ತುಮಕೂರು:
ಅನ್ಯಾಯ, ಅಸಮಾನತೆ ಹಾಗೂ ದಬ್ಬಾಳಿಕೆ, ಜಾತಿ ತಾರತಮ್ಯಗಳ ವಿರುದ್ದ ಹೋರಾಡುವ ಆ ಮೂಲಕ ಸಮಾಜ ಕಟ್ಟಿರುವ ಹಾಗೂ ಸಮಾಜಕ್ಕೆ ಅಂಟಿರುವ ಕಳಂಕಗಳ ವಿರುದ್ದ ಸೆಣಸುವ ಚಳವಳಿಕಾರರ ನೆರವಿಗೆ ಸಮಾಜ ನಿಲ್ಲಬೇಕಾಗಿರುವುದು ಅಗತ್ಯ ಎಂದು ಸಿಐಟಿಯುನ ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.
ಅವರು ಸಿಐಟಿಯು, ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾನುವಾರ ಬೆಳಗ್ಗೆ ತುಮಕೂರಿನ ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ನೌಷಾದ್ ಸೆಹಗನ್ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ ಸಾಮಾಜಿಕ ಬದಲಾವಣೆಗಾಗಿ ದುಡಿಯುವ ಚಳವಳಿಕಾರರು ಸತ್ತಾಗ ಚಳವಳಿ ಅವರ ಕುಟುಂಬಕ್ಕೆ ನೆರವಿಗೆ ನಿಲ್ಲಬೇಕಾದ್ದು ಕರ್ತವ್ಯ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಚಳವಳಿಕಾರರು ತಮ್ಮ ಆರೋಗ್ಯ ಮತ್ತು ಕುಟುಂಬದ ಅಗತ್ಯತೆಗಳ ಕಡೆಯೂ ಗಮನಹರಿಸದೇ ಹೋದಲ್ಲಿ ನಂಬಿದವರು ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಹೀಗಾಗಿ ಅತ್ತ ಕಡೆಯೂ ಗಮನಹರಿಸಬೇಕು ಎಂದರಲ್ಲದೆ ನೌಷಾದ್ ಸೆಹಗನ್ ಅವರು ಬದ್ದತೆಯಿಂದ ಚಳವಳಿಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬೈಯ್ಯಾರೆಡ್ಡಿ ಮಾತನಾಡಿ, ಜಿಲ್ಲೆಯ ದುಡಿಯುವ ಜನರ ಚಳವಳಿ ನೌಷಾದ್ ಸೆಹಗನ್ ಅವರನ್ನು ಕಳೆದುಕೊಂಡು ಬಡವಾಗಿದೆ. ಕೆಂಬಾವುಟದ ಸಿದ್ದಾಂತವು ಮಾನವೀಯ ಮೌಲ್ಯ ಮತ್ತು ಸಂಕಷ್ಟಕ್ಕೊಳಗಾದವರ ರಕ್ಷಣೆಗೆ ಬದ್ದತೆಯನ್ನು ತೋರಿಸುತ್ತದೆ ಎಂದರು.
ಹೋರಾಟಗಾರರು ದುಡಿಯುವವರ ಪರವಾಗಿ ಹೋರಾಡಿ ಸತ್ತಾಗ ಜೀವನಕ್ಕೆ ನಡೆಯುವ ಸಂಘರ್ಷ ಸಮಾಜದಲ್ಲಿ ಅಸಮಾನತೆ ವಿರುದ್ದ ಹೋರಾಟವು ಮುಂದುವರಿಯುತ್ತದೆ. ಸಮಾಜದಲ್ಲಿ ನಶಿಸುತ್ತಿರುವ ಮಾನವೀಯ ಮೌಲ್ಯಗಳಿಗೆ ವಿಷಾದ ವ್ಯಕ್ತಪಡಿಸಿದರು.
ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ. ನರಸಿಂಹಮೂರ್ತಿ ಮಾತನಾಡಿ ನೌಷಾದ್ ಸೆಹಗನ್ ಅವರು ಶಿಳ್ಳೇಕ್ಯಾತರು, ದೊಂಬಿದಾಸರು, ಹಕ್ಕಿಪಿಕ್ಕಿಗಳ ಶಾಶ್ವತ ನೆರವು ನೀಡಲು ಹೋರಾಟ ನಡೆಸಿದ ಕ್ಷಣಗಳನ್ನು ಸ್ಮರಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನಕಾರ್ಯದರ್ಶಿ ಜಿ.ಕಮಲ, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಉಮೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಜೀವ ವಿಮಾ ನೌಕರರ ಸಂಘದ ನಂಜುಂಡಯ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಸಿಐಟಿಯು ಪಾವಗಡ ಅಧ್ಯಕ್ಷೆ ಸುಶೀಲ, ಕೊರಟಗೆರೆಯ ಶಾಂತಮ್ಮ, ಸಿಐಟಿಯು ಖಜಾಂಚಿ ಎ. ಲೋಕೇಶ್, ಕಟ್ಟಡ ಕಾರ್ಮಿಕ ಸಂಘದ ಲಕ್ಷ್ಮಣ್ ಮಾತನಾಡಿದರು.
ವೇದಿಕೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ಗೌರವಾಧ್ಯಕ್ಷ ಗೋವಿಂದರಾಜು, ಬೀಡಿ ಕಾರ್ಮಿಕ ಸಂಘದ ನಿಸಾರ್ ಅಹಮದ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಉಪಸ್ಥಿತರಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೌಷಾದ್ ಅವರ ಚಳವಳಿಯ ಜೀವನವನ್ನು ಸಭೆಯ ಮುಂದೆ ವಿವರಿಸಿದರು.ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಸ್ವಾಗತಿಸಿ, ಸಿಐಟಿಯು ಕಾರ್ಯದರ್ಶಿ ಗುಲ್ಜಾರ್ ಬಾನು ವಂದಿಸಿದರು.