ಅತ್ತೆ, ಗಂಡನ ಕಾಟಕ್ಕೆ ಬೇಸತ್ತವರನ್ನು ಮೇಲಕ್ಕೆತ್ತಿ

ದಾವಣಗೆರೆ:

    ಮನೆಗಳಲ್ಲಿ ಅತ್ತೆ ಮತ್ತು ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕೆಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಕರೆ ನೀಡಿದರು.

   ನಗರದ ಗುರುಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಲ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಮಹಿಳಾ ಶಕ್ತಿ ಕೇಂದ್ರ ಮತ್ತು ಸ್ತ್ರೀಶಕ್ತಿ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಷಣ್ ಅಭಿಯಾನ್ ಪಕ್ವಾಡ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

   ಇಂದು ಅತೀ ಎತ್ತರಕ್ಕೆ ಬೆಳೆದಿರುವ ಮಹಿಳಾ ಸಂಘಟನೆಗಳು ಮನೆಗಳಲ್ಲಿ ಅತ್ತೆ ಮತ್ತು ಗಂಡ ಕೊಡುವ ಕಾಟದಿಂದ ಬೇಸತ್ತಿರುವ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದರೆ, ಮಹಿಳಾ ದಿನಾಚರಣೆ ಮಾಡಿದಕ್ಕೂ ಸಾರ್ಥಕವಾಗಲಿದೆ ಎಂದರು.

    ಸಮಾಜದ ಹೊರ ದುಡಲ್ಪಟ್ಟಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ಮುಖ್ಯವಾಹಿನಿಗೆ ತಂದು ಅವರಿಬ್ಬರಿಗೂ ಬದುಕಲು ಅವಕಾಶ ಮಾಡಿಕೊಡುವ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ರಾಜ್ಯದ ಕಣ್ಣು ತೆರೆಸುವ ಕೆಲಸ ಮಾಡಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಇಂದು ಸಮಾಜದಲ್ಲಿ ಹೆಣ್ಣು ಹುಟ್ಟಿದರೆ ನೋವು ಪಡುತ್ತಾರೆ. ಆದರೆ, ಗಂಡು ಹುಟ್ಟಿದರೆ ಊರು ತುಂಬಾ ಸಕ್ರಿ ಹಂಚಿ ಬರುವವರಿದ್ದಾರೆ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಹುಟ್ಟಿದ ಮಗು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಂದೆ-ತಾಯಿಯ ಆದ್ಯ ಕರ್ತವ್ಯವಾಗಬೇಕೆಂದು ಕಿವಿಮಾತು ಹೇಳಿದರು.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮನುಷ್ಯ ಎಲ್ಲಕ್ಕಿಂತ ಮಿಗಿಲಾಗಿ ಮನಷ್ಯತ್ವ ಬೆಳೆಸಿಕೊಳ್ಳಬೇಕು. ಹೆಣ್ಣನ್ನು ಗೌರವದಿಂದ ಕಾಣಬೇಕು. ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತದೋ ಅಲ್ಲಿನ ವಾತಾವರಣ ಬಹಳ ಸೌಖ್ಯದಿಂದ ಕೂಡಿರುತ್ತದೆ. ಹೆಣ್ಣುತನಕ್ಕೆ ಗೌರವ ನೀಡುವ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಬೇಕೆಂಬ ಉದ್ದೇಶದಿಂದ ಮೌಢ್ಯತೆಯ ಅಂಧಕಾರದಿಂದ ಊರಿನಿಂದ ಹೊರ ದೂಡಲ್ಪಟ್ಟಿದ್ದ ಅಣಬೂರು ಗೊಲ್ಲರಹಟ್ಟಿಯ ಶಿವಮ್ಮನನ್ನು ಇಲ್ಲಿ ಸನ್ಮಾನಿಸಲಾಗುತ್ತಿದೆ ಎಂದರು.

    ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಕುಟುಂಬದಲ್ಲಿ ಮಹಿಳೆಯರಿಗೆ ಪುರುಷರ ಬೆಂಬಲ ಬೇಕು. ಸ್ಥಳೀಯ ಸಂಸ್ಥೆಗಳು, ಪಂಚಾಯ್ತಿಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಇದೆಲ್ಲದಕ್ಕೂ ನಮ್ಮ ಮನೆಗಳಲ್ಲಿನ ಪುರುಷರ ಬೆಂಬಲವೇ ಕಾರಣವಾಗಿದೆ ಎಂದರು.

