ಬೆಂಗಳೂರಿನ ಹೆಸರಿಗೆ ಕಳಂಕ ತಂದ ಸಂಚಾರ ದಟ್ಟಣೆ..!

ಬೆಂಗಳೂರು

    ರಾಜಧಾನಿ ಬೆಂಗಳೂರಿಗರಿನಲ್ಲಿ ವಿಶ್ವದ ಅತ್ಯಂತ ಕೆಟ್ಟ ಸಂಚಾರ ದಟ್ಟಣೆಯಿದ್ದು ಇದರಿಂದ ಹಲವು ಸಮಸ್ಯೆಗಳು ಉಂಟಾಗಿವೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ.ಟಾಮ್ ಟಾಮ್ ಸಂಸ್ಥೆ ವಾಹನಗಳ ಟ್ರಾಫಿಕ್ ಕಿರಿಕಿರಿ ಹೆಚ್ಚು ಇರುವ ಜಗತ್ತಿನ ನಗರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಬೆಂಗಳೂರೇ ನಂಬರ್ ಒನ್ ಸ್ಥಾನದಲ್ಲಿದೆ. ಅಂದರೆ ಅತೀ ಹೆಚ್ಚು ಟ್ರಾಫಿಕ್ ಇರುವ ವಿಶ್ವದ ನಗರಗಳಲ್ಲಿ ಬೆಂಗಳೂರು ಅಗ್ರ ಸ್ಥಾನ ಹೊಂದಿದೆ.

   ವಾಹನಗಳ ನ್ಯಾವಿಗೇಶನ್ ವ್ಯವಸ್ಥೆ ಮಾಡುವ ಟಾಮ್ ಟಾಮ್ ಸಂಸ್ಥೆ ಕಳೆದ 9 ವರ್ಷಗಳಿಂದ ಟ್ರಾಫಿಕ್ ಇಂಡೆಕ್ಸ್ ಬಿಡುಗಡೆ ಮಾಡುತ್ತಾ ಬರುತ್ತಿದೆ. ಈ ವರ್ಷದ ಪಟ್ಟಿಯಲ್ಲಿ ವಿಶ್ವದ 57 ದೇಶಗಳ 416 ಪ್ರಮುಖ ನಗರಗಳನ್ನು ಪರಿಗಣಿಸಿದೆ. ಇದರ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಬಾಧೆಗೆ ಒಳಗಾಗಿರುವುದು ಭಾರತ ದೇಶವಾಗಿದ್ದು ಅದರಲ್ಲಿ ಅಗ್ರಸ್ಥಾನದಲ್ಲಿ ಬೆಂಗಳೂರು ನಗರವಿದೆ. ಟಾಪ್ 10 ಪಟ್ಟಿಯಲ್ಲಿ ಬೆಂಗಳೂರಿನ ಜೊತೆ ದೆಹಲಿ, ಮುಂಬೈ ಮತ್ತು ಪುಣೆ ಇವೆ.

    ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಶೇ. 71ರಷ್ಟಿದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುವಾಗ, ಯಾವುದೇ ಟ್ರಾಫಿಕ್ ಇಲ್ಲದಾಗ ತಗುಲುವ ಸಮಯಕ್ಕಿಂತಲೂ ಶೇ. 71ರಷ್ಟು ಹೆಚ್ಚು ಸಮಯ ವ್ಯಯವಾಗುತ್ತದೆ. ಅಂದರೆ, ಬೆಂಗಳೂರಿನ ಖಾಲಿ ರಸ್ತೆಗಳಲ್ಲಿ ನೀವು ಒಂದು ಸ್ಥಳಕ್ಕೆ ಹೋಗಲು 1 ಗಂಟೆ ಬೇಕಾಗುತ್ತದೆ ಎಂದಾದರೆ, ಅದೇ ಮಾಮೂಲಿಯ ಟ್ರಾಫಿಕ್ ಇರುವ ವೇಳೆ ಅದೇ ಸ್ಥಳಕ್ಕೆ ಹೋಗಲು ಒಂದು ಗಂಟೆ 42 ನಿಮಿಷ ಬೇಕಾಗುತ್ತದೆ. ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ ಬೆಂಗಳೂರಿನಲ್ಲಿ 2019, ಆ. 20ರಂದು ಶೇ. 103 ವಾಹನ ದಟ್ಟಣೆಯಿದ್ದು ಇದು ಗರಿಷ್ಠವೆನಿಸಿದೆ.

