ರಸ್ತೆ ವಿಸ್ತರಣೆ : ಅಡ್ಡಿಯಾಗುವ ಮರಗಳ ಸ್ಥಳಾಂತರ..!

70 ಮರಗಳ ಸ್ಥಳ ಬದಲಾಯಿಸಿ ಮರುಹುಟ್ಟುಗೆ ಕ್ರಮ

ತುಮಕೂರು

    ಅಭಿವೃದ್ಧಿ, ಆಧುನೀಕರಣ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆದೇ ಇದೆ. ಹೊಸ ಕಟ್ಟಡ ನಿರ್ಮಾಣ, ರಸ್ತೆ ಅಗಲೀಕರಣಕ್ಕಾಗಿ ಅಲ್ಲಿದ್ದ ನೆರಳು, ಗಾಳಿ ನೀಡುವ ಮರಗಳಿಗೆ ಕೊಡಲಿ ಬೀಳುತ್ತದೆ. ಮತ್ತೆ ಆ ಗಾತ್ರದ, ಅಷ್ಟು ವರ್ಷದ ಮರ ಬೆಳೆಸಲು ಒಂದು ತಲೆ ಮಾರು ಸಾಕಾಗುವುದಿಲ್ಲ.

    ಆದರೆ, ನಗರಗಳ ಬೆಳವಣಿಗೆಗೆ ತಕ್ಕಂತೆ ಸೌಲಭ್ಯ ಕಲ್ಪಿಸಲು ಮರ ಉರುಳಿಸುವುದು ಒಮ್ಮೊಮ್ಮೆ ಅನಿವಾರ್ಯವಾಗುತ್ತದೆ. ಇದರ ನಡುವೆ ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಮಾಡುವ ಪ್ರಯತ್ನವೂ ನಡೆದಿದೆ. ಇಂತಹ ಪ್ರಯತ್ನವಾಗಿ ತುಮಕೂರು ನಗರ ಪಾಲಿಕೆ ಪ್ರಮುಖ ರಸ್ತೆಗಳ ಮರಗಳನ್ನು ಸ್ಥಳಾಂತರಿಸಿ ಅವುಗಳಿಗೆ ಮರುಹುಟ್ಟು ನೀಡುವ ಕಾರ್ಯಕ್ರಮ ರೂಪಿಸಿದೆ. ಈ ಯೋಜನೆಯಡಿ ನಗರದ 70 ಮರಗಳನ್ನು ಸ್ಥಳಾಂತರಿಸಲು ಗುರುತಿಸಲಾಗಿದೆ.

    ನಗರಗಳಲ್ಲಿ ಸಂಚಾರ ಸಾಂದ್ರತೆ ಹೆಚ್ಚಾದಾಗ ಪೂರಕವಾಗಿ ರಸ್ತೆಗಳ ಅಗಲೀಕರಣ ಮಾಡಿ ಜನರಿಗೆ ಅನುಕೂಲ ಮಾಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅಭಿವೃದ್ಧಿಗೆ ತೊಡಕಾಗುವ ಮರಗಳನ್ನು ತೆರವು ಮಾಡಬೇಕಾಗುತ್ತದೆ. ಪ್ರತಿ ಬಾರಿ ಮರ ಕಡಿಯುವಾಗಲೂ ಪರಿಸರಪ್ರೇಮಿಗಳು ಪ್ರತಿಭಟನೆ ವ್ಯಕ್ತಪಡಿಸಿ, ಮರಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಾರೆ. ಕಡಿಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದಾಗ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುತ್ತಾರೆ. ಆದಾಗಿಯೂ ಮರ ಕಡಿಯುವುದು ನಿಂತಿಲ್ಲ.

    ತುಮಕೂರು ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನೂರಾರು ಮರಗಳು ಅಭಿವೃದ್ಧಿಗಾಗಿ ಅಸ್ತಿತ್ವ ಕಳೆದುಕೊಂಡಿವೆ. ಬಿ. ಹೆಚ್. ರಸ್ತೆ ಜೋಡಿ ರಸ್ತೆಯಾಗಿ ಅಗಲವಾಗುವ ಮೊದಲು ಎರಡೂ ಪಕ್ಕದಲ್ಲಿ ನೂರಾರು ವರ್ಷಗಳಿಂದ ಬೆಳೆದಿದ್ದ ಹೆಮ್ಮರಗಳಿದ್ದವು. ರಸ್ತೆ ವಿಸ್ತರಣೆಯಲ್ಲಿ ಒಂದೂ ಉಳಿಯಲಿಲ್ಲ. ಮರ ಉಳಿಯುವುದಿರಲಿ, ಕನಿಷ್ಟ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲೂ ಜಾಗ ಉಳಿದಿಲ್ಲ. ಹಾಗೇ ಕೋತಿ ತೋಪು ರಸ್ತೆ, ಕುಣಿಗಲ್ ರಸ್ತೆ, ಶಿರಾ ರಸ್ತೆಯ ಬೃಹತ್ ಮರಗಳು ರಸ್ತೆ ಅಗಲೀಕರಣಕ್ಕಾಗಿ ಬಲಿಯಾದವು.