   ಪುರುಷರನ್ನು ದೂಷಿಸುವ ಬದಲು ಪರಸ್ಪರ ಸಹಬಾಳ್ವೆ ನಡೆಸುವುದು ಒಳ್ಳೆಯದು. ಹೆಣ್ಣುಮಕ್ಕಳು ಎಂದಿಗೂ ಸಾಧಕರೇ. ಕುಟುಂಬ ನಿರ್ವಹಣೆ ಎಂಬುದೊಂದು ದೊಡ್ಡ ಸಾಧನೆ. ಇತ್ತೀಚೆಗೆ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾರೆ. ಆದರೆ ನಮ್ಮನ್ನು ನಾವೇ ತುಳಿದುಕೊಳ್ಳದೇ ಮುಂದೆ ಬರಬೇಕು ಎಂದರು.

    ಜಿ.ಪಂ.ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ವರ್ಷವಿಡೀ ಮಹಿಳಾ ದಿನಾಚರಣೆಯೇ. ಯಾಕೆಂದರೆ ಮಹಿಳೆ ಇಲ್ಲದ ಮನೆಯನ್ನು ಕಲ್ಪನೆ ಕೂಡ ಮಾಡಿಕೊಳ್ಳಲಿಕ್ಕಾಗುವುದಿಲ್ಲ. ಮಹಿಳೆ ಮತ್ತು ಪುರುಷ ಸೇರಿ ಈ ಸಮಾಜವಿದ್ದು, ಸಮಬಾಳು-ಸಮಪಾಲು ಎಂದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವ ಎಷ್ಟೇ ಇದ್ದರೂ ನಮ್ಮ ಅಸ್ತಿತ್ವವನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ ಎಂದ ಅವರಿ, ಅಧಿಕಾರಿಗಳಾಗೋಣ, ರಾಜಕಾರಣಿಗಳಾಗೋಣ, ಪೈಲಟ್ ಆಗೋಣ, ಮತ್ತೆ ಏನೆನೆಲ್ಲಾ ಸಾಧಿಸೋಣ ಆದರೆ ಮೊದಲು ಮಹಿಳೆಯರು ಆಗೋಣ ಎಂದರು.

    ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ ರಾಮಚಂದ್ರಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಸ್ರ್ತೀ ಶಕ್ತಿ ಸಂಘಗಳ ಮೂಲಕ ಮಹಿಳೆಯರು ಉತ್ತಮವಾದ ಸಾಧನೆಗಳತ್ತ ಮುಖ ಮಾಡಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ 5033 ಮಹಿಳಾ ಸಂಘಟನೆಗಳಿವೆ. ಅದರಲ್ಲಿ 70181 ಜನ ಮಹಿಳಾ ಸದಸ್ಯರಿದ್ದಾರೆ. 4040 ಮಹಿಳಾ ಸಂಘಟನೆಗಳು ಬ್ಯಾಂಕ್ ವಹಿವಾಟಿನಲ್ಲಿ ಸಹಭಾಗಿತ್ವ ಹೊಂದಿವೆ. ಸಮಾಜದಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಮಹಿಳಾ ಸಂಘಟನೆಗಳು ತೋರಿಸಿಕೊಟ್ಟಿವೆ ಎಂದರು.

   ಕರ್ನಾಟಕ ಸರ್ಕಾರ ರಾಜ್ಯ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಪಾಲಾಕ್ಷಪ್ಪ ಮಾತನಾಡಿ, ಪುರುಷರು ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗುವ ವರೆಗೂ ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಇತರೆ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಸಾಧ್ಯವಿಲ್ಲ ಎಂದು ಹೇಳಿದರು.

