ದಾವಣಗೆರೆ:
ಮಾನಸಿಕ ಸ್ಥೈರ್ಯ, ಶ್ರದ್ಧೆ ಹಾಗೂ ಏಕಾಗ್ರತೆ ಮನುಷ್ಯನಲ್ಲಿರುವ ಆತಂಕವನ್ನು ದೂರ ಮಾಡಲಿದೆ ಎಂದು ಸಾಣೇಹಯಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ ಶ್ರೀಶಿವಕುಮಾರ ರಂಗಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸದ ನಿಮಿತ್ತ ಏರ್ಪಡಿಸಿದ್ದ `ಧ್ಯಾನ, ಮೌನ, ಪ್ರಾರ್ಥನೆ, ಚಿಂತನಾ’ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಣ್ಣ-ಸಣ್ಣ ಕಾರಣಗಳಿಗಾಗಿ ಆತಂಕಕ್ಕೊಳಗಾಗುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ. ನಮ್ಮೊಳಗಡೆ ಇರುವ ಇಂಥ ಆತಂಕಕ್ಕೆ ಒಳಗಾಗುವವರು ನಾವಾದ್ದರಿಂದ ಅದನ್ನು ಹೋಗಲಾಡಿಸುವವರೂ ನಾವೇ ಆಗಬೇಕು. ಎದುರಾಗುವ ಸಮಸ್ಯೆಗಳನ್ನು, ಆತಂಕಗಳನ್ನು ಸಕಾರಾತ್ಮಕವಾಗಿ ನೋಡಬೇಕೇ ಹೊರತು ನಕಾರಾತ್ಮಕವಾಗಿ ನೋಡಬಾರದು. ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಾತ್ವಿಕ ಆಹಾರ ಅತೀ ಮುಖ್ಯವಾಗಿದೆ. ಮನುಷ್ಯನ ದೇಹದಲ್ಲಿ ಮಧುಮೇಹ, ರಕ್ತದೊತ್ತಡಗಳು ಕಂಡು ಬಂದರೆ ಏನೋ ಬಂದವರಂತೆ ಆತಂಕಕ್ಕೆ ಒಳಗಾಗುತ್ತಾರೆ. ಈ ಆತಂಕ ದೂರವಾಗಬೇಕಾದರೆ. ಮಾನಸಿಕ ಸ್ಥೈರ್ಯ, ಶ್ರದ್ಧೆ ಹಾಗೂ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
12ನೇ ಶತಮಾನದ ಶರಣರು ಅದ್ಭುತವಾದ ಬದಲಾವಣೆ ತರಲು ಇಂಥವೇ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅರಿವು ಆತಂಕಗಳನ್ನು ದೂರಮಾಡುವುದು. ಅನ್ನ, ಅರಿವೆ, ಆಶ್ರಯಗಳನ್ನು ಗಳಿಸುವುದು ಕಷ್ಟವೇನಲ್ಲ. ದುರಾಸೆಯನ್ನು ಬಿಡಬೇಕಷ್ಟೇ. ಈ ಹಿನ್ನೆಲೆಯಲ್ಲಿಯೇ ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದು ಬಯಸಿದ್ದರು. ಹಿತ-ಮಿತ ಜೀವನದಿಂದ ನೆಮ್ಮದಿ ಸಾಧ್ಯ. ಶಿವನಾಗಿ ಶಿವನನ್ನು ಪೂಜಿಸಿದರೆ ಆತಂಕಕ್ಕೆ ಅವಕಾಶವಿರುವುದಿಲ್ಲ ಎಂದರು.
ಆತಂಕಗಳನ್ನು ಎದುರಿಸುವ ಬಗೆ’ ವಿಷಯ ಕುರಿತು ಮಾತನಾಡಿದ ಹೊಸದುರ್ಗದ ವಿಶ್ರಾಂತ ಪ್ರಾಂಶುಪಾಲ ಪಿ ಎಲ್ ಲೋಕೇಶ್ವರ, ಇಂದು ಜಗತ್ತು ಭಯೋತ್ಪಾದನೆ, ಉಗ್ರಗಾಮಿತನ, ಲೈಂಗಿಕ ದೌರ್ಜನ್ಯ, ರೈತರ ಆತ್ಮಹತ್ಯೆ, ಜಾಗತೀಕರಣ, ಸಂಸ್ಕøತಿಕ ದಿವಾಳಿತನ ಮುಂತಾದ ಹಲವು ಆತಂಕಗಳನ್ನು ಎದುರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳೂ ಸಹ ಪರೀಕ್ಷೆ ಎನ್ನುವ ಭಯವನ್ನು ಅನುಭವಿಸುತ್ತಿದ್ದಾರೆ. ಇಂಥ ಭಯವನ್ನು ಹೋಗಲಾಡಿಸಿಕೊಳ್ಳಲು ಮಕ್ಕಳು ಹಬ್ಬದ ರೀತಿಯಲ್ಲಿ ಪರೀಕ್ಷೆಯನ್ನು ಆಚರಿಸುವಂತಾಗಬೇಕು. ಇಂಥ ಆತಂಕಗಳನ್ನು ಎದುರಿಸಲು ಹೊರಗಿನಿಂದ ಸಾಧ್ಯವಿಲ್ಲ. ನಮ್ಮೊಳಗೆ ಆತ್ಮವಿಶ್ವಾಸ, ದೃಢತೆಯಿಂದ ಮಾತ್ರ ಸಾಧ್ಯ ಎಂದರು.
ಪ್ರಸ್ತುತ ರಾಜಕೀಯ ಒಂದು ಉದ್ಯಮವಾಗಿದೆ. ಯಾವ ಪಕ್ಷಗಳಲ್ಲೂ ತತ್ವ ಸಿದ್ಧಾಂತಗಳು ಉಳಿದಿಲ್ಲ. ಒಂದು ವರ್ಗ, ಜಾತಿ, ಧರ್ಮವನ್ನು ಅವಲಂಬಿಸಿ ಮತವನ್ನು ಹಾಕುವ ಕೆಟ್ಟ ಸಂಪ್ರದಾಯ ಬೆಳೆದಿದೆ. ಹೀಗೆ ಹಣ, ಅಧಿಕಾರ, ದರ್ಪ, ದೌರ್ಜನ್ಯಗಳು ದೇಶವನ್ನು ಆಳುವಂತಾಗಿದೆ. ಇದರಿಂದಾಗಿ ಭಾರತದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ ಎಂದರು.ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಹೊನ್ನೇಶಪ್ಪ, ಅಧ್ಯಾಪಕಾರಾದ ಸಂಗಾಪುರ್, ಶಿವಕುಮಾರ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
