಕೈ ತೊಳೆದುಕೊಂಡಿದ್ದಾರೆ. ಪರಿಣಾಮ ಭಾರಿ ವಾಹನಗಳು ಈ ರಸ್ತೆಯಲ್ಲಿ ಓಡಾಡಿ ವೆಟ್ ಮಿಕ್ಸ್ನ ಜಲ್ಲಿಕಲ್ಲು ಗುಂಡಿಗಳಿಂದ ಮೇಲೆದ್ದು ದ್ವಿಚಕ್ರವಾಹನಗಳ ಓಡಾಟಕ್ಕೆ ತೊಡಕುಂಟು ಮಾಡುತ್ತಿದೆ.
ಗುಂಡಿಗಳಿಂದ ಮೇಲೆದ್ದ ಜಲ್ಲಿಕಲ್ಲುಗಳು ರಸ್ತೆ ತುಂಬ ಹರಡಿಕೊಂಡಿದ್ದು ವಾಹನಗಳು ಓಡಾಡುವಾಗ ದಾರಿಹೋಕರಿಗೆ ಸಿಡಿದು ಪ್ರಾಣಾಪಾಯ ಆಗುವ ಸಾಧ್ಯತೆಗಳಿವೆ. ಅಲ್ಲದೆ ಕೆಲ ಗುಂಡಿಗಳಿಗೆ ತುಂಬಿದ್ದ ವೆಟ್ ಮಿಕ್ಸ್ ಪೂರ್ತಿ ಮೇಲೆದ್ದು ಮೊದಲಿನಂತೆ ಗುಂಡಿಗಳಾಗಿದ್ದು ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತದೆ. ಹಾಗಾಗಿ ತಕ್ಷಣ ಡಾಂಬರ್ ಹಾಕಿ ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