ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಗಾಗಿ ವಿಜ್ಞಾನವನ್ನು ಹೆಚ್ಚು ಬಳಸಿಕೊಳ್ಳಿ : ಸುರೇಶ್‍ಗರಂ

ಚಳ್ಳಕೆರೆ

    ಸಮಾಜದ ಎಲ್ಲಾ ರೀತಿಯ ಪ್ರಗತಿಯಲ್ಲಿ ವಿಜ್ಞಾನವೇ ಅಡಗಿದ್ದು, ವಿಜ್ಞಾನದ ವಿಷಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಜಾಗೃತನಾಗಿ ಅಭ್ಯಾಸ ಮಾಡಬೇಕು. ಪರಿಪೂರ್ಣತೆಯ ವಿದ್ಯೆಯನ್ನು ಸಂಪಾದಿಸಲು ವಿಜ್ಞಾನವೇ ಪ್ರೇರಣೆ. ವಿದ್ಯಾರ್ಥಿಗಳು ಯಾವುದೇ ಹಂತದಲ್ಲೂ ವಿಜ್ಞಾನದ ವಿಷಯವನ್ನು ನಿರ್ಲಕ್ಷಿಸಬಾರದು ಎಂದು ಕುವೈತ್ ಕನ್ನಡ ಕೂಟ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಸುರೇಶ್‍ಗರಂ ತಿಳಿಸಿದರು.

     ಅವರು, ಸೋಮವಾರ ಸಂಜೆ ಇಲ್ಲಿನ ರೋಟರಿ ಬಾಲಭವನದಲ್ಲಿ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕುವೈತ್ ಕನ್ನಡ ಕೂಟ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಈ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದಿನ ಎಲ್ಲಾ ಅಭಿವೃದ್ಧಿ ಪರ ಚಿಂತನೆಗಳ ಹಿಂದೆ ವಿಜ್ಞಾನದ ಅಂಶವೇ ಅಡಗಿದೆ. ವಿಜ್ಞಾನದಿಂದ ಯಾರೂ ಸಹ ದೂರ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ವಿಜ್ಞಾನದ ಪ್ರಭಾವಿ ಪಾತ್ರವನ್ನು ವಹಿಸುತ್ತದೆ ಎಂದರು.

    ನಗರಸಭಾ ಸದಸ್ಯೆ ಸುಜಾತಪಾಲಯ್ಯ ಮಾತನಾಡಿ, ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಕಲಿಕಾ ಹಂತದಲ್ಲೇ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ. ಇಂದು ಶೈಕ್ಷಣಿಕ ಪ್ರಗತಿ ಸೇರಿದಂತೆ ಎಲ್ಲಾ ರೀತಿಯ ಪ್ರಗತಿಗೆ ವಿಜ್ಞಾನವೇ ಮೂಲ ಕಾರಣ. ಯಾರು ವಿಜ್ಞಾನದಲ್ಲಿ ಪರಿಣಿತಿಯನ್ನು ಹೊಂದುತ್ತಾರೋ ಅವರು ಎಲ್ಲೆಡೆ ಗೌರವ, ವಿಶ್ವಾಸಕ್ಕೆ ಪಾತ್ರರಾಗುತ್ತಾರೆ. ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ವಿಜ್ಞಾನದಕ್ಕೆ ಹೆಚ್ಚು ಮಹತ್ವ ನೀಡುವಂತೆ ಮನವಿ ಮಾಡಿದರು.

   ಕಾರ್ಯಕ್ರಮದಲ್ಲಿ ಕುವೈತ್ ಕನ್ನಡ ಕೂಟ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರಾದ ನಂದಾಸುರೇಶ್, ರಾಜೇಶ್, ಜಕಣಾಚಾರಿ, ಜಿ.ಕೆ.ಶ್ರೀನಿವಾಸ್, ಆರ್.ಮಾರುತೇಶ್, ಬಿಆರ್‍ಸಿ ಮಂಜಪ್ಪ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link