ಪಾವಗಡ
ಕಳೆದೆರಡು ದಿನಗಳ ಹಿಂದೆ ಸಂಸದ ಎನ್. ನಾರಾಯಣಸ್ವಾಮಿಯರಿಗೆ ಪ್ರವೇಶ ನಿರಾಕರಿಸಿದ್ದ ಘಟನೆಗೆ ಸಂಬಂಧಿಸಿದಂತೆ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಬುಧವಾರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಎಸ್ಪಿ ಡಾ. ಕೋನವಂಶಿಕೃಷ್ಣ, ಜಿ.ಪಂ. ಸಿ.ಎಸ್. ಶುಭಕಲ್ಯಾಣ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ, ಮಧುಗಿರಿ ಡಿ.ಡಿ.ಪಿ.ಯು, ರವಿಶಂಕರರೆಡ್ಡಿ, ಡಿ.ವೈ.ಎಸ್.ಪಿ. ಧರಣೇಶ್, ರಾಜಕುಮಾರ್, ತಹಸೀಲ್ದಾರ್ ಡಿ.ವರದರಾಜು ಹಟ್ಟಿಗೆ ಭೇಟಿ ನೀಡಿದ್ದರು. ಗೊಲ್ಲ ಸಮಾಜದ ಮುಖಂಡರುಗಳು ಹಾಗೂ ಹಟ್ಟಿಯ ಜನತೆಯೊಂದಿಗೆ ಶಾಂತಿ ಸಭೆಯನ್ನು ನಡೆಸಿ, ಅಸ್ಪøಶ್ಯತೆ ನಿವಾರಣೆಯ ಬಗ್ಗೆ ಅರಿವು ಮೂಡಿಸಿದರು.
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿ, ಇನ್ನು ಮುಂದೆ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಅಸ್ಪøಶ್ಯತೆ ಬಗ್ಗೆ ಚಕಾರ ಎತ್ತಬಾರದು. ಇಂದಿನ ಆಧುನಿಕ ಯುಗದಲ್ಲಿ ಚಂದ್ರಲೋಕಕ್ಕೆ ಪ್ರಯಾಣ ಮಾಡುವಾಗ ಅಸ್ಪøಶ್ಯತೆ ಬಗ್ಗೆ ಮಾತನಾಡುವುದು ಅಪರಾಧ. ಗ್ರಾಮದಲ್ಲಿನ ವಿದ್ಯಾಭ್ಯಾಸದ ಬಗ್ಗೆ, ಅಭಿವೃದ್ದಿ ಬಗ್ಗೆ, ಆರೋಗ್ಯದ ಬಗ್ಗೆ ಚರ್ಚೆ ಮಾಡಬೇಕು. ಸಮಸ್ಯೆ ಇದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಗ್ರಾಮಕ್ಕಾಗಲಿ, ದೇವಸ್ಥಾನಕ್ಕಾಗಲಿ ಯಾರೆ ಬಂದರೂ ಅಡ್ಡಿ ಪಡಿಸಬಾರದು. ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕು. ಅಸ್ಪøಶ್ಯತೆ ಬಗ್ಗೆ ಮಾತನಾಡುವುದು ಎಲ್ಲರಿಗೂ ನೋವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಎಸ್ಪಿ ಡಾ. ಕೋನ ವಂಶಿಕೃಷ್ಣ ಮಾತನಾಡಿ, ಹಟ್ಟಿಯೂ ಈಗ ಅಸ್ಪøಶ್ಯತೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದುಕೊಂಡಿದೆ. ಯಾರೆ ಮಾಡಿದ್ದರೂ ತಪ್ಪು ಆಗಿದೆ, ಅದನ್ನು ಸರಿಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ಅರಿವನ್ನೂ ಮೂಡಿಸುತ್ತಾ ಬಂದಿದ್ದರೂ, ಇನ್ನೂ ಅಸ್ಪøಶ್ಯತೆ ಆಚರಣೆ ಮಾಡುತ್ತಿರುವುದು ದುರಂತವೇ ಸರಿ. ಬಯೋಕಾನ್ ಕಂಪನಿಯ ತಂಡದೊಡನೆ ನಾರಾಯಣಸ್ವಾಮಿಯವರು ನಿಮ್ಮ ಹಟ್ಟಿಯನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಪಡಿಸಲು ಬಂದಾಗ, ನೀವು ತಡೆದಿರುವುದು ಎಷ್ಟು ಸರಿ? ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇನ್ನು ಮುಂದೆ ಈ ರೀತಿಯಾಗದಂತೆ ಪೋಲೀಸ್ ಇಲಾಖೆ ಎಚ್ಚರ ವಹಿಸುತ್ತದೆ ಎಂದರು.