      ಈಗ ನಗರದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಹಲವಾರು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ, ಹೀಗಾಗಿ ಇಲ್ಲಿ ಅಡ್ಡಿಯಾಗುವ ಮರಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ, ಪರಿಸರಪ್ರೇಮಿಗಳು ಮರ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಮರ ಉಳಿಸಿಕೊಂಡು ಅಭಿವೃದ್ಧಿ ಮಾಡಿ ಎಂಬ ಒತ್ತಾಯ ಮಾಡಿದ್ದಾರೆ.

    ರಸ್ತೆ ಅಭಿವೃದ್ಧಿ ಜೊತೆಗೆ ಮರಗಳ ರಕ್ಷಣೆ ಹೇಗೆ ಎಂಬ ವಿಚಾರವಾಗಿ ನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಸಂಸ್ಥೆ ಅಧಿಕಾರಿಗಳು ಚರ್ಚಿಸಿ, ತೆರವು ಮಾಡಲೇಬೇಕಾದ ಮರಗಳನ್ನು ಕಡಿಯದೆ ಬೇರೆಡೆಗೆ ಸ್ಥಳಾಂತರಿಸಲು ತೀರ್ಮಾನ ಮಾಡಿದ್ದಾರೆ. ಧಾರ್ಮಿಕ ಮಹತ್ವ ಇರುವ, ಜನ ಪೂಜೆ ಮಾಡಿಕೊಂಡು ಬಂದಿರುವ ಅರಳಿ ಮರ, ಬೇವಿನ ಮರಗಳನ್ನು ಕಡಿದು ಉರುಳಿಸುವುದನ್ನು ಜನ ಸಹಿಸುವುದಿಲ್ಲ, ಸಹಜವಾಗಿ ವಿರೋಧ ಮಾಡುತ್ತಾರೆ, ಅಂತಹ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಜನರಿಗೂ ಸಮಾಧಾನ, ಅಭಿವೃದ್ಧಿ ಕೆಲಸಗಳೂ ಸುಗಮ ಎಂದು ಅಧಿಕಾರಿಗಳು ತೀರ್ಮಾನಕ್ಕೆ ಬಂದಿದ್ದಾರೆ.

     ನಗರದ 70 ಮರಗಳನ್ನು ಸ್ಥಳಾವಕಾಶವಿರುವ ರಸ್ತೆಗಳ ಬದಿ, ಉದ್ಯಾನವನ, ಕಾಲೇಜು ಮೈದಾನದಂತಹ ಕಡೆಗೆ ಸ್ಥಳಾಂತರಿಸಲು ಯೋಜನೆ ರೂಪಿಸಿದ್ದಾರೆ. ಈ ಪೈಕಿ ರಿಂಗ್ ರಸ್ತೆಯ 45, ಡಾ. ರಾಧಾಕೃಷ್ಣ ರಸ್ತೆಯ 18 ಹಾಗೂ ರೈಲ್ವೇ ಸ್ಟೇಷನ್ ರಸ್ತೆಯ 7 ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಮರುಹುಟ್ಟು ನೀಡುವ ಕೆಲಸವನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು ಎಂದು ನಗರ ಪಾಲಿಕೆ ಆಯಕ್ತ ಡಾ. ಭೂಬಾಲನ್ ಹೇಳಿದ್ದಾರೆ.

    ಈ ಕೆಲಸವನ್ನು ಎನ್‍ಜಿಓ ಸಂಸ್ಥೆಯೊಂದು ನಿರ್ವಹಿಸಲಿದ್ದು ಧಾರವಾಡ ಹಾಗೂ ಬೆಳಗಾವಿಯ ತಜ್ಞರು ಮರಗಳನ್ನು ಸ್ಥಳಾಂತರ ಮಾಡಲಿದ್ದಾರೆ. ಬಹತ್ ಮರಗಳನ್ನು ಬೇರು ಸಮೇತ ತೆಗೆದು ಸಾಗಿಸಲು ನೂರು ಟನ್ ತೂಕದ ಸಾಮಥ್ರ್ಯದ ಕ್ರೇನ್‍ಗಳನ್ನು ಬಳಸಲಾಗುತ್ತದೆ. ಇದಕ್ಕೆ ಐದು ಲಕ್ಷ ರೂ ಖರ್ಚಾಗುತ್ತದೆ ಎಂದು ಭೂಬಾಲನ್ ತಿಳಿಸಿದ್ದಾರೆ.

