ಹುಳಿಯಾರು:
ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ದುರಸ್ಥಿಗೆ ಮುಂದಾದ ಘಟನೆ ಹುಳಿಯಾರು ಹೋಬಳಿಯ ಹೊನ್ನಯ್ಯನಪಾಳ್ಯದಲ್ಲಿ ನಡೆದಿದೆ.
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಿಂದ ಹೊನ್ನಯ್ಯನಪಾಳ್ಯಕ್ಕೆ ಸುಮಾರು ಎರಡ್ಮೂರು ಕಿ.ಮೀ ಮಣ್ಣಿನ ರಸ್ತೆಯಿದೆ. ಈ ರಸ್ತೆಯು ಸೂಕ್ತ ನಿರ್ವಹಣೆಯಿಲ್ಲದೆ ಗುಂಡಿ ಬಿದ್ದು ಹದಗೆಟ್ಟಿತ್ತು. ಮಳೆಗಾಲದಲ್ಲಂತೂ ಕೆಸರು ಗದ್ದೆಯಾಗಿ ಮಾರ್ಪಡುತ್ತಿತ್ತು. ಈ ರಸ್ತೆ ಮೂಲಕವೇ ತಮ್ಮಡಿಹಳ್ಳಿ ಗೊಲ್ಲರಹಟ್ಟಿಗಳಿಗೂ ನಿತ್ಯ ನೂರಾರು ವಾಹನಗಳಲ್ಲಿ ಅಲ್ಲಿನ ನಿವಾಸಿಗಳು ಓಡಾಡುತ್ತಾರೆ. ಈ ಭಾಗದ ತೋಟಗಳಿಗೂ ಓಡಾಡುವ ಮಾಲೀಕರು ಸಹ ಇದೇ ರಸ್ತೆ ಅವಲಂಬಿಸಿದ್ದಾರೆ. ಅಲ್ಲದೆ ಶಾಲಾಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಓಡಾಡುತ್ತಾರೆ. ಆದರೆ ರಸ್ತೆ ಹದಗೆಟ್ಟಿರುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗಿತ್ತು.
ಈ ರಸ್ತೆ ದುರಸ್ತಿ ಮಾಡುವಂತೆ ಗ್ರಾಪಂ ನಿಂದ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಜನಪ್ರತಿನಿಧಿಗಳಿಗೂ ವಿಷಯ ಮುಟ್ಟಿಸಲಾಗಿತ್ತು. ಆದರೆ ಇವರೆಲ್ಲರೂ ಗ್ರಾಮಸ್ಥರ ಮನವಿಗೆ ಸ್ಪಂದಿಸದೆ ಕಡೆಗಣಿಸಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ತಾವೇ ದುರಸ್ತಿಗೆ ಮುಂದಾದರು.
ತಮ್ಮ ಗ್ರಾಮದವರ ಟ್ರ್ಯಾಕ್ಟರ್ ಮತ್ತು ಜೆಸಿಬಿ ಬಳಕೆ ಮಾಡಿಕೊಂಡು ಸಮೀಪದ ಕೆರೆಯಿಂದ ಮಣ್ಣು ತೆಗೆದು ರಸ್ತೆಗೆ ಸುರಿದರು. ಇಡೀ ದಿನ ನೂರಾರು ಟ್ಯಾಕ್ಟರ್ ಮಣ್ಣು ಹೊಡೆದು ಮರು ದಿನ ಜೆಸಿಬಿ ಮೂಲಕ ಸಮತಟ್ಟು ಮಾಡಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
