ಚಳ್ಳಕೆರೆ
ವಿಶ್ವದಲ್ಲಿಯೇ ಧಾರ್ಮಿಕ ಸಂಸ್ಕಾರಗಳನ್ನು ರೂಢಿಸಿಕೊಂಡ ಪವಿತ್ರ ಭೂಮಿ ಭಾರತ ದೇಶವಾಗಿದ್ದು, ಇಂದಿಗೂ ಈ ದೇಶದ ಸಂಸ್ಕತಿ ಮತ್ತು ಸಂಸ್ಕಾರವನ್ನು ವಿಶ್ವಮಟ್ಟದಲ್ಲಿ ಜಾಗೃತಿಗೊಳಿಸಲು ಕಳೆದ ಎರಡು ವರ್ಷಗಳಿಂದ ದೇಶದಾದ್ಯಂತ ಪರಶುರಾಮ ಯಾತ್ರೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜಸ್ಥಾನದ ಜಯಪುರದ ಆಚಾರ್ಯ ರಾಜೇಶ್ವರಿಜೀ ಮಹಾಸ್ವಾಮಿಗಳು ತಿಳಿಸಿದರು.
ಅವರು, ಮಂಗಳವಾರ ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಚಳ್ಳಕೆರೆ ನಗರಕ್ಕೆ ಭೇಟಿ ನೀಡಿದ್ದು, ಅವರನ್ನು ನಗರದ ಶ್ರೀಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಬ್ರಾಹ್ಮಣ ಸಮಾಜದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 5 ಮಾರ್ಚ್ 2017ರಿಂದ ತಾವು ಈ ಯಾತ್ರೆಯನ್ನು ಪ್ರಾರಂಭಿಸಿದ್ದು, ಈಗಾಗಲೇ ದೇಶದಾದ್ಯಂತ 1.13 ಲಕ್ಷ ಕಿ.ಮೀ ಯಾತ್ರೆಯನ್ನು ಪೂರೈಸಲಾಗಿದೆ. ಮುಂಬರುವ ದಿನಗಳಲ್ಲಿ ಇಡೀ ವಿಶ್ವವನ್ನೇ ತಮ್ಮ ವಾಹನದ ಮೂಲಕವೇ ಪರ್ಯಾಟನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು.
ಇತ್ತಿಚಿನ ದಿನಗಳಲ್ಲಿ ರಸ್ತೆ ಸಂಚಾರದ ಮೂಲಕ ವಿಶ್ವ ಪರ್ಯಾಟನೆ ಮಾಡುವ ಅವಕಾಶ ನನಗೆ ದೊರಕಿದ್ದು, ಇದು ಮುಂದಿನ ದಿನಗಳಲ್ಲಿ ಗಿನ್ನಿಸ್ ದಾಖಲೆಯತ್ತ ಸಾಗಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತ ಪಡಿಸಿದರು. ಯಾವ ವ್ಯಕ್ತಿ ತಾನು ನಂಬಿದ ಧರ್ಮ ಮತ್ತು ವಿಚಾರಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾನೋ ಅವನು ಸದಾಕಾಲ ಸಮಾಜದ ಚಿಂತಕನಾಗಿ ಬೆಳೆಯುತ್ತಾನೆ. ಸಮಾಜದ ಎಲ್ಲಾ ಧರ್ಮಿಯರು ಉತ್ತಮ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕಿದೆ.
ನಾವು ಏನಾದರೂ ಈ ರಾಷ್ಟ್ರದಲ್ಲಿ ಬದಲಾವಣೆಯನ್ನು ತರಬೇಕೆಂದರೆ ಅದು ನಾವು ಪಡೆಯುವ ಶಿಕ್ಷಣದಿಂದ ಮಾತ್ರ ಸಾಧ್ಯವೆಂದರು.
