ಸರಳವಾಗಿ ವಿಜಯದಶಮಿ ಆಚರಣೆ

ತಿಪಟೂರು

     ತಾಲ್ಲೂಕಿನ ಶ್ರೀಕ್ಷೇತ್ರ ದಸರೀಘಟ್ಟ, ಕೆರೆಗೋಡಿ-ರಂಗಾಪುರ, ಗಂಗನಘಟ್ಟ, ಬಿದರೆಗುಡಿ ಮುಂತಾದ ಕಡೆಗಳಲ್ಲಿ ಕೊರೊನಾ ಮಹಾಮಾರಿಯ ನಡುವೆ ಸರಳವಾಗಿ ಶಮಿ ಪೂಜೆಯೊಂದಿಗೆ ಅಂಬನ್ನು ಕತ್ತರಿಸಿ ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯನ್ನು ಆಚರಿಸಲಾಯಿತು.

    ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದಲ್ಲಿ ಸರಳವಾಗಿ ನಡೆದ ದಸರಾ ಮಹೋತ್ಸವ ಶ್ರೀ ಕರಿವೃಷಭ ಶಿವಯೋಗೀಶ್ವರ ಮಹಾಸ್ವಾಮಿಗಳು ಶಮಿಪೂಜೆ ಮಾಡಿ ಬನ್ನಿಮಂಟಪ ಕ್ಕೆ ಪೂಜೆ ನೆರವೇರಿಸಿ ಪ್ರಪಂಚಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನ ರೋಗ ಶೀಘ್ರವಾಗಿ ಕೊನೆಗೊಳ್ಳಲಿದೆ, ಬರುವ ಸಂವತ್ಸರಕ್ಕೆ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ ಎಂದು ಭವಿಷ್ಯ ನುಡಿದರು. ಇದೆ ಶ್ರೀಗಳು ಹಿಂದೆ ಶತಮಾನಕ್ಕೊಮ್ಮೆ ಬರುವ ಮಹಾಮಾರಿ ಶತಮಾನಕ್ಕೆ ಬಂದಿದೆ ಎಂದು ನುಡಿದಿದ್ದರು.

ಕೊರೊನಾ ಬಗ್ಗೆ ಎಚ್ಚರವಾಗಿರಿ

    ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದಲ್ಲಿ ವಿಜಯದಶಮಿಯಂದು ಸಾಂಕೇತಿಕವಾಗಿ ಚೌಡೇಶ್ವರಿದೇವಿಯ 28ನೇ ವರ್ಷದ ಮುಳ್ಳುಗದ್ದಿಗೆ ಉತ್ಸವದ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಭಾರತ ಇಡೀ ಜಗತ್ತಿಗೆ ಜ್ಞಾನದ, ಭಕ್ತಿಯ ಜ್ಯೋತಿಯನ್ನು ನೀಡಿದ ದೇಶವಾಗಿದ್ದು ಜನರು ಆಧ್ಯಾತ್ಮಿಕವಾಗಿ ಹೆಚ್ಚಿನ ಜ್ಞಾನವಂತರಾಗಿದ್ದಾರೆ. ಪ್ರತಿಯೊಬ್ಬರು ಕೊರೊನಾ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಭಕ್ತಾದಿಗಳಿಗೆ ಕರೆನೀಡಿದರು.

ಅಪಚಾರ, ಅಧರ್ಮಗಳ ಪ್ರತೀಕಾರವೇ ಕೊರೊನಾ

    ಇತ್ತೀಚಿನ ಹಲವಾರು ವರ್ಷಗಳಿಂದ ಮನುಷ್ಯತನ್ನ ಸ್ವಾರ್ಥಕ್ಕಾಗಿ ದುರಾಸೆ, ಅನಾಚಾರ, ಅನ್ಯಾಯ, ಅಧರ್ಮ ಮಾರ್ಗಗಗಳಿಂದ ಬದುಕು ಕಟ್ಟಿಕೊಳ್ಳಲು ಮುಂದಾಗಿರುವುದರಿಂದಲೇ ಇಂದು ಮನುಕುಲವನ್ನೇ ನಾಶಮಾಡುವಂತ ಮಹಾಮಾರಿ ಕೊರೊನಾ ವೈರಸ್ ಸೇರಿದಂತೆ ಪ್ರಳಯಾಂತಕಕಾರಿ ಪ್ರವಾಹಗಳು ವಿಶ್ವದಾದ್ಯಂತ ಉಂಟಾಗುತ್ತಿವೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

