ದಾವಣಗೆರೆ:
ಪೋಲಿಯೋ ನಿರ್ಮೂಲನೆ ಸೇರಿದಂತೆ ರೋಟರಿ ಸಂಸ್ಥೆಯ ಧ್ಯೇಯೊದ್ದೇಶಗಳನ್ನು ಸಾರುವ ಉದ್ದೇಶದಿಂದ ಇಲ್ಲಿನ ರೋಟರಿ ಕ್ಲಬ್ನ ಇಬ್ಬರು ಮಹಿಳಾ ಸದಸ್ಯೆಯರು ದಾವಣಗೆರೆಯಿಂದ ಗುಜರಾತ್ ನರ್ಮದಾ ತೀರದಲ್ಲಿ ನಿರ್ಮಾಣವಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯ ವರೆಗೂ ಏಕತೆ ಕಡೆಗೆ ಪಯಣ ಬೆಳೆಸಲಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಬೇತೂರ್ ಜಗದೀಶ್, ದಾವಣಗೆರೆ ರೋಟರಿ ಕ್ಲಬ್ನ ಮಹಿಳಾ ಸದಸ್ಯೆಯರಾದ ಶಾರದ ಮಾಗಾನಹಳ್ಳಿ ಹಾಗೂ ಆಲೂರು ರಾಜೇಶ್ವರಿ ನ.23ರಂದು ಬೆಳಿಗ್ಗೆ 5 ಗಂಟೆಗೆ ಏಕತಾ ಪ್ರತಿಮೆಯ ಕಡೆಗೆ ಪಯಣ ಬೆಳೆಸಲಿದ್ದಾರೆಂದು ಹೇಳಿದರು.
ಕಾರಿನಲ್ಲಿ 1117 ಕಿ.ಮೀ. ಪ್ರಯಾಣ ಮಾಡಲಿರುವ ಈ ಇಬ್ಬರು ಸದಸ್ಯೆಯರು ನ.24 ಹಾಗೂ 25ರಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆಯಲಿರುವ ರೋಟರಿ ಸಂಸ್ಥೆಯ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿ. ನಂತರ ಗುಜರಾತ್ನ ನರ್ಮದಾ ತೀರದ ವರೆಗೆ ಪಯಣ ಕೈಗೊಂಡು, ಅಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ವೀಕ್ಷಿಸಿಕೊಂಡು, ಅಲ್ಲಿರುವ ವಿಶೇಷತೆಗಳ ಬಗ್ಗೆ ತಿಳಿದುಕೊಂಡು ವಾಪಾಸ್ ಅಗುವ ವೇಳೆಯಲ್ಲಿ ಹಾವೇರಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳ ಸುಮಾರು 20 ರೋಟರಿ ಕ್ಲಬ್ಗಳ ಮಹಿಳಾ ಸದಸ್ಯೆಯರನ್ನು ಭೇಟಿ ಮಾಡಿ, ರೋಟರಿ ಸಂಸ್ಥೆಗಳ ಧ್ಯೇಯೊದ್ದೇಶಗಳ ಬಗ್ಗೆ ಚರ್ಚೆ ನಡೆಸುವುದರ ಜೊತೆಗೆ ಭಾರತೀಯ ಸಂಸ್ಕತಿ, ಪರಂಪರೆ ಬಗ್ಗೆಯೂ ಜಾಗೃತಿ ಮೂಡಿಸಲಿದ್ದಾರೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಏಕತೆ ಕಡೆಗೆ ಪಯಣ ಬೆಳೆಸಲಿರುವ ರೋಟರಿ ಕ್ಲಬ್ನ ಮಹಿಳಾ ಸದಸ್ಯೆಯರಾದ ಶಾರದ ಮಾಗಾನಹಳ್ಳಿ, ಆಲೂರು ರಾಜೇಶ್ವರಿ, ವಿಶ್ವಜಿತ್ ಎ. ಜಾಧವ್, ಪಿ.ಬಿ.ಪ್ರಕಾಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
