ದಾವಣಗೆರೆ:
ಇಂದಿನಿಂದ (ಮಾ.26ರಿಂದ) ನಡೆಯಲಿರುವ ಹರಿಹರ ಗ್ರಾಮ ದೇವತೆ ಶ್ರೀಊರಮ್ಮ ದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಕೋಣ, ಕುರಿ, ಮೇಕೆ, ಕೋಳಿ ಸೇರಿದಂತೆ ಯಾವುದೇ ಪ್ರಾಣಿ ಬಲಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಆಸ್ಪದ ನೀಡಬಾರದು ಎಂದು ಒತ್ತಾಯಿಸಿದರು.ಹರಿಹರ ಊರಮ್ಮ ದೇವಿ ಜಾತ್ರೆಯಲ್ಲಿ ಎಲ್ಲಿಯೂ ಕೋಣ, ಕುರಿ, ಮೇಕೆ, ಕೋಳಿ ಸೇರಿದಂತೆ ಯಾವುದೇ ಪ್ರಾಣಿ ಬಲಿ ಕೊಡಬಾರದು, ಒಂದು ವೇಳೆ ಬಲಿ ನಡೆದರೆ ಜಿಲ್ಲಾಧಿಕಾರಿಗಳುನ್ನು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ, ನ್ಯಾಯಾಂಗದ ಆದೇಶ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜಾತ್ರೆಯಲ್ಲಿ ಪ್ರಾಣಿ ಬಲಿ ನಿಲ್ಲಿಸಿ, ಅಹಿಂಸಾತ್ಮಿಕ, ಸಾತ್ವಿಕ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆಚರಿಸಬೇಕೆಂಬುದಾಗಿ ಭಕ್ತರಲ್ಲಿ ಹಾಗೂ ದೇವಸ್ಥಾನ ಸಮಿತಿಯವರಲ್ಲಿ ಮನವಿ ಮಾಡಿದ್ದೇವೆ. ಪ್ರಾಣಿ ಬಲಿ ತಡೆ ಜಾಗೃತಿ ಕುರಿತಂತೆ ಹರಿಹರದ ಸುತ್ತಮುತ್ತಲಿನ ಊರುಗಳಲ್ಲಿ ಜಾತ್ರೆ ಮುಗಿಯುವವರೆಗೂ ಇಂದಿನಿಂದ ಅಹಿಂಸಾ ಪ್ರಾಣಿ ದಯಾ ಸಂದೇಶ ಯಾತ್ರೆ ಕೈಗೊಳ್ಳಲಿದ್ದೇವೆ ಎಂದರು.
ಹರಿಹರ ಊರಮ್ಮ ದೇವಿಯ ಜಾತ್ರೆಯನ್ನು ಹಿಂದೆ ಪ್ರತಿ ವರ್ಷಕ್ಕೊಮ್ಮೆ ಮಾಡುತ್ತಿದ್ದರು. ನಂತರ 5 ವರ್ಷಕ್ಕೊಮ್ಮೆ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾ.26ರಿಂದ 5 ದಿನ ಊರಮ್ಮನ ಜಾತ್ರೆ ನಡೆಯಲಿದ್ದು, ದೇವಸ್ಥಾನ ಸಮಿತಿಯೂ ಪ್ರಾಣಿ ಬಲಿ ಕೊಡುವುದಿಲ್ಲ, ಬದಲಾಗಿ ಸಾಂಕೇತಿಕವಾಗಿ ಹಿಟ್ಟಿನ ಕೋಣ ಬಲಿ ನೀಡುವ ಮೂಲಕ ಆಚರಣೆ ಮುಗಿಸುವ ಭರವಸೆ ನೀಡಿದೆ. ಇಂತಹ ಸಾತ್ವಿಕ ಆಚರಣೆಗೆ ತಮ್ಮ ಸ್ವಾಗತವಿದೆ ಎಂದರು.
ದೂರ ದೂರದಲ್ಲೇ ಚೆಕ್ ಪೋಸ್ಟ್ ಹಾಕಿ ಯಾವುದೇ ಪ್ರಾಣಿಗಳು, ಆಯುಧಗಳನ್ನು ದೇವಾಲಯದ ಆವರಣ, ಸುತ್ತಮುತ್ತ ಹಾಗೂ ಜಾತ್ರೆ ಪರಿಸರಕ್ಕೆ ತರಗಂತೆ ಕಟ್ಟುನಿಟ್ಟಾಗಿ ತಡೆಯಲು ಅಗತ್ಯ ಬಿಗಿ ಬಂದೋಬಸ್ತ್ ಮಾಡಬೇಕೆಂದು ಒತ್ತಾಯಿಸಿದ ಅವರು, ಹಿಂದೆಲ್ಲಾ ತೋರಿಸಿದ್ದೇ ಒಂದು ಕೋಣವಾದರೆ, ಬಲಿ ಕೊಟ್ಟಿದ್ದೇ ಮತ್ತೊಂದು ಕೋಣವಾಗಿತ್ತು.
ಆಗ ಲಾಠಿ ಚಾರ್ಜ್ ಸಹ ಆಗಿತ್ತು. ರಾಜಕಾರಣಿಗಳು ಪ್ರತಿಷ್ಟೆಯಾಗಿ ಪ್ರಾಣಿ ಬಲಿ ವಿಚಾರವನ್ನು ತೆಗೆದುಕೊಳ್ಳುತ್ತಿದ್ದು, ಹಿಂದೆ ಡಿಎಸ್ಪಿಯೊಬ್ಬರು ಪ್ರಾಣಿ ಬಲಿಗೆ ಅವಕಾಶ ನೀಡದೇ ದೃಢವಾಗಿ ನಿಂತಿದ್ದರು. ಪ್ರಾಣಿ ಬಲಿ ತಡೆಯಲು ಹೈಕೋರ್ಟ್ ಆದೇಶವಾಗಿದೆಯೆಂದಲ್ಲ, ಆದ್ಯತೆ ಮೇಲೆ ಪ್ರಾಣಿ ಬಲಿ ನಿಷೇಧಕ್ಕೆ ದೇವಸ್ಥಾನ ಸಮಿತಿ, ಊರಿನ ಮುಖಂಡರು, ಹಿರಿಯರು, ಭಕ್ತರು, ಸಂಘ-ಸಂಸ್ಥೆಗಳು ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯದ 800 ಕಡೆ 3 ಕೋಟಿ ಕೋಣ, ಕುರಿ, ಮೇಕೆ, ಕೋಳಿ ಸೇರಿದಂತೆ ಮೂಕ ಪ್ರಾಣಿ ಬಲಿಯಾಗಿವೆ. ಖಾನಾಪುರ, ಕೊಪ್ಪಳ, ನಾಯ್ಕನಹಟ್ಟಿ ಸೇರಿದಂತೆ ವಿವಿಧೆಡೆ ಪ್ರಾಣಿ ಬಲಿ ತಡೆದಿದ್ದೇವೆ. ಯಾರಿಗೂ ಪ್ರಾಣಿ ಬಲಿ ಕೊಡುವುದು ಪ್ರತಿಷ್ಟೆಯ ವಿಷಯಬಾರದಷ್ಟೇ ಎಂದರು.ಸುದ್ದಿಗೋಷ್ಠಿಯಲ್ಲಿ ಮಂಡಳಿ ರಾಷ್ಟ್ರೀಯ ಸಂಚಾಲಕಿ ಸುನಂದಾದೇವಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/25_dvg_02_2.gif)