ತುಮಕೂರು
ಪುಸ್ತಕ ಓದುವ ಹವ್ಯಾಸ ಈಗಿನ ಯುವಜನರಲ್ಲಿ ಕಡಿಮೆಯಾಗುತ್ತಿದೆ. ಮೋಬೈಲ್, ಕಂಪ್ಯೂಟರ್, ಇಂಟರ್ನೆಟ್ ಎಂದು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿದ್ದಾರೆ ಎಂಬ ಆರೋಪದ ನಡುವೆ ಆನ್ಲೈನ್ ಮೂಲಕ ಅವರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳಸಲು ಇ ಡಿಜಿಟಲ್ ಗ್ರಂಥಾಲಯಗಳು ಸಹಾಯಕವಾಗಬಹುದು.
ಇದೇ ಪ್ರಯತ್ನದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಗರದಲ್ಲಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ತುಮಕೂರು ಡಿಜಿಟಲ್ ಗ್ರಂಥಾಲಯ ರೂಪಿಸಿದೆ. ಇದೊಂದು ಪ್ರಾಯೋಗಿಕ ಪ್ರಯತ್ನದಂತೆ ಕಂಡುಬಂದರೂ ಮುಂದೆ ಜನಪ್ರಿಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ನಗರದ ಬಿಜಿಎಸ್ ವೃತ್ತದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಕಟ್ಟಡದ ಮೊದಲ ಮಹಡಿಯಲ್ಲಿ ತುಮಕೂರು ಡಿಜಿಟಲ್ ಗ್ರಂಥಾಲಯ ರೂಪುಗೊಂಡಿದೆ. ಇಲ್ಲಿ 20 ಕಂಪ್ಯೂಟರ್ಗಳಲ್ಲಿ ಏಕಕಾಲದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ.
ಸ್ಮಾರ್ಟ್ ಆಗಲಿರುವ ತುಮಕೂರು ನಗರದಲ್ಲಿ ಇ ಲೈಬ್ರರಿ ಇರಬೇಕೆಂಬ ಆಶಯದಿಂದ ಸ್ಮಾರ್ಟ್ ಸಿಟಿ ಸಂಸ್ಥೆ ಆರಂಭಿಸಿರುವ ಈ ಗ್ರಂಥಾಲಯ ಸೇವೆಯನ್ನು ಜೂನ್ 7ರಂದು ಉಪ ಮುಖ್ಯ ಮಂತ್ರಿ ಡಾ. ಪರಮೇಶ್ವರ್ ಉದ್ಘಾಟಿಸಿದರು. ಇ ಗ್ರಂಥಾಲಯ ಇನ್ನೂ ಪೂರ್ಣ ಪ್ರಮಾಣದಲ್ಲಿ ರೂಪುಗೊಂಡಿಲ್ಲವಾದರೂ ಲಭ್ಯವಿರುವ ಪುಸ್ತಕಗಳ ಓದಿಗೆ ಅವಕಾಶ ಕಲ್ಪಿಸಿದೆ.
ಸದ್ಯ ನಗರ ಕೇಂದ್ರ ಗ್ರಂಥಾಲಯದವರು ಸಲಹೆ ಮಾಡಿರುವಷ್ಟು ಇ-ಕಂಟೆಂಟ್ ಖರೀದಿ ಮಾಡಿ, ಓದುಗರಿಗೆ ನೀಡಲಾಗಿದೆ. ಮುಂದೆ ಓದುಗರು ಅಪೇಕ್ಷಿಸುವ ಅಧ್ಯಯನ ಪುಸ್ತಕಗಳನ್ನು ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸ್ಮಾರ್ಟ್ ಸಿಟಿಯ ಐಸಿಟಿ ವ್ಯವಸ್ಥಾಪಕಿ ದತ್ತಸ್ಮಿತಾ ಹೇಳಿದರು.
ತುಮಕೂರು ಡಿಜಿಟಲ್ ಗ್ರಂಥಾಲಯದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಮತ್ತಿತರ ಭಾಷೆಗಳ 85ಕ್ಕೂ ಹೆಚ್ಚು ಇ-ನ್ಯೂಸ್ ಪೇಪರ್, 400ಕ್ಕೂ ಹೆಚ್ಚು ಇ-ಮ್ಯಾಗಜಿನ್ಸ್, ಕಥೆ, ಕವನ, ಕಾದಂಬರಿ ಸೇರಿದಂತೆ ಪ್ರಸಿದ್ಧ ಲೇಖಕರ ಕೃತಿಗಳು, ಸಾಮಾನ್ಯ ಜ್ಞಾನ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ 200ಕ್ಕೂ ಹೆಚ್ಚು ಮಾದರಿ ಪ್ರಶ್ನೆ ಪತ್ರಿಕೆಗಳು, ಸಂಬಂಧಿಸಿದಂತೆ ಅಧ್ಯಯನದ ಇ-ಪುಸ್ತಕಗಳು ಗ್ರಂಥಾಲಯದಲ್ಲಿ ಓದಲು ಲಭ್ಯ ಇವೆ.