    ಅದೇ ವರ್ಷ ಏಪ್ರಿಲ್ 6ರಂದು ಅತೀ ಕಡಿಮೆ ಟ್ರಾಫಿಕ್ ಕಂಡಿತ್ತು.ಅಂದು ಶೇ. 30ರಷ್ಟು ಮಾತ್ರ ವಾಹನ ದಟ್ಟಣೆ ಇದ್ದದ್ದು. ಈ ಇಂಡೆಕ್ಸ್‌ನಲ್ಲಿ ಒಂದೆರಡು ಕುತೂಹಲಕಾರಿ ಮಾಹಿತಿಯೂ ಇದೆ. ಟ್ರಾಫಿಕ್ ದಟ್ಟಣೆಯಿಂದಾಗಿ ಬೆಂಗಳೂರಿನ ವಾಹನ ಸವಾರರಿಗೆ ವರ್ಷಕ್ಕೆ ಸರಾಸರಿ 243 ಗಂಟೆಯಷ್ಟು ವಿಳಂಬವಾಗುತ್ತಿದೆ. ಮತ್ತೊಂದು ಕುತೂಹಲ ಮಾಹಿತಿ ಎಂದರೆ, ಪ್ರತೀ ಶುಕ್ರವಾರದಂದು ರಾತ್ರಿ 8 ಗಂಟೆ ನಂತರ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಿದರೆ ವರ್ಷಕ್ಕೆ ಏನಿಲ್ಲವೆಂದರೂ 5 ಗಂಟೆಗಳನ್ನ ಉಳಿಸಬಹುದು.

87 ಲಕ್ಷ ವಾಹನಗಳು

     2019ರ ಜುಲೈ ತಿಂಗಳಿನ ಅಂಕಿ ಅಂಶದ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ಕನಿಷ್ಟ 82 ಲಕ್ಷಕ್ಕೂ ಅಧಿಕ ವಾಹನಗಳು ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ನಡುವೆ ಓಲಾ, ಊಬರ್ ಗಳಂತಹ ಟ್ಯಾಕ್ಸಿ ಕಂಪೆನಿಗಳ ಅಸ್ಥಿತ್ವದ ನಂತರ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕಳೆದ 40 ವರ್ಷದಲ್ಲಿ ಬೆಂಗಳೂ ರಿನ ವಾಹನಗಳ ಸಂಖ್ಯೆ 65 ಪಟ್ಟು ಹೆಚ್ಚಾಗಿದೆ! ಪರಿಣಾಮ ರಾಜ್ಯ ರಾಜಧಾನಿ ರಸ್ತೆಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣ ಶೇ.64 ರಷ್ಟು. ಇನ್ನೂ ವಾಹನದ ಸರಾಸರಿ ವೇಗ ಸೆಕೆಂಡಿಗೆ ಕೇವಲ 8.35 ಮೀಟರ್.

