ಚಳ್ಳಕೆರೆ
ರಾಜ್ಯದಲ್ಲಿ ಸಾವಿರಾರು ವರ್ಷಗಳಿಂದ ನೆಲೆಸಿರುವ ವಾಲ್ಮೀಕಿ ಸಮುದಾಯ ಇದುವರೆಗೂ ಸರ್ಕಾರದ ವತಿಯಿಂದ ಯಾವುದೇ ರೀತಿಯ ಸೂಕ್ತ ಸ್ಥಾನಮಾನಗಳಿಲ್ಲದೆ ಹಿನ್ನಡೆ ಅನುಭವಿಸುತ್ತಿದ್ದು, ಸುಮಾರು 60 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ಹೆಚ್ಚು ಪ್ರಾಶಸ್ತ್ಯ ನೀಡಬೇಕೆಂದು ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠ ಶ್ರೀಪ್ರಸನ್ನಾನಂದ ಮಹಾಸ್ವಾಮಿಗಳು ತಿಳಿಸಿದರು.
ಅವರು, ಬುಧವಾರ ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘ ಮತ್ತು ಸಮುದಾಯದ ಮುಖಂಡರು ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಮಹರ್ಷಿ ವಾಲ್ಮೀಕಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಸಮುದಾಯಕ್ಕೆ ಹೆಚ್ಚು ಪ್ರಾತಿನಿತ್ಯ ನೀಡುವ ನಿಟ್ಟಿನಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸಲಾಗಿದೆ.
ಈ ಹೋರಾಟಕ್ಕೆ ಪಕ್ಷ ಬೇದ ಮರೆತು ರಾಜ್ಯದ ವಾಲ್ಮೀಕಿ ಸಮುದಾಯದ ಎಲ್ಲಾ ಮುಖಂಡರು ಸಹಕಾರ ನೀಡಿದ್ಧಾರೆ. ಸರ್ಕಾರದ ಭರವಸೆಯ ಮೇರೆಗೆ ಮೀಸಲಾತಿ ಹೋರಾಟ ತಾತ್ಕಾಲಿಕವಾಗಿ ನಿಲುಗಡೆಯಾಗಿದ್ದು, ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ ಹಿನ್ನೆಲೆಯಲ್ಲಿ ಸಮಯವಕಾಶ ನೀಡಿದ್ದು, ಮತ್ತೆ ಈ ಹೋರಾಟ ಪ್ರಾರಂಭವಾದಲ್ಲಿ ಸಮುದಾಯದ ಎಲ್ಲಾ ಮುಖಂಡರು ಸರ್ಕಾರದ ವಿರುದ್ದ ಬೀದಿಗಿಳಿಯಲು ಸಿದ್ದರಾಗುವಂತೆ ಸ್ವಾಮೀಜಿ ತಿಳಿಸಿದರು.
ಮಹರ್ಷಿ ಶ್ರೀವಾಲ್ಮೀಕಿಯವರು ತಾವು ರಚಿಸಿದ ರಾಮಾಯಣದಲ್ಲಿ ಪ್ರತಿಯೊಬ್ಬರ ಬದುಕಿನ ಮೌಲ್ಯವನ್ನು ಹೆಚ್ಚಿಸುವ ಎಲ್ಲಾ ಅಂಶಗಳು ಅಡಗಿವೆ. ವಾಲ್ಮೀಕಿ ರಾಮಾಯಣದಲ್ಲಿ 24 ಸಾವಿರ ಶ್ಲೋಕಗಳು ಅಡಗಿದ್ದು, ಎಲ್ಲಾ ಶ್ಲೋಕಗಳ ಅರ್ಥಮಾಡಿಕೊಂಡಲ್ಲಿ ನಮ್ಮೆಲ್ಲರ ಬದುಕು ಸಾರ್ಥಕತೆ ಕಾಣಲಿದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯ ಸದಾಕಾಲ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಪಾಲಿಸುವ ಕಾರ್ಯ ಮಾಡಬೇಕು. ಯಾವುದೇ ಹಂತದಲ್ಲಿ ನಾವು ಇವರ ಆದರ್ಶಗಳನ್ನು ನಿರ್ಲಕ್ಷಿಸುವ ಮನಸ್ಸು ಮಾಡಬಾರದು. ಇಂದು ವಿಶ್ವದಾದ್ಯಂತ ಮಹರ್ಷಿ ವಾಲ್ಮೀಕಿಯವರ ಮಹಾನ್ ಕೊಡುಗೆಯ ಬಗ್ಗೆ ಅಪರವಾದ ಗೌರವವಿದೆ ಎಂದರು.