ಇತ್ತೀಚಿನ ದಿನಗಳಲ್ಲಿ ರಾಷ್ಟ್ರದ ಮೇಲೆ ನಡೆಯುವ ವಿದ್ವಾಂಸ ಕೃತ್ಯಗಳನ್ನು ನಿಯಂತ್ರಿಸುವ ಮೂಲಕ ಈ ರಾಷ್ಟ್ರವನ್ನು ಮತ್ತಷ್ಟು ಅಪಾಯದಿಂದ ಕಾಪಾಡುವತ್ತ ನಮ್ಮ ಕೇಂದ್ರ ಸರ್ಕಾರ ಗಮನಹರಿಸಿದ್ದು, ದೇಶದ ಹಿತದೃಷ್ಠಿಯಿಂದ ಆರೋಗ್ಯಕರ ಬೆಳವಣಿಗೆ ಎಂದರು. ರಾಷ್ಟ್ರದ ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಸರಿಯಲ್ಲವೆಂಬ ಅಂಶವನ್ನು ದೇಶದ ಜನರೇ ಮೆಚ್ಚಿದ್ದಾರೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಬ್ರಾಹ್ಮಣ ಸಂಘದ ನೂತನ ಅಧ್ಯಕ್ಷ ಅನಂತರಾಮ್ ಗೌತಮ್, ಕೇವಲ ಸ್ವಾರ್ಥಕ್ಕಾಗಿ ಕಾರ್ಯನಿರ್ವಹಿಸುವ ಹಲವಾರು ಶಕ್ತಿಗಳ ನಡುವೆ ಪೂಜ್ಯ ರಾಜೇಶ್ವರಿಜೀ ಮಹಾಸ್ವಾಮಿ ವಿಶ್ವಮಟ್ಟದಲ್ಲಿ ಹಿಂದೂ ಧಾರ್ಮಿಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿರುವುದು ಸಂತಸ ವಿಷಯ ಎಂದರು. ಗೌರವಾಧ್ಯಕ್ಷ ಎಂ.ವಾಸುದೇವರಾವ್ ಸಮುದಾಯದ ಪರವಾಗಿ ಶ್ರೀಗಳನ್ನು ಸನ್ಮಾನಿಸಿದರು. ತಾಲ್ಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಎಂ.ವಾಸುದೇವರಾವ್ ಮತ್ತು ಪದಾಧಿಕಾರಿಗಳು ಸಮುದಾಯದ ಪರವಾಗಿ ಶ್ರೀಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ಟಿ.ಎಸ್.ಗುಂಡೂರಾವ್, ಉಪಾಧ್ಯಕ್ಷ ಎಂ.ನಾಗರಾಜರಾವ್, ಕಾರ್ಯದರ್ಶಿ ಎನ್.ಗೋಪಿನಾಥ, ಸಹ ಕಾರ್ಯದರ್ಶಿ ಎಂ.ಸತ್ಯನಾರಾಯಣರಾವ್, ಖಜಾಂಚಿ ಪ್ರಕಾಶ್, ಸಹ ಖಜಾಂಚಿ ಪಿ.ಆರ್.ನರಸಿಂಹಮೂರ್ತಿ, ನಿರ್ದೇಶಕರಾದ ಅನಂತಪ್ರಸಾದ್, ಲಕ್ಷ್ಮಿಶ್ರೀವತ್ಸ ಮಲ್ಲಿಕಾರ್ಜುನ, ಶೈಲಜಾ, ಶಾಂತಮ್ಮ, ರಾಮಣ್ಣ, ಶ್ರೀನಾಥ, ಸಿ.ಎಸ್.ಗೋಪಿನಾಥ, ಕೃಷ್ಣ, ಮಹಿಳಾಘಟಕದ ಅಧ್ಯಕ್ಷೆ ಸೀತಾಲಕ್ಷ್ಮಿ, ಮುಂತಾದವರು ಉಪಸ್ಥಿತರಿದ್ದರು.