    ಇತ್ತೀಚೆಗೆ ಬ್ಯಾಂಕುಗಳು ಹಾಗೂ ಕೆಲವು ಖಾಸಗಿ ಕಂಪೆನಿಗಳು ಬೈಕ್ ಮತ್ತು ಕಾರುಗಳನ್ನು ಕೊಳ್ಳಲು ಅತಿ ಕಡಿಮೆ ಬಡ್ಡಿ ದರದಲ್ಲಿ ಹಣವನ್ನು ಸಾಲವನ್ನಾಗಿ ನೀಡುತ್ತಿರುವುದು ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ಇಂದು ಬೆಂಗಳೂರಿನ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದ ಜನರ ಮನೆಯಲ್ಲಿ ಕನಿಷ್ಟ ಒಂದು ಕಾರು ಎರಡು ಬೈಕ್ ಇರುವುದನ್ನು ನಾವು ಕಾಣಬಹುದು.ಪರಿಣಾಮ ನಗರದ ರಸ್ತೆಗಳು ತನ್ನ ಸಾಮರ್ಥ್ಯಕ್ಕಿಂತ ಅಧಿಕ ವಾಹಣ ದಟ್ಟಣೆ ನಿಭಾಯಿಸಲು ಸಾಧ್ಯವಾಗದೆ ಹೆಣಗುತ್ತಿವೆ. ಪರಿಣಾಮ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಉಲ್ಭಣಿಸುತ್ತಲೇ ಇದೆ.

1.5 ಲಕ್ಷ ಕೋಟಿ ನಷ್ಟ

      ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ಭಾರತೀಯ ನಗರಗಳಲ್ಲಿನ ಟ್ರಾಫಿಕ್ ಕಾರಣದಿಂದಲೇ ವರ್ಷಕ್ಕೆ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳ ಆದಾಯ ನಷ್ಟವಾಗುತ್ತಿದೆ. 2019ರ ಅವಧಿಯಲ್ಲಿ ಟ್ರಾಫಿಕ್ ಮತ್ತು ರಸ್ತೆ ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 2015 ಎನ್ನುತ್ತಿದೆ ಕೇಂದ್ರ ಅಪರಾಧ ವಿಭಾಗಗಳ ವರದಿ. ಇನ್ನೂ ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯದಿಂದಾಗಿ ಉಂಟಾಗುವ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯಗುತ್ತಿಲ್ಲ. ಜನರ ಪಾಡಂತೂ ಹೇಳತೀರದಾಗಿದೆ.

     ನಗರದ ಹೆಬ್ಬಾಳ, ಯಲಹಂಕ, ಕೋರಮಂಗಲ, ಮೈಸೂರು ರಸ್ತೆ, ಕೆ.ಆರ್. ಪುರಂ, ಬಳ್ಳಾರಿ ರಸ್ತೆ, ಸಿಲ್ಕ್‌ಬೋರ್ಡ್ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಕುಖ್ಯಾತ ಭಾಗಗಳು. ಇದಲ್ಲದೆ ನಗರದಲ್ಲಿ 25 ಹೆವಿ ಜಂಕ್ಷನ್‌ಗಳಿವೆ. ಸಾಮಾನ್ಯವಾಗಿ ಜಂಕ್ಷನ್‌ಗಳಲ್ಲಿ ಎಲ್ಲಾ ಸಮಯದಲ್ಲೂ ವಾಹನ ದಟ್ಟಣೆ ಅಧಿಕವಾಗಿರುತ್ತಿದ್ದು, ಸವಾರರು ಇಲ್ಲಿನ ವಾಹನ ದಟ್ಟಣೆಯನ್ನು ಕ್ರಮಿಸಿ ಮನೆಗೆ ಸಾಗುವುದೇ ದೊಡ್ಡ ಸಾಹಸವಾಗಿರುತ್ತದೆ. ಆದರೆ, ಈ ಟ್ರಾಫಿಕ್ ಸಮಸ್ಯೆಯನ್ನು ನಿರ್ವಹಿಸಲು ನಿಯೋಜಿಸಲಾಗಿರುವ ಟ್ರಾಫಿಕ್ ಪೊಲೀಸರಸಂಖ್ಯೆ ಕೇವಲ 4718 ಮಾತ್ರ. 

