ಬೆಳಗಾವಿ
ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹಾಗೂ ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ಜೆ.ಸಿ. ಮಾಧುಸ್ವಾಮಿ ಇಂದು ಪ್ರತಿಯೊಂದು ಹಂತದಲ್ಲೂ ಸ್ವಲ್ಪ ಖಾರವಾಗಿಯೇ ಪ್ರಶ್ನೆ ಕೇಳುತ್ತಿದ್ದದ್ದು ಕಂಡು ಬಂತು.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡುವಲ್ಲಿ ಸರ್ಕಾರ ನಿಷ್ಕಾಳಜಿ ತೋರುತ್ತಿದೆ. ಹುದ್ದೆಗಳ ಭರ್ತಿಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ನೇಮಕಾತಿಯಾಗಿಲ್ಲ. ಶಿಕ್ಷಣ ಇಲಾಖೆ ಕತ್ತೆ ಕಾಯುತ್ತಿದೆಯೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಉತ್ತರ ನೀಡಲು ಮುಖ್ಯಮಂತ್ರಿ ಅವರು ಮುಂದಾಗುತ್ತಿದ್ದಂತೆ, ಜೆ.ಸಿ. ಮಾಧುಸ್ವಾಮಿ ಅವರು, ಮತ್ತೆ ತಮ್ಮ ಪ್ರತಾಪ ತೋರಿ, ನಿಮ್ಮ ಆಡಳಿತ ವೈಖರಿಯನ್ನು ನೋಡಿದ್ದೇವೆ. ತಾವು ಕುಳಿತುಕೊಳ್ಳಿ ಎಂದು ನೇರವಾಗಿ ಏರಿದ ಧ್ವನಿಯಲ್ಲಿ ಹೇಳಿದರು. ತಮ್ಮನ್ನೇ ಕುಳಿತುಕೊಳ್ಳಿ ಎಂದು ಹೇಳಿದ್ದಕ್ಕೆ ಕುಮಾರ ಸ್ವಾಮಿ ಕೆರಳಿದರು. ಆಗ ಮುಖ್ಯಮಂತ್ರಿ ಅವರು ಕತ್ತೆ ಕಾಯಲಿಕ್ಕಾ ಇಲಾಖೆ ಇರುವುದು ಎಂದು ಟೀಕಿಸುತ್ತೀರಿ.
ನಿಮ್ಮ ಪಕ್ಷದವರು ಕೂಡ ಐದು ವರ್ಷ ಆಡಳಿತ ನಡೆಸಿದ್ದೀರಿ. ಆಗ ಯಾಕೆ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ. ಸದನದಲ್ಲಿ ಮಾತನಾಡುವಾಗ ಎಚ್ಚರ ವಹಿಸಿ. ಯಾವ ಪದ ಬಳಸಬೇಕೆಂಬುದನ್ನು ಯೋಚಿಸಿ ಮಾತನಾಡಿ ಎಂದು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಅವರ ಹೇಳಿಕೆಯಿಂದ ಕೆರಳಿದ ಬಿಜೆಪಿ ಸದಸ್ಯರು ಜೋರು ಧ್ವನಿಯಲ್ಲಿ ಮಾತನಾಡಲಾರಂಭಿಸಿದರು. ಇದರ ಪರಿಣಾಮ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಾಸಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ಸ್ಪೀಕರ್ ಅವರು ಗದ್ದಲವನ್ನು ನಿಯಂತ್ರಿಸಿ ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/HDK-Kumara.gif)