ಜಿ.ಪಂ. ಸಿ.ಎಸ್. ಶುಭಕಲ್ಯಾಣ್ ಮಾತನಾಡಿ, ಈ ಘಟನೆಯ ಬಗ್ಗೆ ಕೇಳಿ ಆಶ್ಚರ್ಯವಾಯಿತು. ಅಭಿವೃದ್ದಿ ಬಗ್ಗೆ ಯೋಚನೆ ಮಾಡಬೇಕು. ಗ್ರಾಮ ಈಗ ಕುಖ್ಯಾತಿಯನ್ನು ಪಡೆದುಕೊಂಡಿದೆ. ಈ ಕುಖ್ಯಾತಿಯನ್ನು ತೊಡೆದು ಹಾಕಬೇಕು. ಬೆಂಗಳೂರಿಗೆ ಹತ್ತಿರ ಇರುವ ಪಾವಗಡ ತಾಲ್ಲೂಕಿನಲ್ಲಿ ಅಸ್ಪøಶ್ಯತೆ ಜೀವಂತವಾಗಿರುವುದಕ್ಕೆ ಬೇಸರವಾಗುತ್ತಿದೆ ಎಂದರು.
ಸಭೆಯಲ್ಲಿ ಯಾದವ ಸಮಾಜದ ಮುಖಂಡರಾದ ವಕೀಲ ನರಸಿಂಹರೆಡ್ಡಿ, ತಾ. ಯಾದವ ಸಂಘದ ಅಧ್ಯಕ್ಷ ಮುಗದಾಳಬೆಟ್ಟ ನರಸಿಂಹಪ್ಪ, ಅಕ್ಕಲಪ್ಪ ನಾಯ್ಡು, ತಾ.ಬಿ.ಜೆ.ಪಿ. ಅಧ್ಯಕ್ಷ ಜಿ.ಟಿ. ಗಿರೀಶ್ ಮಾತನಾಡಿದರು.ಮಧುಗಿರಿ ಡಿ.ವೈ.ಎಸ್.ಪಿ. ಧರಣೇಶ್, ತಾ. ಸಮಾಜ ಕಲ್ಯಾಣಾಧಿಕಾರಿ ಶಿವಣ್ಣ, ಬಿ.ಸಿ.ಎಂ. ಅಧಿಕಾರಿ ಸುಬ್ಬರಾಯ, ಪಾವಗಡ ಸಿ.ಐ. ವೆಂಕಟೇಶ್, ಯಾದವ ಮುಖಂಡರಾದ ಕೋಳಿಬಾಲಾಜಿ, ಕೃಷ್ಣಗಿರಿತಿಪ್ಪೇಸ್ವಾಮಿ, ಮೈಲಾರರೆಡ್ಡಿ, ಯುವಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಕೆ.ಟಿ.ಹಳ್ಳಿ ಚಿತ್ತಯ್ಯ ಹಾಜರಿದ್ದರು.
ಇದೇ ವೇಳೆ ಗ್ರಾಮಸ್ಥರು ತಮ್ಮ ಹಟ್ಟಿಗೆ ಮೂಲಭೂತಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಂತರ ಅಧಿಕಾರಿಗಳ ತಂಡ ಹಟ್ಟಿಯಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತನಾಡಿದರು . ಮುಖ್ಯ ಶಿಕ್ಷಕ ನರಸಪ್ಪ ಶಾಲೆ ಶಿಥಿಲವಾಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಬಿಸಿಯೂಟವನ್ನು ಪರಿಶೀಲಿಸಿದರು.
ಆಗ ಬಿಸಿಯೂಟದ ಸಿಬ್ಬಂದಿ ನಾಗಲಕ್ಷ್ಮಮ್ಮ, ಚಿತ್ತಮ್ಮ ಕಳೆದ 6 ತಿಂಗಳಿಂದ ನಮಗೆ ಸಂಬಳ ನೀಡಿಲ್ಲ ಎಂದು ಸಿ.ಎಸ್. ಶುಭಕಲ್ಯಾಣ್ ಗಮನಕ್ಕೆ ತಂದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಅಪೌಷ್ಟಿಕ ಮಕ್ಕಳ ಬಗ್ಗೆ ಹಾಗೂ ವೈದ್ಯರಿಂದ ಚಿಕಿತ್ಸಾ ಕ್ರಮದ ಬಗ್ಗೆ ಕಾರ್ಯಕರ್ತೆ ತಿಮ್ಮಕ್ಕ ರಿಂದ ಮಾಹಿತಿ ಪಡೆದುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
