ಶಿರಾ:
ಸಮಾಜದಲ್ಲಿ ಅನೇಕ ಶಾಲಾ ಮಕ್ಕಳು ತಮ್ಮ ಶೈಕ್ಷಣಿಕ ಭವಿಷ್ಯಕ್ಕಾಗಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವುದು ಒಂದೆಡೆಯಾದರೆ ಅತ್ಯಂತ ಕಡುಬಡತನದ ನಿರಾಶ್ರಿತರು ಜೀವನವನ್ನು ಸಾಗಿಸುವುದು ಕೂಡಾ ಕಷ್ಟವಾಗಿರುವಂತಹ ಸಂದರ್ಬದಲ್ಲಿ ಅಂತಹ ನಿರಾಶ್ರಿತರ ಬದುಕನ್ನು ಕಟ್ಟಿಕೊಡುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಪುರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ ಹೇಳಿದರು.
ಶಿರಾ ತಾಲ್ಲೂಕಿನ ಮೇಲ್ಕುಂಟೆ ಗ್ರಾಮದ ನವನೀತ ಬಾಲಕೃಷ್ಣ ದೇವಸ್ಥಾನದಲ್ಲಿ ಪಾರಿಜಾತ ಚಾರಿಟಬಲ್ ಟ್ರಸ್ಟ್ ಹಾಗೂ ಪರಿಮಳ ಚಾರಿಟಬಲ್ ಟ್ರಸ್ಟ್ ವತಿಯಿಂದ ದಿ.ಆರ್.ಮಧುಸೂದನ್ ಹಾಗೂ ಆರ್.ರಾಘವೇಂದ್ರ ಅವರ ಸ್ಮರಣಾರ್ಥ ಅರ್ಹರಿಗೆ ರಗ್ಗುಗಳ ವಿತರಣೆ ಮಾಡಿ ಅವರು ಮಾತನಾಡಿದರು.
ಯಾವುದೇ ಸಂಘ-ಸಂಸ್ಥೆಗಳು ಆಯಾ ಸ್ಥಳೀಯ ಜನತೆಯ ನಿರಾಶ್ರಿತರ ಸಮಸ್ಯೆಗಳಿಗೆ ಸ್ಪಂಧಿಸುವಂತಾಗಬೇಕು. ಕಳೆದ ಹಲವು ವರ್ಷಗಳಿಂದಲೂ ಪಾರಿಜಾತ ಹಾಗೂ ಪರಿಮಳ ಚಾರಿಟಬಲ್ ಟ್ರಸ್ಟ್ಗಳು ನಿರಂತರವಾಗಿ ಸೇವಾ ಕೈಂಕರ್ಯಗಳಲ್ಲಿ ತೊಡಗಿರುವುದು ಶ್ಳಾಘನಾರ್ಹ ಸಂಗತಿ ಎಂದರು.
ಪಾರಿಜಾತ ಚಾರಿಟಬಲ್ ಟ್ರಸ್ಟ್ನ ಶ್ಯಾಮಾಜೋಹಿಸ್ ಮಾತನಾಡಿ ವಿವಿಧ ಸಾಹಿತಿಗಳ ಪುಸ್ತಕ ಬಿಡುಗಡೆಯೂ ಸೇರಿದಂತೆ ಕಡುಬಡವರ ಸಮಸ್ಯೆಗಳಿಗೆ ಪಾರಿಜಾತ ಟ್ರಸ್ಟ್ ತನ್ನದೇ ಆದ ಅಳಿಲು ಸೇವೆ ಮಾಡುತ್ತಾ ಬಂದಿದೆ ಎಂದರು.
ಪರಿಮಳ ಚಾರಿಟಬಲ್ ಅಧ್ಯಕ್ಷ ಎಸ್.ಜೆ.ರಾಜಣ್ಣ ಮಾತನಾಡಿ ಈ ಹಿಂದೆ ಗುಡಿಸಲುಗಳು ಆಕಸ್ಮಿಕ ಬೆಂಕಿಗೆ ಈಡಾದ ಸಂದರ್ಬದಲ್ಲಿ ನಮ್ಮ ಟ್ರಸ್ಟ್ ಅವರ ಸಂಕಷ್ಟಗಳಿಗೆ ಅಲ್ಪವಾದರೂ ಸ್ಪಂಧಿಸಿದೆ ಎಂದರು. ಪ್ರಾಂಶುಪಾಲ ಪಾಂಡುರಂಗಯ್ಯ, ಆರ್.ರಾಮು, ಬಿ.ಆರ್.ನಾಗಭೂಷಣ್, ಎಂ.ಸಿ.ರಾಘವೇಂದ್ರ ಮುಂತಾದವರು ಹಾಜರಿದ್ದರು.