ಇಂದಿಗೂ ಜಾತಿನಿಂದನೆ ನಿಂತಿಲ್ಲ;ಡಾ.ಜಿ.ಬಸವರಾಜ್

ಚಿತ್ರದುರ್ಗ:

     ಬುಡಕ್ಕೆ ನೀರು ಬಂದಾಗ ಎಚ್ದೆತ್ತುಕೊಳ್ಳುವ ಬದಲು ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಯೊಬ್ಬರಿಗೂ ನೀಡಿರುವ ಹಕ್ಕಿನ ಶಕ್ತಿ ಏನೆಂಬುದನ್ನು ತಿಳಿದುಕೊಳ್ಳಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಜಿ.ಬಸವರಾಜು ಎಚ್ಚರಿಸಿದರು.

      ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರ ಒಕ್ಕೂಟ ಹಾಗೂ ಸಾಮಾಜಿಕ ಸಂಘರ್ಷ ಸಮಿತಿ, ರಾಜ್ಯ ಸಮಿತಿ ಸಹಯೋಗದೊಂದಿಗೆ ಇಲ್ಲಿನ ಕ್ರೀಡಾಭವನದಲ್ಲಿ ಭಾನುವಾರ ನಡೆದ ಸಂವಿಧಾನ-ಮುಕ್ತ ಸಂವಾದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಎರಡನೆ ಗೋಷ್ಟಿಯಲ್ಲಿ ಸಂವಿಧಾನ ಮತ್ತು ಪರಿಶಿಷ್ಟ ಜಾತಿ, ಪಂಗಡಗಳು ಎಂಬ ವಿಷಯ ಕುರಿತು ಮಾತನಾಡಿದರು.

       ಮೇಲ್ಜಾತಿಯವರಿಂದ ಸಂವಿಧಾನವನ್ನು ಮುಗಿಸುವ ಪ್ರಯತ್ನ ನಡೆಯುತ್ತಿರುವುದರಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಸಂವಿಧಾನವನ್ನು ಸುಟ್ಟುಹಾಕುತ್ತೇವೆಂದು ಧೈರ್ಯವಾಗಿ ಹೇಳುತ್ತಿದ್ದಾರೆ.ಇನ್ನು ಮೈಮರೆತು ಕೂರುವ ಕಾಲ ಇದಲ್ಲ. ಭಾನುವಾರವೆಂದರೆ ಬರೀ ಮಜಾ ಮಾಡುವ ದಿನ ಎಂದುಕೊಳ್ಳಬೇಡಿ. ಸಂವಿಧಾನವನ್ನು ಉಳಿಸಬೇಕಾಗಿರುವುದರಿಂದ ಪ್ರಜ್ಞಾವಂತರಾಗುವುದರ ಜೊತೆಗೆ ಬೇರೆಯವರಲ್ಲಿಯೂ ಪ್ರಜ್ಞೆ ಮೂಡಿಸುವಂತೆ ಹೇಳಿದರು.

       ಪರಿಶಿಷ್ಟ ಜಾತಿ ಮತ್ತು ಪಂಗಡದವರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೇ ಇರುವ ಜಾತಿ ನಿಂದನೆ ಕಾಯಿದೆಯನ್ನು ಯಾರೋ ಒಬ್ಬರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಇಡೀ ಕಾಯಿದೆಯನ್ನೇ ದುರ್ಬಲಗೊಳಿಸುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ಜಾತಿ ನಿಂದನೆ ಸಾಕಷ್ಟು ನಡೆಯುತ್ತಿದೆ. ಇದನ್ನು ಅರ್ಥಮಾಡಿಕೊಂಡು ಪ್ರಜ್ಞೆಯ ಕೊರತೆಯಿಂದ ಹೊರಬನ್ನಿ ಎಂದು ಕರೆ ನೀಡಿದರು.

         ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಹರಿಹರದ ಕೆ.ಷರೀಫ ಮಾತನಾಡುತ್ತ ಸಂವಿಧಾನವನ್ನು ಸುಟ್ಟುಹಾಕುತ್ತೇವೆಂದು ಹೇಳುತ್ತಿರುವವರ ಹಿಂದೆ ಯಾರೆಲ್ಲಾ ಇದ್ದಾರೆ. ಏಕೆ ಇಂತಹ ಉದ್ದಟತನದ ಮಾತುಗಳನ್ನಾಡುತ್ತಿದ್ದಾರೆ ಎನ್ನುವುದನ್ನು ದಲಿತರು, ಹಿಂದುಳಿದವರು, ಮುಸ್ಲಿಂರಿಗೇಕೆ ಇನ್ನು ಅರ್ಥವಾಗುತ್ತಿಲ್ಲ ಎನ್ನುವುದೇ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

         ಸಂವಿಧಾನ ರಚನೆಯಾದಾಗಿನಿಂದಲೂ ವಿರೋಧಿಸಿಕೊಂಡು ಬರುತ್ತಿರುವ ಆರ್.ಎಸ್.ಎಸ್.ನವರು ಸಂವಿಧಾನವನ್ನು ಸುಟ್ಟುಹಾಕುವುದಾಗಿ ದೇಶದಲ್ಲಿ ಅರಾಜಕತೆಯನ್ನುಂಟು ಮಾಡುತ್ತಿದ್ದಾರೆ.ಈಗ ನಮ್ಮ ನಿಮ್ಮೆಲ್ಲರ ಕೈಯಲ್ಲಿ ಕಾಸು ಹರಿದಾಡುತ್ತಿರಬಹುದು. ಆದರೆ ಸಾಮಾಜಿಕ ಸ್ಥಾನಮಾನವನ್ನು ಇನ್ನು ಪಡೆದುಕೊಳ್ಳಲು ಆಗುತ್ತಿಲ್ಲ.