ಪೊಲೀಸರ ಕೊರತೆ

    ಹೀಗೆ ಟ್ರಾಫಿಕ್ ನಿರ್ವಹಣೆಗಾಗಿ ಕಾನ್ಸ್‌ಟೇಬಲ್‌ಗಳನ್ನು ನಿಯೋಜಿಸಲಾಗಿದ್ದರೂ ಸಹ ಸಿಗ್ನಲ್‌ಗಳ ಬಳಿ ವಾಹನ ದಟ್ಟಣೆ ಅಧಿಕವಾಗಿರುವ ಜಾಗದಲ್ಲಿ ಪೊಲೀಸರನ್ನು ಕಾಣುವುದು ಇತ್ತೀಚೆಗೆ ತೀರಾ ವಿರಳವಾಗಿದೆ. ನೂತನ ಮೋಟಾರು ಕಾಯ್ದೆ ಜಾರಿಗೆ ಬಂದ ನಂತರ ರಸ್ತೆ ಪಕ್ಕ ಮರದ ನೆರಳಿನಲ್ಲಿ ತಮ್ಮ ಅಂಗಡಿ ತೆರೆಯುತ್ತಿರುವ ಟ್ರಾಫಿಕ್ ಪೊಲೀಸರು ವಾಹನ ದಟ್ಟಣೆ ಹಾಗೂ ಬಿಸಿಲಿನಿಂದ ಹೈರಾಣಾಗಿರುವ ವಾಹನ ಸಾವಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಭಾರೀ ಮೊತ್ತದ ದಂಡ ವಿಧಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ವಾಹನ ಸವಾರರು ಪ್ರತಿನಿತ್ಯ ಪೊಲೀಸರ ಭೀತಿಯಲ್ಲೇ ಸಂಚರಿಸುವಂತಾಗಿದೆ.

   ಸಿಲ್ಕ್‌ಬೋರ್ಡ್ ಫ್ಲೈಓವರ್‌ನಿಂದ ಮಡಿವಾಳ ಮಾರ್ಗವಾಗಿ ಗಿರಿನಗರ ನೈಸ್ ರಸ್ತೆಗೆ ಕೇವಲ 14 ಕಿಮೀ ಮಾತ್ರ. ಆದರೆ, ನಗರದ ಟ್ರಾಫಿಕ್?ನಲ್ಲಿ ಇಷ್ಟು ದೂರ ಕ್ರಮಿಸಲು ನಮಗೆ ಕನಿಷ್ಟ 2 ರಿಂದ 2.30 ಗಂಟೆ ಅಗತ್ಯ. ಈ ಅವಧಿಯಲ್ಲಿ ನೀವು ವಿಮಾನ ಮಾರ್ಗವಾಗಿ ನೆರೆಯ ದುಬೈಗೆ ಸಂಚರಿಸಬಹುದು.

   ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆ ಮಾರ್ಗವಾಗಿ ನಾಯಂಡಹಳ್ಳಿಗೆ ಕೇವಲ 10 ಕಿಮೀ ಮಾತ್ರ. ಆದರೆ, ಇದನ್ನು ಕ್ರಮಿಸಲು ನಿಮಗೆ ಕನಿಷ್ಟ 1 ರಿಂದ 1.30 ಗಂಟೆ ಬೇಕಾಗುತ್ತದೆ. ಈ ಅವಧಿಗಿಂತ ಒಂದರ್ಧ ಗಂಟೆ ಹೆಚ್ಚು ಸಮಯದಲ್ಲಿ ನೀವು ರಾಷ್ಟ್ರ ರಾಜಧಾನಿ ದೆಹಲಿಗೆ ಕ್ರಮಿಸಬಹುದು.

  ಮೆಜೆಸ್ಟಿಕ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 34 ಕಿಮೀ. ಆದರೆ ಇದನ್ನು ಕ್ರಮಿಸಲು ಕನಿಷ್ಟ 2 ರಿಂದ 3 ಗಂಟೆ ಬೇಕು. ಈ ಸಮಯದಲ್ಲಿ ನೀವು ಅರಾಮಾಗಿ ನೆರೆ ರಾಷ್ಟ್ರ ಶ್ರೀಲಂಕಾಗೆ ಹೋಗಬಹುದು.

