ದಾವಣಗೆರೆ:
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ 25 ಅಭ್ಯರ್ಥಿಗಳಲ್ಲಿ ಬಹುತೇಕರು ಮತದಾನದ ಮರುದಿನವಾದ ಬುಧವಾರ ಮನೆಯಲ್ಲೇ ವಿಶ್ರಾಂತಿ ಪಡೆದರು. ಪ್ರಚಾರದ ಭಾಗವಾಗಿ ಕ್ಷೇತ್ರ ಸುತ್ತಿ ದಣಿದಿದ್ದ ಅನೇಕರು ಮನೆಯಲ್ಲೇ ಕಾಲ ಕಳೆದರು.
ಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದ ಅಭ್ಯರ್ಥಿಗಳು ಮತದಾರರ ಮನದಾಳವನ್ನು ಅರಿಯಲು ಪ್ರಯತ್ನಿಸಿದರು. ಜನರು, ಪಕ್ಷದ ನಾಯಕರ ಒಲವು-ನಿಲುವುಗಳನ್ನು ಅರಿತು ಅಖಾಡಕ್ಕೆ ಧುಮುಕಿದ್ದರು. ತಿಂಗಳು ಕಾಲ ಸುತ್ತಾಟ ನಡೆಸಿದ್ದರಿಂದ ದೇಹ ದಣಿದಿತ್ತು.
ಬಿಸಿಲಿನ ತಾಪಮಾನ ಹಾಗೂ ಚುನಾವಣೆಯ ಕಾವು ಸ್ಪರ್ಧೆಗೆ ಇಳಿದಂತೆ ಭಾಸವಾಗುತ್ತಿತ್ತು. ಬಿರುಬಿಸಿಲಿನಲ್ಲಿ ಕ್ಷೇತ್ರ ಸುತ್ತಾಡುತ್ತಿದ್ದ ಅಭ್ಯರ್ಥಿಗಳು ವಿಶ್ರಾಂತಿಗೆ ಸಮಯ ಮೀಸಲಿಟ್ಟಿದ್ದು ಅಪರೂಪ. ಮತದಾನ ಮುಗಿಯುತ್ತಿದ್ದಂತೆ ವಿಶ್ರಾಂತಿಯ ಮೊರೆ ಹೋಗಿದ್ದಾರೆ.
ಹಾಲಿ ಸಂಸದ , ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ವಿಶ್ರಾಂತಿಯ ಮೊರೆ ಹೋಗಿದ್ದು, ಬೆಳಿಗ್ಗೆ ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಮಕ್ಕಳ ಜೊತೆಯಲ್ಲಿ ಬುಧವಾರ ಬೆಳಿಗ್ಗೆ ವಾಯು ವಿಹಾರ ನಡೆಸಿದ ಬಳಿಕ, ತಮ್ಮ ಕುಟುಂಬದ ಸದಸ್ಯರೊಂದಿಗೆ ಹರಟೆಯಲ್ಲಿ ತೊಡಗಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದೇಶ್ವರ್, ಕಳೆದ ಒಂದು ತಿಂಗಳಿನಿಂದ ಪ್ರಚಾರದಲ್ಲಿ ತೊಡಗಿ, ಇಡೀ ಜಿಲ್ಲೆಯನ್ನು ಸುತ್ತಿ ಮತ ಯಾಚನೆ ಮಾಡಿದ್ದೆ. ಒಂದು ತಿಂಗಳಿನಿಂದ ಪುರಸೊತ್ತು ಇಲ್ಲದೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೆ. ಈಗ ಕುಟುಂಬದ ಸದಸ್ಯರ ಜೊತೆಗೂಡಿ ಕಾಲ ಕಳೆಯುತ್ತಿದ್ದೇನೆ. ಚುನಾವಣಾ ಫಲಿತಾಂಶಕ್ಕೆ ಇನ್ನೊಂದು ತಿಂಗಳು ಬಾಕಿ ಇದ್ದು, ಈ ಅವಧಿಯಲ್ಲಿ ಮಗಳು, ಅಳಿಯನ ಜೊತೆ ಕಾಲ ಕಳೆದು ಬರುವುದಾಗಿ ತಿಳಿಸಿದರು.ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮವಾಗಿ ಮತದಾನವಾಗಿದ್ದು, ಎಂಟು ಕ್ಷೇತ್ರದಲ್ಲಿ ತಮಗೆ ಲೀಡ್ ಬರಲಿದ್ದು, ಈ ಬಾರಿಯೂ ನನ್ನ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರು ಸಹ ಹೊನ್ನಾಳಿಯ ತಮ್ಮ ನಿವೇಶನದಲ್ಲಿ ವಿಶ್ರಾಂತಿ ಪಡೆದರು.
ಅಲ್ಲದೇ, ತಮ್ಮ ನಿವಾಸದಲ್ಲಿಯೇ ಜಿಲ್ಲಾ ಪಂಚಾಯತ್ ಸದಸ್ಯರು, ಮೈತ್ರಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ, ಮತದಾರರ ಮನದಾಳ ತಿಳಿಯಲು ಪ್ರಯತ್ನಿಸಿ ಸೋಲು-ಗೆಲುವಿನ ಲೆಕ್ಕಚಾರ ಹಾಕಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಬಿ.ಮಂಜಪ್ಪ, ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಉತ್ತಮ ಮತದಾನವಾಗಿದೆ. ಈ ಬಾರಿ ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದು, ತಮಗೆ ಜಿಲ್ಲಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ವರಿಷ್ಠರು, ಜಿಲ್ಲೆಯ ನಾಯಕರು, ಮುಖಂಡರು ಎಲ್ಲಾ ರೀತಿಯ ಸಹಕಾರ ನೀಡಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