   ಹಸಿರು ತುಮಕೂರು ಪರಿಕಲ್ಪನೆಯಲ್ಲಿ ನಗರದ ಗಿಡಮರಗಳನ್ನ ರಕ್ಷಿಸುವುದು, ಪರಿಸರ ಪ್ರೇಮಿಗಳು ಹಾಗೂ ಧಾರ್ಮಿಕ ನಂಬಿಕೆ ಇರುವ ಜನರ ಭಾವನೆಗೆ ಗೌರವ ನೀಡಿ ಈ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಮತ್ತಷ್ಟು ಗಿಡಗಳನ್ನು ನೆಟ್ಟು, ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ಬೆಳೆಸಲು ನಾಗರೀಕರು ಸಹಕಾರ ನೀಡಬೇಕು ಎಂದು ಶಾಸಕ ಜಿ ಬಿ ಜ್ಯೋತಿಗಣೇಶ್ ಹೇಳಿದ್ದಾರೆ.

    ಉಪ್ಪಾರಹಳ್ಳಿ ಮೇಲು ಸೇತುವೆಗೆ ಸಂಪರ್ಕ ನೀಡುವ ಡಾ. ರಾಧಾಕೃಷ್ಣ ರಸ್ತೆಯನ್ನು ಜೋಡಿ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಮರಗಳ ತೆರವಿನ ವಿಚಾರದಿಂದಲೇ ವಿಳಂಬವಾಗಿದೆ. ಇಲ್ಲಿ ರಸ್ತೆ ಬದಿಗೆ ಉಳಿಯುವ ಮರಗಳನ್ನು ಅಲ್ಲೇ ಉಳಿಸಿ, ಅಗಲವಾಗುವ ರಸ್ತೆಗೆ ಅಡ್ಡಲಾಗಿರುವ ಮರಗಳನ್ನು ಕಡಿಯುವುದನ್ನು ಪರಿಸರ ಕಾಳಜಿಯ ನಾಗರೀಕರು ವಿರೋಧ ಮಾಡಿ ಕಾಮಗಾರಿ ತಡೆದಿದ್ದರು. ಜನರ ಭಾವನೆ ಪುರಸ್ಕರಿಸಿ, ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಬೆಳೆಸಿ, ರಸ್ತೆ ಕಾಮಗಾರಿ ಮುಂದುವರೆಸಲು ತೀರ್ಮಾನ ಮಾಡಲಾಗಿದೆ.

    ನಗರದ 70 ಮರಗಳನ್ನು ಸ್ಥಳಾವಕಾಶವಿರುವ ರಸ್ತೆಗಳ ಬದಿ, ಉದ್ಯಾನವನ, ಕಾಲೇಜು ಮೈದಾನದಂತಹ ಕಡೆಗೆ ಸ್ಥಳಾಂತರಿಸಲು ಯೋಜನೆ ರೂಪಿಸಿದ್ದಾರೆ. ಈ ಪೈಕಿ ರಿಂಗ್ ರಸ್ತೆಯ 45, ಡಾ. ರಾಧಾಕೃಷ್ಣ ರಸ್ತೆಯ 18 ಹಾಗೂ ರೈಲ್ವೇ ಸ್ಟೇಷನ್ ರಸ್ತೆಯ 7 ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಮರುಹುಟ್ಟು ನೀಡುವ ಕೆಲಸವನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು.

 ಡಾ. ಭೂಬಾಲನ್, ನಗರ ಪಾಲಿಕೆ ಆಯಕ್ತರು.

    ಹಸಿರು ತುಮಕೂರು ಪರಿಕಲ್ಪನೆಯಲ್ಲಿ ನಗರದ ಗಿಡಮರಗಳನ್ನ ರಕ್ಷಿಸುವುದು, ಪರಿಸರ ಪ್ರೇಮಿಗಳು ಹಾಗೂ ಧಾರ್ಮಿಕ ನಂಬಿಕೆ ಇರುವ ಜನರ ಭಾವನೆಗೆ ಗೌರವ ನೀಡಿ ಈ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಮತ್ತಷ್ಟು ಗಿಡಗಳನ್ನು ನೆಟ್ಟು, ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ಬೆಳೆಸಲು ನಾಗರೀಕರು ಸಹಕಾರ ನೀಡಲು ಮನವಿ.

 ಜಿ ಬಿ ಜ್ಯೋತಿಗಣೇಶ್, ಶಾಸಕರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link