    ಶ್ರೀ ಮಠದ ಗುರುಪರಂಪರೆಯಂತೆ ಮಂಗಳವಾರ ಬೆಳಿಗ್ಗೆ ಕೆರೆಗೋಡಿ ಮಹಾನವಮಿ ಮಂಟಪದ ತೋಪಿನಲ್ಲಿ ಅಂಬುಹಾಯಿಸುವ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಮಾತನಾಡಿದ ಶ್ರೀಗಳು ಮನುಷ್ಯ ತನ್ನ ಅಹಂಕಾರಿ ವರ್ತನೆಯಿಂದ ದೇವರು, ಧರ್ಮ ಮಾರ್ಗ, ಗುರು-ಹಿರಿಯರು ಸೇರಿದಂತೆ ಎಲ್ಲ ಉತ್ತಮ ಪರಂಪರೆಗಳಿಗೆ ಅಪಚಾರ, ಅವಮಾನ ಮಾಡಿಕೊಂಡೇ ಮುನ್ನುಗ್ಗುತ್ತಿದ್ದಾನೆ. ಈ ಬಗ್ಗೆ ಎಚ್ಚರಿಸಲೆಂದೇ ಪ್ರಕೃತಿ ಮುನಿಯತೊಡಗಿದ್ದು ಇದಕ್ಕೆ ಇತ್ತೀಚಿಗೆ ವಕ್ಕರಿಸಿರುವ ಕೊರೊನಾ ವೈರಸ್ ಹಾಗೂ ಎಡಬಿಡದೆ ಉಂಟಾಗುತ್ತಿರುವ ಪ್ರವಾಹಗಳು ಉದಾಹರಣೆಯಾಗಿವೆ. ಯಾವಾಗ ಮಾನವನಲ್ಲಿ ಭಯ-ಭಕ್ತಿಗಳು ಮಾಯವಾಗಿ ದುರಾಲೋಚನೆಗಳು ಮನೆ ಮಾಡುತ್ತಿವೆಯೋ ಅವುಗಳನ್ನು ಭಗವಂತ, ಗುರುಗಳು ಸೇರಿದಂತೆ ಪ್ರಕೃತಿಮಾತೆಯೂ ಸಹಿಸಲಾರಳು.

    ಹಾಗಾಗಿ ಮನುಕುಲದ ಉದ್ಧಾರಕ್ಕಾಗಿ ಇನ್ನು ಮುಂದಾದರೂ ಮನುಷ್ಯ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ದೈವಭಕ್ತಿ, ನಂಬಿಕೆ, ಸರಳತೆ, ಹೆತ್ತವರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಂಡು, ಪ್ರಕೃತಿಯನ್ನು ಪೋಷಿಸುತ್ತ, ಪ್ರಕೃತಿಗೆ ಸೆಡ್ಡು ಹೊಡೆಯುವಂತ ದುರಂಹಕಾರಗಳನ್ನು ಕೈಬಿಡುವ ಬಗ್ಗೆ ಮುಂದಾಗಬೇಕೆಂದು ತಿಳಿಸಿದರು.

ಜಾನಪದ ಮೆರಗು:

     ಬನ್ನಿ ಮಂಟಪಕ್ಕೆ ಶ್ರೀ ಶಂಕರೇಶ್ವರ ಸ್ವಾಮಿಯವರ ಮೂರ್ತಿಯನ್ನು ಮೂಲ ಸ್ಥಾನದಿಂದ ಕಣ್ಮನತಣಿಸುವ ನೂತನ ತಿರುಗುಣಿ ಅಶ್ವರೂಡರಾಗಿದ್ದ ಸ್ವಾಮಿಯನ್ನು ಉತ್ಸವದ ಮೂಲಕ ಶ್ರೀಗುರುಗಳ ನೇತೃತ್ವದಲ್ಲಿ ಕೆರೆಗೋಡಿ ದೇವಾಲಯ ಮತ್ತು ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಬನ್ನಿಮಂಟಪಕ್ಕೆ ತರಲಾಯಿತು. ಇದೇ ಕಾರ್ಯರ್ಕಮದಲ್ಲಿ ಹರಕೆ ತೀರಿಸಲು ಯುವಕರು ಬಗ್ಗಡಸೇವೆಯಲ್ಲಿ ತೊಡಗಿದ್ದರು. ಶ್ರೀ ಶಂಕರೇಶ್ವರಸ್ವಾಮಿಗೆ ಮಹಾಮಂಗಳಾರತಿ ನಡೆಸಿ ಬನ್ನಿಮಂಟಪದ ಅಡಿಯಲ್ಲಿ ನೆಟ್ಟು ಪೂಜಿಸಿದ್ದ ಗೊನೆಹೊತ್ತ ಕದಳಿಗಿಡವನ್ನು ಕಡಿದು ಅಂಬುಹಾಯಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link