ದಾವಣಗೆರೆ:
ಸೂಳೆಕೆರೆ ಸೇರಿದಂತೆ ಇತರೆ ಕೆರೆಗಳ ಸಂರಕ್ಷಣೆಗಾಗಿ ಹಾಗೂ ಜನರ ಹಿತರಕ್ಷಣೆಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅಖಂಡ ಕರ್ನಾಟಕ ರೈತ ಸಂಘ(ಪಕ್ಷಾತೀತ) ಜಿಲ್ಲಾಧ್ಯಕ್ಷ ಎಂ.ಬಿ.ವೀರಭದ್ರಪ್ಪ ತೀರ್ಮಾನಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1984ರಿಂದ ಚನ್ನಗಿರಿಯ ತುಮ್ಕೋಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾನು, 1994ರಲ್ಲಿ ಸ್ವಯಂ ನಿವೃತ್ತಿ ಪಡೆದು ರೈತ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಶಾಂತಿಸಾಗರ ಸಂರಕ್ಷಣಾ ಮಂಡಳಿಯ ತಾಲೂಕು ಕಾರ್ಯದರ್ಶಿ, ಬಸವ ಬಳಗದ ನಿರ್ದೇಶಕನಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಇನ್ನಷ್ಟು ಜನಸೇವೆ ಮಾಡುವ ಉದ್ದೇಶದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಏ.1ರಂದು ನಾಮಪತ್ರ ಸಲ್ಲಿಸುತ್ತೇನೆಂದು ಹೇಳಿದರು.
ಏಷ್ಯಾ ಖಂಡದ 2ನೇ ಅತಿದೊಡ್ಡ ಕೆರೆಯಾದ ಶಾಂತಿಸಾಗರದ ಹೂಳೆತ್ತಿಸಲು ಪ್ರಥಮ ಆದ್ಯತೆ ನೀಡುತ್ತೇನೆ. ಅದೇ ರೀತಿ ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳ ಹೂಳೆತ್ತಿಸಿ ನೀರು ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಸರ್ಕಾರಿ ಜಮೀನು, ಕೆರೆಗಳ ಒತ್ತುವರಿ ತೆರವುಗೊಳಿಸಿ, ಜನ-ಜಾನುವಾರುಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತೇನೆ. ಚನ್ನಗಿರಿಯ ತಾವರಕೆರೆಯ ಒತ್ತುವರಿ
ತೆರವು ಮಾಡಿ, ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇನೆ. ಈ ಎಲ್ಲಾ ಯೋಜನೆಗಳ ಸಾಕಾರಕ್ಕೆ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ನನಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬೆಂಬಲಿಗರಾದ ಮಹೇಶ್ವರಪ್ಪ, ಬಸವರಾಜಪ್ಪ, ಹರೀಶ ಹಳ್ಳಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