ವೈಟ್‌ಟಾಪಿಂಗ್ ಕಿರಿಕಿರಿ

   ಎಲೆಕ್ಟ್ರಾನಿಕ್ ಸಿಟಿಯಿಂದ ಕಾರ್ಪೊರೇಷನ್ ಸರ್ಕಲ್‌ಗೆ 22 ಕಿಲೋಮೀಟರ್ ಮಂಗಳವಾರದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್ ಬಳಿ ಆರಂಭವಾಗಿರುವ ವೈಟ್ ಟಾಪಿಂಗ್ ಕೆಲಸ ಮುಗಿಯುವ ವರೆಗೂ ನೀವು ಈ ಮಾರ್ಗವನ್ನು ಬಳಸುವರಾದರೆ ಕನಿಷ್ಟ 4 ಗಂಟೆ ಅದಕ್ಕಾಗಿಯೇ ಮೀಸಲಿಡಿ. ಅಂದರೆ ಒಂದು ದಿನದ ಸುಮಾರು 8 ಗಂಟೆಗಳನ್ನು ಸಂಚಾರಕ್ಕೆ ಮೀಸಲಿಡಬೇಕಾಗುತ್ತದೆ. ಇಷ್ಟಾದ ನಂತರವೂ ನಿಮ್ಮಲ್ಲಿ ಚೈತನ್ಯ ಉಳಿದಿದ್ದರೆ ಕೆಲಸ ಮಾಡಿ. ಈ ಅವಧಿಯಲ್ಲಿ ನೀವು ಸಿಂಗಾಪುರಕ್ಕೆ ಹೋಗಬಹುದು.

   ನಾಲ್ಕು ಗಂಟೆಯಲ್ಲಿ 300 ಕಿಲೋಮೀಟರ್ ದೂರ ಇರುವ ಶಿವಮೊಗ್ಗಕ್ಕೆ ಹೋಗಬಹುದು. ಮೈಸೂರಿಗೆ ಹೋಗಿ ವಾಪಸ್ ಬರಬಹುದು. ಆದರೆ ಎಲೆಕ್ಟ್ರಾನಿಕ್? ಸಿಟಿಯಿಂದ ಮೆಜೆಸ್ಟಿಕ್‌ಗೆ ಬರಲು ಕನಿಷ್ಟ 4 ಗಂಟೆ ಬೇಕು. ಇನ್ನು ಎಲೆಕ್ಟ್ರಾನಿಕ್‌ಸಿಟಿಯಿಂದ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಹೋಗುವುದಾದರೆ ವಿಮಾನ ಪ್ರಯಾಣದ ನಾಲ್ಕು ಪಟ್ಟು ಸಮಯ ರಸ್ತೆಯಲ್ಲೇ ವ್ಯರ್ಥವಾಗುವುದು ಖಚಿತ. ಪ್ರತಿ ಬಾರಿ ಬೆಂಗಳೂರಿಗೆ ನೂತನ ಪೊಲೀಸ್‌ಆಯುಕ್ತರು ಬಂದಾಗ, ನಗರದ ಟ್ರಾಫಿಕ್ ನಿಯಂತ್ರಣದ ಬಗ್ಗೆ ಮಾತನಾಡುತ್ತಾರೆ. ಟ್ರಾಫಿಕ್ ಪೊಲೀಸರ ಕೆಲಸ ವಾಹನ ಸಂಚಾರ ನಿರ್ವಹಿಸುವುದೇ ಹೊರತು ದಂಡ ವಸೂಲಿಯಲ್ಲ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದು ಬರೀ ಶುಲ್ಕ ವಸೂಲಾತಿಯ ಕೆಲಸ.

ಹೆಲ್ಮೆಟ್ ಏಕೆ?