         ಊಟ, ಬಟ್ಟೆ ತೊಡುವುದು ಅವರವರ ವಿಚಾರಕ್ಕೆ ಬಿಟ್ಟಿದ್ದು, ಇದನ್ನು ಸಹಿಸಿಕೊಳ್ಳಲು ಆಗದ ಕೋಮುವಾದಿಗಳು ತಿನ್ನುವ ಅನ್ನವನ್ನು ಪ್ರಶ್ನಿಸುವ ಮಟ್ಟಕ್ಕೆ ಹೋಗಿದ್ದಾರೆ. ಬಾಬ್ರಿಮಸೀದಿ, ರಾಮಮಂದಿರವನ್ನು ಮುಂದಿಟ್ಟುಕೊಂಡು ಓಟಿನ ರಾಜಕಾರಣ ಮಾಡುತ್ತಿರುವ ಬಿಜೆಪಿ.ಯವರು ಈಗ ಶಬರಿಮಲೆ ಅಯ್ಯಪ್ಪಸ್ವಾಮಿ ಹೆಸರಿನಲ್ಲಿ ಮಹಿಳೆಯರನ್ನು ಬಳಸಿಕೊಳ್ಳಲು ಶುರುಮಾಡಿದ್ದಾರೆ. ಇದೆಲ್ಲಾ ಏಕೆ ಇನ್ನು ನೀವುಗಳು ಅರ್ಥಮಾಡಿಕೊಳ್ಳುತ್ತಿಲ್ಲ.

           ಸಾಚಾರ್ ವರದಿ ಸರ್ಕಾರಕ್ಕೆ ನೀಡಿ 25 ವರ್ಷಗಳಾದರೂ ಮುಸ್ಲಿಂರಿಗೆ ಇನ್ನು ಸಾಮಾಜಿಕ ನ್ಯಾಯ ಸಿಕ್ಕಿಲ್ಲ.ಗೋವಿನ ಹೆಸರಿನಲ್ಲಿ ಅಮಾಯಕ ಮುಸ್ಲಿಂರನ್ನು ಕಗ್ಗೊಲೆ ಮಾಡಲಾಗುತ್ತಿದೆ. ಭಯೋತ್ಪಾದಕರೆಂದು ಕೆಲವರನ್ನು ಜೈಲಿಗೆ ಹಾಕಲಾಗುತ್ತಿದೆ. ಇಷ್ಟು ಸಾಲದೆಂಬಂತೆ ಈಗ ತ್ರಿವಳಿ ತಲಾಖ್ ಹಿಡಿದುಕೊಂಡಿದ್ದಾರೆ.ಇಂತಹ ಚಿಲ್ಲರೆ ಕೆಲಸಗಳನ್ನು ಬಿಟ್ಟು ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡಲಿ ಎಂದರು.

         ಜಮ್ಮು ಕಾಶ್ಮೀರದಲ್ಲಿ ಬಾಲಕಿ ಆಸೀಫಾಳ ಮೇಲೆ ನಡೆದ ಅತ್ಯಾಚಾರ ಇನ್ನು ಮರೆಯುವಂತಿಲ್ಲ. ಜೈಲಿನಲ್ಲಿರುವ ರಾಜಕಾರಣಿಗಳನ್ನು ನೋಡಲು ಕೆಲವು ಸ್ವಾಮಿಗಳು ಹೋಗುತ್ತಾರೆ. ಮಠಪೀಠಗಳ ಹಿಂದೆಯೂ ದುರಂತಗಳಿವೆ. ಹಾಗಾಗಿ 2019 ರಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಯನ್ನು ಸೋಲಿಸದಿದ್ದರೆ ದೇಶ ಅಂಧಕಾರದಲ್ಲಿರಬೇಕಾಗುತ್ತೆ. ಎಚ್ಚರಿಕೆಯ ನಡೆ ಇಡಿ ಎಂದು ಜಾಗೃತಗೊಳಿಸಿದರು.

     ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ರೇವಣಸಿದ್ದಪ್ಪ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಡಾ.ಕೆ.ಕೆ.ಕಮಾನಿ, ಹೊನ್ನಾವರದ ಲೇಖಕಿ ಡಾ.ಹೆಚ್.ಎಸ್.ಅನುಪಮ, ಎಸ್.ನಾಗಭೂಷಣ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link