   ‘ಮಹಿಳೆಯರ ಸಮಸ್ಯೆಗಳು ಮತ್ತು ಸವಾಲುಗಳ’ ಕುರಿತು ಉಪನ್ಯಾಸ ನೀಡಿದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅರುಣಾ ಕುಮಾರಿ ಬಿರಾದಾರ, ಚೈತನ್ಯರೂಪಿಯಾದ, ಮನುಕುಲವನ್ನು ಮುನ್ನಡೆಸುವ ಮಹಿಳೆಯನ್ನು ಅನಾದಿ ಕಾಲದಿಂದ ಬಂಧಿಸಿಡುವ ಪ್ರಯತ್ನ ನಡೆಯುತ್ತಿದೆ. ಇತಿಹಾಸದಲ್ಲಿಯೂ ನಾವು ಮಹಿಳೆ ಚೈತನ್ಯಪೂರ್ಣಳಾಗಿ ಕಾಣಬಹುದು. ಆದರೆ ಆಕೆಗೆ ಹಿಂದಿನಿಂದಲೂ ಅನೇಕ ಸವಾಲುಗಳು ಸಮಸ್ಯೆಗಳು ಇವೆ. ಇದನ್ನು ನಾವು ಆತ್ಮಾವಲೋಕ ಮಾಡಬೇಕಾಗಿದೆ ಎಂದರು.

   ಇದೇ ಸಂದರ್ಭದಲ್ಲಿ ಮೌಢ್ಯತೆಯ ಅಂಧಕಾರದಿಂದ ಊರಿನಿಂದ ಹೊರ ದೂಡಲ್ಪಟ್ಟಿದ್ದ ಅಣಬೂರು ಗೊಲ್ಲರಹಟ್ಟಿಯ ಶಿವಮ್ಮ, ಇವರ ತಾಯಿ ತಿಪ್ಪಮ್ಮ, ಅತ್ತಿಗೆ ಸಾಕಮ್ಮ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಹಾಗೂ ಮುಖ್ಯ ಮಂತ್ರಿ ಮಾತೃಶ್ರೀ ಯೋಜನೆಯಡಿ ಅತಿ ಹೆಚ್ಚು ಫಲಾನುಭವಿಗಳನ್ನು ಗುರುತಿಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ರಾಜ್ಯ/ರಾಷ್ಟ್ರ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ 12 ಕ್ರೀಡಾ ಪಟುಗಳನ್ನು ಗೌರವಿಸಲಾಯಿತು.

   ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 2019-20 ನೇ ಸಾಲಿನ ಅಸಾಧಾರಣ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಾವಿನ್ಯತೆ ವಿಭಾಗದಲ್ಲಿ ಸಂಧ್ಯಾ. ಎನ್, ಶಾಂತವೀರ.ಬಿ.. ಕ್ರೀಡೆಯಲ್ಲಿ ರಾಜು ಎನ್, ಸಿದ್ದಾರೂಡ ಸಂಕಪ್ಪ ಕಪ್ಪತ್ತಿ, ಸಾಂಸ್ಕೃತಿಕ ವಿಭಾಗದಲ್ಲಿ ಆಶ್ರಿತಾ ಎಸ್.ಎ, ಪ್ರಿಯಾ ಟಿ, ತಾರ್ಕಿಕ ವಿಭಾಗದಲ್ಲಿ ಸಂಗೀತಾ ಎ.ಎಸ್ ಇವರಿಗೆ ರೂ.10,000 ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.

   ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನ ಪಕ್ವಾಡ್ ಕಾರ್ಯಕ್ರಮದ ಸ್ಟಿಕ್ಕರ್‍ಗಳನ್ನು ಬಿಡುಗಡೆಗೊಳಿಸಲಾಯಿತು. ಹಾಗೂ ಮೇರಿ ದೇವಾಸಿಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕಕ್ಕೆ ಇದೇ ವೇಳೆ ಚಾಲನೆ ನೀಡಲಾಯಿತು .ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್, ತಾಲ್ಲೂಕು ಪಂಚಾಯತ್ ಸದಸ್ಯ ಲೋಕೆಶ್ವರ್, ತಾ.ಪಂ. ಸದಸ್ಯ ಸಂಗಜ್ಜನಗೌಡ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಜಿ.ಸಿ.ಮಂಗಳ, ಶಕುಂತಲ ಮತ್ತಿತರರು ಉಪಸ್ಥಿತರಿದ್ದರು .ಸರ್ಕಾರಿ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link