ಚಳ್ಳಕೆರೆ
ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ದಾಖಲಾತಿ ಶಿಕ್ಷಣ ಪಡೆಯುವಂತಹ ವಾತಾವರಣವನ್ನು ಶಿಕ್ಷಕ ವೃಂದ ನಿರ್ಮಾಣ ಮಾಡಬೇಕಿದೆ. ವಿಶೇಷ ದಾಖಲಾತಿ ಅಂದೋಲನ ಯಶಸ್ಸಿಯಾದಲ್ಲಿ ಮಾತ್ರ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮುಖ್ಯ ಶಿಕ್ಷಕರು ಶ್ರಮಿಸಬೇಕೆಂದು ಹಿರೇಹಳ್ಳಿ ಕ್ಲಸ್ಟರ್ ಸಿಆರ್ಪಿ ಎನ್.ಮಾರಣ್ಣ ತಿಳಿಸಿದರು.
ಅವರು, ತಾಲ್ಲೂಕಿನ ಹಿರೇಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಅಂದೋಲನ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಸ್ತುತ ಹಿರೇಹಳ್ಳಿ ಕ್ಲಸ್ಟರ್ ವಿಭಾಗದ 26 ಶಾಲೆಗಳಲ್ಲೂ ಹೆಚ್ಚಿನ ದಾಖಲಾತಿಯನ್ನು ಮಾಡುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರೂ ಸೇರಿದಂತೆ ಎಲ್ಲಾ ಶಿಕ್ಷಕರು ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು, ಶಾಲಾ ದಾಖಲಾತಿ ಅಂದೋಲನ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತ ಮೇ 29 ರಿಂದ 31, ಎರಡನೇ ಹಂತ ಜೂನ್ 1 ರಿಂದ 30ರ ತನಕ ನಡೆಯಲಿದೆ ಎಂದರು.
ಈ ತಿಂಗಳ 29ರಂದು ಶಾಲೆಗಳು ಪ್ರಾರಂಭವಾಗಲಿದ್ದು, ಶಾಲಾ ಪ್ರವೇಶವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕಿದೆ. ಶಿಕ್ಷಕ ಸಮೂಹಕ್ಕೆ ಶಾಲಾ ಪ್ರವೇಶವೇ ಹಬ್ಬವಿದ್ದಂತೆ. ಅಂದು ಶಾಲೆಯನ್ನು ತಳಿರುತೋರಣಗಳಿಂದ ಸಿಂಗರಿಸಿ, ಮಕ್ಕಳಿಗೆ ಸಿಹಿ ನೀಡಿ ಸ್ವಾಗತಿಸಬೇಕು. ಶಾಲೆಯಲ್ಲಿ ಪಠ್ಯಪುಸ್ತುಕ, ಸಮವಸ್ತ್ರ ನೀಡುವ ಮೂಲಕ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ರಾಜಪ್ಪ, ಎಂ.ಹನುಮಂತಪ್ಪ, ಕೆ.ಎಂ.ಕೇಶವಮೂರ್ತಿ, ರುದ್ರಮುನಿ, ಶ್ರೀನಿವಾಸ್, ಖಾಲಿದ್ಹುಸೇನ್, ಜಿ.ಟಿ.ಬಸವರಾಜು, ತೇಜೋಮೂರ್ತಿ, ಮಲ್ಲಪ್ಪ, ಕರಿಬಸಪ್ಪ, ಪ್ರಕಾಶ್, ಬಿ.ನಿಜಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