   ಹಾಗೆ ನೋಡಿದರೆ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಹೆಲ್ಮೆಟ್ ಅವಶ್ಯಕತೆಯೇ ಇಲ್ಲ. ವಾಹನಕ್ಕಿಂತ ವೇಗವಾಗಿ ಪಾದಚಾರಿಗಳೇ ಹೋಗುವಾಗ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಅವಶ್ಯಕತೆ ಏಕೆ ಈ ಪ್ರಶ್ನೆ ಕೂಡ ಸಾರ್ವಜನಿಕವಾಗಿ ಕೇಳಿ ಬರುತ್ತದೆ.

    ಈ ಟ್ರಾಫಿಕ್ ಸಮಸ್ಯೆಗೆ ಇನ್ನೊಂದು ಬಲವಾದ ಕಾರಣವೆಂದರೆ ಸಂಚಾರ ಪೊಲೀಸರು ಮತ್ತು ಬಿಡಿಎ, ಬಿಬಿಎಂಪಿ ಮೊದಲಾದ ನಾಗರಿಕ ಸಂಸ್ಥೆಗಳ ನಡುವೆ ಸೂಕ್ತ ಸಂವಹನ ಇಲ್ಲದಿರುವುದು. ವೈಟ್‌ಟಾಪಿಂಗ್, ರಸ್ತೆ ಅಗಲೀಕರಣ ಮತ್ತಿತರ ಕೆಲಸ ಮಾಡುವ ಮುನ್ನ ಟ್ರಾಫಿಕ್ ಪೊಲೀಸರು ಮತ್ತು ಸಾರ್ವಜನಿಕ ಸಂಸ್ಥೆಗಳು ಒಟ್ಟಾಗಿ ಕುಳಿತು ಯೋಜನೆ ಮಾಡಬೇಕು. ಆದರೆ ಅವರ ಪಾಡಿಗೆ ಅವರು, ಇವರ ಪಾಡಿಗೆ ಇವರು ಕೆಲಸ ಮಾಡುತ್ತಾರೆ. ಇದರಿಂದಾಗುವ ಸಮಸ್ಯೆಯನ್ನು ವಾಹನ ಸವಾರರು ಅನುಭವಿಸಬೇಕು. ಮತ್ತೆ ಬಹುತೇಕ ಮುಂದುವರೆದ ನಗರಗಳಲ್ಲಿ ರಸ್ತೆ ದುರಸ್ಥಿಯನ್ನು ಹಗಲು ಹೊತ್ತು ಮಾಡುವುದೇ ಇಲ್ಲ. ರಾತ್ರೋರಾತ್ರಿ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ಮುಗಿಸುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಸಾರ್ವಜನಿಕ ಸಂಸ್ಥೆಗಳಿಗೆ ನಾಗರಿಕರ ಮೇಲೆ ಯಾವುದೇ ಕನಿಕರವಿಲ್ಲ. ಅದು ಅವರ ಕಾರ್ಯ ವೈಖರಿಯಿಂದಲೇ ತಿಳಿಯುತ್ತದೆ.

’ಡೆಡ್ ಸಿಟಿ’

     ನಗರದ ಕೋರಮಂಗಲ, ಬಳ್ಳಾರಿ ರಸ್ತೆ ಹಾಗೂ ಕೆಂಗೇರಿ ರಸ್ತೆಗಳಲ್ಲಿ ಕ್ರಮಿಸುವುದು ವಾಹನ ಸವಾರರ ಪಾಲಿಗೆ ನಿಜಕ್ಕೂ ಸಾಹಸವೇ ಸರಿ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಬೆಂಗಳೂರು ನಗರದ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಧ್ಯವಾಗಲಿದೆ. ದೇಶದ ಐಟಿ ಸಿಟಿ, ಗ್ರೀನ್ ಸಿಟಿ ಖ್ಯಾತಿಯ ಬೆಂಗಳೂರು ಟ್ರಾಫಿಕ್‌ನಿಂದಾಗಿ ’ಡೆಡ್ ಸಿಟಿ’ ಯಾಗಿ ಬದಲಾಗಲಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap