ಹೊಸಪೇಟೆ:
ವಿಜಯನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಈ ಮೂಲಕ ಕಣ ರಂಗೇರಿದಂತಾಗಿದೆ.ಬಿಜೆಪಿ ಟಿಕೆಟ್ ವಂಚಿತ ಕವಿರಾಜ್ ಅರಸ್ ಆನಂದ್ ಸಿಂಗ್ ಹಾಗೂ ಪಕ್ಷಕ್ಕೆ ಸೆಡ್ಡುಹೊಡೆದಿದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ.
ಕವಿರಾಜ್ ಅರಸ್ ತಮ್ಮ ಬೆಂಬಲಿಗರೊಂದಿಗೆ ಸ್ಥಳೀಯ ಬಾಲಾಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಅರಸ್ ಅವರಿಗಾಗಿ ಇತ್ತ ಹೊರಗಡೆ ಕಾದಿದ್ದ ಅಪಾರ ಬೆಂಬಲಿಗರು 108 ಲೀಟರ್ ಹಾಲನ್ನು ಅವರ ತಲೆ ಮೇಲೆ ಸುರಿಯುವ ಮೂಲಕ ಬೆಂಬಲಿಗರು ಅಭಿಮಾನ ವ್ಯಕ್ತಪಡಿಸಿದರು.
ಸಿಂಗ್ ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಸ್ಥಳೀಯ ವಡಕರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಕಡಿಯಲ್ಲಿ ಸ್ವದೇಶಿ ಉಡುಪುನೊಂದಿಗೆ ಅಪಾರ ಬೆಂಬಲಿಗರ ಜೊತೆ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್, ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮಾಜಿ ಶಾಸಕ ನೇಮಿರಾಜ್ ನಾಯ್ಕ್, ರಾಜುಗೌಡ, ನಾರಾಯಣ ಸಾ ಬಾಂಡಿಗೆ ಮುಂತಾದವರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸಿಂಗ್ ವಡಕರಾಯ ದೇವಸ್ಥಾನದಿಂದ ಚಕಡಿ ಬಂಡಿ ಮೂಲಕ ಮೇನ್ ಬಜಾರ್, ತರಕಾರಿ ಮಾರುಕಟ್ಟೆ ಮಾರ್ಗವಾಗಿ ಮದಕರಿ ನಾಯಕ ವೃತ್ತದ ಮೂಲಕ ವಾಲ್ಮೀಕಿ ವೃತ್ತದ ಮಾರ್ಗವಾಗಿ ಸಹಾಯಕ ಆಯಕ್ತರ ಕಚೇರಿಗೆ ತೆರಳಿದರು.
ಘೋರ್ಪಡೆ ಸಲ್ಲಿಕೆ:
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ನಗರದ ವಾಲ್ಮೀಕಿ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ವಿಜಯನಗರ ಕ್ಷೇತ್ರ ಹೊಸತಲ್ಲ. ನಮ್ಮ ಸಂಡೂರಿನ ಕೆಲವು ಕ್ಷೇತ್ರಗಳು ವಿಭಜನೆ ಸಂದರ್ಭದಲ್ಲಿ ಹೊಸಪೇಟೆಗೆ ಸೇರಿದೆ. ಹಾಗಾಗಿ ನನಗೆ ಹೊಸಪೇಟೆ ಹೊಸತಲ್ಲ, ನಾನು ಮನೆಮಗನಾಗಿ ಇಲ್ಲಿಯೇ ಇದ್ದು ಜನರ ಕಷ್ಟಸುಖಕ್ಕೆ ಸ್ಪಂದಿಸುವೆ ಎಂದರು.
ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿ ಬಸವರಾಯ ರೆಡ್ಡಿ ಮಾತನಾಡಿ, ಡೊಳ್ಳು, ತಮಟೆ ಕೊಡೆಸಿ ಸಂಘಟನೆ ತೋರಿಸುವುದಲ್ಲ, ನಾಳೆಯಿಂದ ಸಂಘಟನೆ ಏನೆಂಬುದು ನಾವು ತೋರಿಸುತ್ತೇವೆ ಎಂದು ಮಾರ್ಮಿಕವಾಗಿ ತಿಳಿಸಿದರು. ವೆಂಕಟರಾವ್ ಘೋರ್ಪಡೆ ಅವರನ್ನು ಕ್ಷೇತ್ರದವರಲ್ಲ ಎಂದು ಬಿಜೆಪಿ ಅವರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಘೋರ್ಪಡೆ ಕುಟುಂಬವೂ ಕೇವಲ ಸಂಡೂರು ಮಾತ್ರವಲ್ಲದೆ ಇಡೀ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಕುಟುಂಬವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಉಪ ಚುನಾವಣೆಯಲ್ಲಿ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಶಾಸಕರಾದ ಪರಮೇಶ್ವರ್ ನಾಯ್ಕ್, ತುಕರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ, ಮುಖಂಡರಾದ ಗುಜ್ಜಲ್ ನಾಗರಾಜ್, ಗುಜ್ಜಲ್ ರಘು, ಆಶಾಲತಾ ಮುಂತಾದವರು ಇದ್ದರು.
ಜೆಡಿಎಸ್ ಸಲ್ಲಿಕೆ:
ಜೆಡಿಎಸ್ ಅಭ್ಯರ್ಥಿ ಎಂ.ಎನ್. ನಬಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ಆಗಮಿಸಿ ಉಪಮೇದುವಾರಿಕೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್-ಬಿಜೆಪಿ ಪಕ್ಷದ ಆಡಳಿತದಿಂದ ಜನ ರೋಸಿದ್ದಾರೆ. ಈ ಬಾರಿ ವಿಜಯನಗರ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಈ ಬಾರಿ ಜೆಡಿಎಸ್ಗೆ ನಿಶ್ಚಿತವಾಗಿ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.ನಾಮಪತ್ರ ಸಲ್ಲಿಸಿದ ಇತರರು: ಕಾಂಗ್ರೆಸ್ನಿಂದ ನಿಂಬಗಲ್ ರಾಮಕೃಷ್ಣ, ಪಕ್ಷೇತರರಾಗಿ ಪಯ ಗಣೇಶ್, ಮಂಜುನಾಥ್ ಸ್ವಾಮಿ ಸೇರಿದಂತೆ ಒಟ್ಟು 7 ಜನರು ಕೊನೆಯದಿನದಂದು ನಾಮಪತ್ರ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
