ಬೆಂಗಳೂರು:
ಸುಮಾರು ವರುಷಗಳಿಂದ ನೆನೆಗುದಿಗೆ ಬಿದಿದ್ದ ಉಡುಪಿ-ಮಣಿಪಾಲ ಅವಳಿ ನಗರಗಳಿಗೆ ನೀರು ಕೊಡುವ ಯೋಜನೆಗೆ ಮರುಜೀವ ಬಂದಿದೆ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅಡಿಯಲ್ಲಿ ಬರುವ ಕುಡಿಯುವ ನೀರಿನ ಯೋಜನೆಗಾಗಿ 282 ಕೋಟಿ ರೂಪಾಯಿ ಮೀಸಲಿಡಲಾಗಿತ್ತು .
ವಿಧಾನ ಪರಿಷತ್ತಿನ ಅರ್ಜಿ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಮೃತ್ ಯೋಜನೆಯ ಮೂಲ ನಕ್ಷೆಯಂತೆ, ವಾರಾಹಿಯಿಂದ ಶುದ್ಧೀಕರಿಸದೆ ಇರುವ ನೀರನ್ನು ಪೈಪ್ ಲೈನ್ ಮೂಲಕ ಬಜೆಯ ಶುದ್ಧೀಕರಣ ಘಟಕಕ್ಕೆ ತಂದು ಅಲ್ಲಿ ಶುದ್ಧೀಕರಣ ಮಾಡಿ ಅಲ್ಲಿಂದ ಮಣಿಪಾಲಕ್ಕೆ ನೀರು ಕೊಂಡೊಯ್ಯುವ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಇದಕ್ಕೆ ರೈತ ಸಂಘದವರು ಅರ್ಜಿ ಸಮಿತಿಗೆ ಆಕ್ಷೇಪಣೆ ಸಲ್ಲಿಸಿದ್ದ ಕಾರಣ, ಇಂದು ನಡೆದ ಸಭೆಯಲ್ಲಿ ರೈತರ ಅಳಲನ್ನು ಆಲಿಸಿದ ಸಮಿತಿಯೂ ಪರ್ಯಾಯ ಮಾರ್ಗದ ನಿರ್ಧಾರಕ್ಕೆ ಬಂದಿದೆ .
ಇಂದು ನಡೆದ ಸಭೆಯಲ್ಲಿ, ಬರತ್ಕಲ್ ಪ್ರದೇಶದಲ್ಲಿ 50 ಎಮ್.ಎಲ್.ಡಿಯ ಶುದ್ಧೀಕರಿಸಿದ ಘಟಕವನ್ನು ನಿರ್ಮಾಣ ಮಾಡಿ ಅಲ್ಲಿಂದ ಪೈಪ್ ಲೈನ್ ಮೂಲಕ ನೇರವಾಗಿ ಮಣಿಪಾಲದ ಜಿ.ಎಲ್.ಆರ್.ಗೆ ನೀರು ತಂದು ಅಲ್ಲಿಂದ ನೀರನ್ನು ವಿತರಣೆ ಮಾಡಲಾಗುತ್ತದೆ ಎಂಬ ಸಮಿತಿ ನಿರ್ಧಾರ ತೆಗೆದುಕೊಂಡಿದೆ .
ಪೈಪ್ ಲೈನ್ ಹಾದು ಹೋಗುವ ಎಲ್ಲಾ ಪಂಚಾಯತಿಗಳಿಗೆ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲು ಸಮಿತಿ ನಿರ್ಧರಿಸಿದೆ. ಅಲ್ಲದೇ ದಾರಿ ಮಧ್ಯೆ ಪೈಪ್ ಅಳವಡಿಸಲು ರಸ್ತೆಯನ್ನು ಅಗೆದಲ್ಲಿ ಮತ್ತೆ ಅದನ್ನು ಮರುಡಾಮರೀಕರಣ ನಡೆಸಿ ಕೊಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ತಿಳಿದು ಬಂದಿದೆ.
ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ವಾರಾಹಿ ಯೋಜನೆಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ಮತ್ತು ತಕ್ಷಣ ಕಾಮಗಾರಿ ಪ್ರಾರಂಭಿಸಲು ಮರು ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/Meeting-02.gif)