ಓದುಗರು tumkurdijitallibrary.in ಗೆ ಲಾಗ್ಇನ್ ಆಗಿ ಗ್ರಂಥಾಲಯದ ಸದಸ್ಯತ್ವ ಪಡೆಯಬಹುದು. ಈವರೆಗೆ 400ಕ್ಕೂ ಹೆಚ್ಚು ಜನ ಲಾಗ್ಇನ್ ಆಗಿದ್ದಾರೆ. ಮೊಬೈಲ್, ಕಂಪ್ಯೂಟರ್ ಇಂಟರ್ನೆಟ್ ಸೌಲಭ್ಯ ಇರುವವರು ಲಾಗಿನ್ ಆಗಿ ಮನೆಯಲ್ಲೇ ಈ ಗ್ರಂಥಾಲಯದ ಪುಸ್ತಕ ಓದಬಹುದು. ಆ ಸೌಕರ್ಯ ಇಲ್ಲದವರು ತುಮಕೂರು ಡಿಜಿಟಲ್ ಗ್ರಂಥಾಲಯದಲ್ಲಿ ಉಚಿತವಾಗಿ ಓದಲು ಅವಕಾಶವಿದೆ.
ಗ್ರಂಥಾಲಯಕ್ಕೆ ಲಾಗ್ಇನ್ ಆಗಲು ಕಂಪ್ಯೂಟರ್ನಲ್ಲಿ ಹೆಸರು, ಪೋಷಕರ ಹೆಸರು, ಮೊಬೈಲ್ ನಂಬರ್, ಇ-ಮೇಲ್, ಜನ್ಮ ದಿನಾಂಕ, ವಿಳಾಸದ ಕಾಲಂ ಭರ್ತಿಮಾಡಬೇಕು. ಮೊಬೈಲ್ ಅಥವಾ ಇ-ಮೇಲ್ ಗೆ ಒಟಿಪಿ ಬರುತ್ತದೆ ಅದನ್ನು ದಾಖಲಿಸಿ ಲಾಗ್ಇನ್ ಮಾಡಿ ಪಾಸ್ವರ್ಡ್ ರಚಿಸಿಕೊಳ್ಳಬೇಕು. ಪ್ರತಿ ಬಾರಿ ಲಾಗ್ಇನ್ ಆಗುವಾಗ ಹೆಸರು ಅಥವಾ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಬಳಸಬೇಕು. ಸದ್ಯಕ್ಕೆ ಗ್ರಂಥಾಲಯದ ಸದಸ್ಯತ್ವ ಉಚಿತವಾಗಿದೆ.
ಡಿಜಿಟಲ್ ಗ್ರಂಥಾಲಯದಲ್ಲಿ ಯೂಟ್ಯೂಬ್, ಫೇಸ್ಬುಕ್ ಮುಂತಾದ ಮನರಂಜನೆಯಂತಹ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್ ಮಾಡಲಾಗಿದೆ, ಗಂಭೀರ ಅಧ್ಯಯನಕ್ಕಷ್ಟೇ ಅವಕಾಶ ಕಲ್ಪಿಸಲಾಗದೆ ಎಂದು ದತ್ತಸ್ಮಿತಾ ಹೇಳಿದರು.
ತುಮಕೂರು ಡಿಜಿಟಲ್ ಗ್ರಂಥಾಲಯ ಒಂದು ರೀತಿಯಲ್ಲಿ ಇನ್ನೂ ಬಾಲ್ಯಾವಸ್ಥೆಯಲ್ಲಿದೆ, ಅಭಿವೃದ್ಧಿಯ ಹಂತದಲ್ಲಿದೆ. ಇನ್ನೂ ಗೋ-ಲೈವ್ ಆಗಬೇಕಾಗಿದೆ. ತಾಂತ್ರಿಕ ದೋಷಗಳು ಎದುರಾಗುತ್ತವೆ, ಕಂಡುಬರುವ ದೋಷಗಳನ್ನು ಪಟ್ಟಿ ಮಾಡಿ ನಿವಾರಿಸಲಾಗುತ್ತದೆ. ಜೊತೆಗೆ ಓದುಗರ ಸಲಹೆಗಳನ್ನು ಸ್ವೀಕರಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಉದ್ಯೋಗ ಮಾಹಿತಿ, ಐಎಎಸ್, ಕೆಎಎಸ್ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ಅಗತ್ಯವಿರುವ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಲಭ್ಯವಾಗಲಿ ಎಂದು ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಕೃಷ್ಣಮೂರ್ತಿ ಹೇಳಿದರು.ಡಿಜಿಟಲ್ ಗ್ರಂಥಾಲಯದ ಬಗ್ಗೆ ಹೆಚ್ಚು ಪ್ರಚಾರದ ಅಗತ್ಯವಿದೆ. ವಿಶೇಷವಾಗಿ ಇದು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಹೀಗಾಗಿ, ಶಾಲಾ ಕಾಲೇಜುಗಳಲ್ಲಿ ಡಿಜಿಟಲ್ ಗ್ರಂಥಾಲಯ ಪರಿಚಯಿಸಲು ಪ್ರಚಾರ ಕಾರ್ಯ ಆರಂಭಿಸುವುದಾಗಿ ದತ್ತಸ್ಮಿತಾ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