ವಾಲ್ಮೀಕಿ ಪ್ರಶಸ್ತಿ ವಿಜೇತ ಡಾ.ಜಿ.ರಂಗಯ್ಯ ಮಾತನಾಡಿ, ನಾನು ಅಮೇರಿಕದ ನ್ಯೂಯಾರ್ಕ್ನಲ್ಲಿ ವೈದ್ಯನಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಪುನಃ ತಾಯ್ನಾಡಿಗೆ ವಾಪಾಸ್ ಬಂದಿದ್ದೇನೆ. ಕೇವಲ ಭಾರತ ಮಾತ್ರವಲ್ಲ, ವಿದೇಶದಲ್ಲೂ ಸಹ ಮಹರ್ಷಿ ವಾಲ್ಮೀಕಿಯವರ ರಾಮಾಯಣ ಎಲ್ಲ ಸಮುದಾಯದ ಮನವನ್ನು ಗೆದ್ದಿದೆ. ಯಾವುದೇ ರೀತಿಯ ಸೂಕ್ತ ಮಾರ್ಗದರ್ಶನವಿಲ್ಲದಿದ್ದರೂ ಸಹ ಮಹರ್ಷಿ ವಾಲ್ಮೀಕಿ ಯವರು ಭಗವಂತನನ್ನೇ ಆಧಾರವಾಗಿಟ್ಟುಕೊಂಡು ರಾಮಾಯಣ ರಚಿಸಿದರು. ಒಟ್ಟಾರೆ ರಾಮಾಯಣದ ಅರ್ಥ ನಾವೆಲ್ಲರೂ ಉತ್ತಮ ಬದುಕು ಕಂಡುಕೊಳ್ಳಲು ಮುಂದಾಗಬೇಕು.
ನಮ್ಮ ನಡೆ ನುಡಿ ಪ್ರಾಮಾಣಿಕತೆಯಿಂದ ಕೂಡಿದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆಯನ್ನು ಮಾಡಬಹುದಾಗಿದೆ. ಇಂದು ನಮ್ಮ ಯುವ ಜನಾಂಗ ವಾಲ್ಮೀಕಿಯವರ ರಾಮಾಯಣದ ಒಟ್ಟಾರೆ ಸಾರಾಂಶವನ್ನು ಅರ್ಥಮಾಡಿಕೊಳ್ಳುವಲ್ಲಿ ಇನ್ನೂ ಸಫಲವಾಗಿಲ್ಲ. ಆದ್ದರಿಂದ ನಾವೆಲ್ಲರೂ ಈ ಮಹಾನ್ ಕೃತಿಯಲ್ಲಿರುವ ಆದರ್ಶಗಳ ಬಗ್ಗೆ ಚಿಂತನಮಂಥನ ನಡೆಸಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕ ಮಹಾಸಭಾ ಕಾರ್ಯದರ್ಶಿ ಹರ್ತಿಕೋಟೆ ವೀರೇಂದ್ರ ಸಿಂಹ ಮಾತನಾಡಿ, ಇಂದು ಈ ಗ್ರಾಮದಲ್ಲಿ ವಾಲ್ಮೀಕಿಯವರ ಜಯಂತಿಯೊಂದಿಗೆ ವಿಗ್ರಹ ಪ್ರತಿಷ್ಠಾಪನೆಗೆ ಯುವಕರು ಮುಂದಾಗಿರುವುದು ಸಂತಸ ವಿಷಯ. ಕಳೆದ ಹಲವಾರು ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಕುರಿತಂತೆ ಸಮುದಾಯದಲ್ಲಿ ಇನ್ನೂ ಹೆಚ್ಚಿನ ಚಟುವಟಿಕೆಗಳು ನಡೆಯುವುದು ಅವಶ್ಯಕ ಎಂದರು.
