ಚಿತ್ರದುರ್ಗ :
ವಚನಗಳು ಬರೀ ಅಕ್ಷರಗಳ ಜೋಡಣೆಯ ಸಾಲುಗಳಲ್ಲ, ಅವು ಮಾನವೀಯ ಮೌಲ್ಯಗಳ ಗಣಿ. ಬದುಕನ್ನು ಅರಳುವಂತೆ ಮಾಡುವ ಮಹಾಶಕ್ತಿಯುತ ಸಾಲುಗಳವು. ಅವು ನಮ್ಮ ಜೀವನದ ಸಂವಿಧಾನವಿದ್ದಂತೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಚಳ್ಳಕೆರೆ ತಾ| ಎನ್.ದೇವರಹಳ್ಳಿ ಗ್ರಾಮದ ಬಸವಕೇಂದ್ರವು ಏರ್ಪಡಿಸಿದ್ದ 886ನೇ ಬಸವ ಜಯಂತಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು
900 ವರ್ಷಗಳ ಹಿಂದೆಯೇ ಬಸವಾದಿ ಪ್ರಮಥರು ಅನನ್ಯವಾದ ವಚನಗಳನ್ನು ರಚಿಸುವುದರ ಮುಖಾಂತರ ಎಲ್ಲರ ಜೀವನ ಹೇಗಿರಬೇಕೆಂಬ ವಿಧಾನವನ್ನು ಅವುಗಳಲ್ಲಿ ತಿಳಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಮರಗಿಡಗಳನ್ನು ಬೆಳೆಸುವುದು ಸರ್ಕಾರದ ಕೆಲಸ ಎಂದು ಬಹಳ ಜನ ತಿಳಿದಿದ್ದಾರೆ. ಆದರೆ ಮರ ಗಿಡಗಳನ್ನು ನಮ್ಮ ಮನೆಯ ಮಕ್ಕಳಂತೆ ಕಾಳಜಿಪೂರ್ಣವಾಗಿ ಬೆಳೆಸಬೇಕು. ವೃಕ್ಷ ಸಂತಾನ ವೃದ್ಧಿಯಾದಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸಬಹುದು, ಕಾಲಕಾಲಕ್ಕೆ ಮಳೆಯನ್ನು ಕಾಣಬಹುದು ಮತ್ತು ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬಹುದು. ಕೆಲವರು ತಮ್ಮ ಅಜ್ಞಾನದಿಂದ ಕಾಡುಗಳಿಗೆ ಬೆಂಕಿ ಹಚ್ಚಿ ದುರಂತಗಳಿಗೆ ಕಾರಣರಾಗುತ್ತಾರೆ. ಇದಕ್ಕೆ ಇತ್ತೀಚೆಗೆ ನಾಗರಹೊಳೆ ಅಭಯಾರಣ್ಯದಲ್ಲಿ ಬೆಂಕಿ ಬಿದ್ದು ಸು. 8000ಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾದದ್ದನ್ನು ಶರಣರು ಪ್ರಸ್ತಾಪಿಸಿದರು.
ನಮ್ಮ ಪಂಚೇಂದ್ರಿಯಗಳನ್ನು ನಿಯಂತ್ರಿಸಿ ಭೌತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಬೇಕು. ಈ ಎಲ್ಲ ಅರ್ಥಪೂರ್ಣ ಜೀವನಕ್ಕೆ ವಚನಗಳು ಮಾರ್ಗದರ್ಶಿಯಾಗಿವೆ ಎಂದು ಅವರು ಹೇಳಿದರು.ವಸತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಗ್ಗುಂದದ ಶ್ರೀ ವನಕಲ್ಲು ಮಲ್ಲೇಶ್ವರ ಮಠದ ಡಾ. ಬಸವ ರಮಾನಂದ ಸ್ವಾಮಿಗಳು, ವಿಧಾನಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ ಬಾಲರಾಜ್, ಸಿರಗುಪ್ಪ ಬಸವರಾಜಪ್ಪ, ಶ್ರೀಮತಿ ಶಶಿರೇಖಾ, ಮುತ್ತಪ್ಪ ಜಿಪಂ ಸದಸ್ಯ ನೇರಗುಂಟೆ, ತಾ|ಪಂ| ಸದಸ್ಯ ಟಿ. ತಿಪ್ಪೇಸ್ವಾಮಿ, ಪ.ಮ.ಗುರುಲಿಂಗಯ್ಯ ವೇದಿಕೆಯಲ್ಲಿದ್ದರು.
ನಾಗರಾಜಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಅಜ್ಜಣ್ಣ, ಮಲ್ಲಣ್ಣ, ಬಸವರಾಜ ಹಾಗು ಎನ್.ದೇವರಹಳ್ಳಿ, ಗಜ್ಜುಗಾನಹಳ್ಳಿ, ತಿಮ್ಮಪ್ಪಯ್ಯನಹಳ್ಳಿ ಮತ್ತು ನಾಯಕನಹಟ್ಟಿಯ ಬಸವಕೇಂದ್ರದಿಂದ ನೂರಾರು ಜನರು ಭಾಗವಹಿಸಿದ್ದರು.