ವಿಪತ್ತು ನಿರ್ವಹಣೆಗೆ ಪೂರ್ವ ಸಿದ್ಧತೆ ಯೋಜನಾ ರೂಪುರೇಶೆಗಳ ಅತ್ಯಾವಶ್ಯ

ತುಮಕೂರು

     ಪ್ರಕೃತಿ ವಿಕೋಪ, ಅತೀವೃಷ್ಠಿ, ಅನಾವೃಷ್ಠಿ, ಅಗ್ನಿ ಅನಾಹುತ, ಭೂಕಂಪ, ನೆರೆ ಹಾವಳಿ, ಚಂಡಮಾರುತ, ಹವಾಮಾನ ವೈಪರೀತ್ಯ, ಮತ್ತಿತರ ಸಂದರ್ಭಗಳಲ್ಲಿ ಸಂಭವಿಸುವ ವಿಪತ್ತುಗಳನ್ನು ನಿರ್ವಹಣೆ ಮಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಯೋಜನೆಗಳ ರೂಪು ರೇಶೆಗಳ ಪೂರ್ವ ಸಿದ್ಧತೆ ಅತ್ಯಾವಶ್ಯ ಎಂದು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದರು.

       ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ “ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ ಹಾಗೂ ವಿಕೋಪ ಮಿತಗೊಳಿಸುವಿಕೆ, ಪೂರ್ವಸಿದ್ಧತೆ ಹಾಗೂ ಸ್ಪಂದನಾ ಯೋಜನೆ” ಕುರಿತು ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2 ದಿನಗಳ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

     “ಕರ್ನಾಟಕ ರಾಜ್ಯದ ಬರ, ಪ್ರವಾಹ, ಭೂಕುಸಿತ, ಇನ್ನಿತರೆ ನೈಸರ್ಗಿಕ ವಿಪತ್ತುಗಳ ನಿರ್ವಹಣೆಗೆ ಅಗತ್ಯವಾದ ಯೋಜನೆಯ ರೂಪುರೇಶೆಗಳು” ಕುರಿತು ಮಾತನಾಡಿದ ಅವರು ವಿಪತ್ತುಗಳು ಎದುರಾದಾಗ ಎಷ್ಟೇ ಮಾನವ ಶಕ್ತಿಯಿದ್ದರೂ ಪೂರ್ವ ಯೋಜನೆಗಳ ಸಿದ್ಧತೆ ಅತ್ಯಾವಶ್ಯ.

      ಅಭಿವೃದ್ಧಿ ಹೆಚ್ಚಾದಂತೆ ವಿಪತ್ತುಗಳ ಸಂಖ್ಯೆಯೂ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ವಿಪತ್ತುಗಳನ್ನು ನಿರ್ವಹಣೆ ಮಾಡಲು ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು ಸಹಕರಿಸುವುದು ಅಗತ್ಯ. ಇಂತಹ ಸಂದರ್ಭದಲ್ಲಿ ಜನ-ಜಾನುವಾರುಗಳ ಪ್ರಾಣ ಉಳಿಸುವುದು ಎಲ್ಲಕ್ಕಿಂತ ಪ್ರಮುಖ ಅಂಶವಾಗಿದ್ದು, ಚುನಾವಣೆ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಎಲ್ಲ ಇಲಾಖೆ ಅಧಿಕಾರಿಗಳೂ ಸಹ ವಿಪತ್ತು ನಿರ್ವಹಣಾ ಸಂದರ್ಭದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು.

     ವಿಪತ್ತು ಬಂದಾಗ ಜನರಿಗೆ ಪುನರ್ವಸತಿ ಕಲ್ಪಿಸುವ ಹಾಗೂ ಅವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ, ಗಂಜಿಕೇಂದ್ರ ತೆರೆಯುವ, ನಿಯಂತ್ರಣ ಕೊಠಡಿ ಸ್ಥಾಪಿಸುವ, ಘಟನಾ ಸ್ಥಳಕ್ಕೆ ವಿಪತ್ತು ನಿರ್ವಹಣಾ ತಂಡ ತಲುಪಲು ಪರ್ಯಾಯ ರಸ್ತೆ ಮಾರ್ಗ, ದೂರವಾಣಿ/ಮೊಬೈಲ್ ಸಂಪರ್ಕ ಕಡಿತವಾದಾಗ ಸಂಪರ್ಕ ಕಲ್ಪಿಸುವ ಬಗ್ಗೆ ಮಾರ್ಗೋಪಾಯಗಳ ಬಗ್ಗೆ ತಿಳಿಸಿದರು.

      ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ತರಬೇತಿ ನಿರ್ದೇಶಕ ಅಲೆಕ್ಸ್ ರೋಬೋ ಮಾತನಾಡಿ ವಿಕೋಪ, ನಿರ್ವಹಣೆ, ಅಪಾಯ, ವಿಪತ್ತು ನಿರ್ವಹಣಾ ಪರಿಕಲ್ಪನೆಗಳು, ವಿಕೋಪ ಅಪಾಯದ ಸಮೀಕ್ಷೆ, ವಿಪತ್ತು ನಿರ್ವಹಣಾ ಯೋಜನೆಗಳ ಪೂರ್ವಸಿದ್ಧತೆ ಹಾಗೂ ಸ್ಪಂದನ ಯೋಜನೆ ತಯಾರಿಕೆ ಕುರಿತು ಮಾಹಿತಿ ನೀಡಿದರಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ “ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ” ಕಾರ್ಯನಿರ್ವಹಿಸು ತ್ತಿದ್ದು, ವಿಪತ್ತು ಬಂದೊದಗಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಪೂರ್ವಯೋಜನೆಗಳನ್ನು ಪ್ರತೀ ವರ್ಷ ಪರಿಷ್ಕರಿಸುವ ಕೆಲಸವನ್ನು ಈ ಪ್ರಾಧಿಕಾರ ಮಾಡಬೇಕು ಎಂದು ಸಲಹೆ ನೀಡಿದರಲ್ಲದೆ ಬರಪರಿಸ್ಥಿತಿ ಎದುರಾದಾಗ ಕೃಷಿಕರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೃಷಿ ಇಲಾಖೆ ರೂಪಿಸುವ ಹಾಗೂ ಗುಣಮಟ್ಟದ ನೀರು ಒದಗಿಸುವಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಪಾತ್ರ, ತುರ್ತು ಸಂದರ್ಭಗಳಲ್ಲಿ ಯಾವುದೇ ರೀತಿ ಪ್ರಾಣ ಹಾನಿಯಾಗದಂತೆ ಆರೋಗ್ಯ ಇಲಾಖೆ ಅಗತ್ಯ ಔಷಧಿಗಳನ್ನು ದಾಸ್ತಾನು ಇಟ್ಟುಕೊಂಡು ಉಪಚಾರ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

          ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ವೈದ್ಯಕೀಯ ಸಮುದಾಯ ವಿಭಾಗದ ಮುಖ್ಯಸ್ಥ ಡಾ|| ಮಹಾಬಳೇಶ್ವರ ಅಂಗಡಿ ಮಾತನಾಡುತ್ತಾ ಪ್ರಕೃತಿ ವಿಕೋಪ ಹಾಗೂ ಮತ್ತಿತರ ನೆರೆಹಾವಳಿಗಳಿಂದುಂಟಾಗುವ ದುಷ್ಪರಿಣಾಮಗಳು, ಸಂಭವಿಸುವ ಸಾವು-ನೋವುಗಳು, ಆಸ್ತಿ ಹಾನಿ, ಸಾಂಕ್ರಾಮಿಕ ರೋಗ ಉಲ್ಬಣ, ನೀರು ಹಾಗೂ ನೈರ್ಮಲ್ಯದ ಅಸ್ತವ್ಯಸ್ತತೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಉದಾಹರಣೆ ಮೂಲಕ ವಿವರಣೆ ನೀಡಿದರು.

      ನಂತರ ಅಗ್ನಿಶಾಮಕ ದಳದ ವತಿಯಿಂದ ವಿಪತ್ತು ನಿರ್ವಹಣೆ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಹೆಚ್.ಕೆ. ಬಾಲಾಮಣಿ, ಉಪ ಪ್ರಾಚಾರ್ಯ ಎನ್. ತಿಮ್ಮಯ್ಯ, ಅಗ್ನಿಶಾಮಕ ಠಾಣೆಯ ಆರ್‍ಎಫ್‍ಓ ರಾಮಕೃಷ್ಣಪ್ಪ, ಅಧಿಕಾರಿ ಮಹಾಲಿಂಗಪ್ಪ ಎಸ್. ಲಂಗೋಟಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link