ಖ್ಯಾತ ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯವೂ ನಮ್ಮ ಮುಗ್ದ ಜನರು ರಾಮಾಯಣವನ್ನು ಮೆಲುಕು ಹಾಕುವಮೂಲಕ ಪರೋಕ್ಷವಾಗಿ ವಾಲ್ಮೀಕಿ ಮಹರ್ಷಿಗಳ ಕಾರ್ಯವನ್ನು ನೆನಪಿಸಿಕೊಳ್ಳುತ್ತಾರೆ. ರಾಮಾಯಣದ ಪಾತ್ರಗಳಿಗೆ ನೈಜ್ಯತೆಯನ್ನು ತುಂಬಿದ ವಾಲ್ಮೀಕಿಉಯವರನ್ನು ಸದಾ ಸ್ಮರಿಸುತ್ತಾರೆ. ರಾಮಾಯಣ ಗ್ರಾಮೀಣ ಭಾಗದ ಪುಣ್ಯ ಗ್ರಂಥವಾಗಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕೋಮಲಮ್ಮ ಮಾತನಾಡಿ, ವಾಲ್ಮೀಕಿ ಸಮುದಾಯದಲ್ಲಿ ಸಾಕಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದರೂ ಸೂಕ್ತ ಮಾರ್ಗದರ್ಶನವಿಲ್ಲದೆ ಅವರ ಯಾವುದೇ ಚಟುವಟಿಕೆಗಳು ಬೆಳಕಿಗೆ ಬಂದಿಲ್ಲ. ನಾವು ಮೊದಲ ಹಂತದಲ್ಲೇ ನಮ್ಮ ಮಹಿಳೆಯರನ್ನು ಶಿಕ್ಷಣವಂತರಾಗಿ ಮಾಡುವುದಲ್ಲದೆ, ಮಕ್ಕಳಿಗೂ ಸಹ ವಿಶೇಷ ಆದ್ಯತೆ ಮೇರೆಗೆ ಶಿಕ್ಷಣವನ್ನು ನೀಡಬೇಕಿದೆ. ನಾವು ಯಾವುದೇ ಸಾಧನೆಯನ್ನು ದಾಖಲಿಸಬೇಕಾದಲ್ಲಿ ಅದಕ್ಕೆ ಮೂಲ ಪ್ರೇರಣೆ ನಾವು ಪಡೆಯುವ ಶಿಕ್ಷಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಸದಸ್ಯ ಕಾಲುವೇಹಳ್ಳಿ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಜಯಪಾಲಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ಪತ್ರಕರ್ತರಾದ ಸೊಂಡೇಕೆರೆ ಶಿವಣ್ಣ, ಟಿ.ಜೆ. ತಿಪ್ಪೇಸ್ವಾಮಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಜೆ.ಸಿ.ಚಂದ್ರಶೇಖರಪ್ಪ, ಉಪಾಧ್ಯಕ್ಷ ಡಾ.ಆರ್.ಗೋಪಾಲಕೃಷ್ಣ, ರಾಜಾ ಪರಶುರಾಮ ನಾಯಕ, ರಾಜಾ ವೀರ ಮದಕರಿ ನಾಯಕ ಗೌರವ ಸಂರಕ್ಷಣ ವೇದಿಕೆ ಸಂಚಾಲಕ ಕೆ.ಓ.ಮಹಂತೇಶನಾಯಕ, ತಾಲ್ಲೂಕು ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಟಿ.ಸೂರನಾಯಕ, ಎಲ್ಐಸಿ ತಿಪ್ಪೇಸ್ವಾಮಿ, ಶಿಕ್ಷಕ ಕೆ.ಪಿ.ತಿಪ್ಪೇಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರೇಣುಕಮ್ಮ, ಪಿ.ಭೂತಣ್ಣ, ಜಿ.ಟಿ.ರಂಗಸ್ವಾಮಿ, ಪ್ರವೀಣರಾಜ್, ಎನ್.ರಂಗಸ್ವಾಮಿ, ಸೊಪ್ಪಿನ ತಿಪ್ಪೇಸ್ವಾಮಿ, ಕೆ.ಜಿ.ಪಾಲಣ್ಣ, ಆರ್.ಪಾಲಣ್ಣ, ಪಿ.ರಂಗನಾಥ. ಓ.ರವಿಕುಮಾರ, ಎನ್.ಗಾದ್ರಿಪಾಲಯ್ಯ ಮುಂತಾದವರು ಭಾಗವಹಿಸಿದ್ದರು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
