ಹರಪನಹಳ್ಳಿ:
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಅರ್ಪಣೆ ತಾಲ್ಲೂಕು ಘಟಕ ಸದಸ್ಯರು ಗುರುವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು.
ಋತುಮಾನ ಶಾಲೆಗಳ ಪ್ರೇರಕರನ್ನು ಎನ್.ಜಿ.ಒಗಳು ತೀರಾ ನಿಷ್ಠುರವಾಗಿ ಕಾಣುತ್ತಿವೆ. ಶಿಕ್ಷಣ ಇಲಾಖೆಗೆ ಎನ್.ಜಿ.ಒಗಳ ಪ್ರವೇಶಕ್ಕೆ ಕಡಿವಾಣ ಹಾಕುವ ಜತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡದ ಬಳ್ಳಾರಿಯ ಮೂಲದ ಎನ್.ಜಿ.ಒ ಅನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಋತುಮಾನ ಕೇಂದ್ರದ ಪ್ರೇರಕರ, ಸಹಾಯಕರ ಗೌರವಧನ, ರೇಷನ್ ಮೊತ್ತ ಕೊಡಿಸಬೇಕು. 2019-20 ಸಾಲಿನ ಋತುಮಾನ ಕೇಂದ್ರದ ನಿರ್ವಹಣೆಯನ್ನು ಆಯಾ ಸ್ಥಳೀಯ ನಿರುದ್ಯೋಗಿಗಳಿಗೆ ನೀಡುವುದರ ಮೂಲಕ ಉದ್ಯೋಗ ಸೃಷ್ಟಿಸಿ ಕಾಯಂಗೊಳಿಸುವುದು ಎಂದು ಒತ್ತಾಯಿಸಿದರು.
ಗುಳೆ ಹೋಗಿರುವ ಕುಟುಂಬಗಳ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಬೇಕು. ಅದಕ್ಕಾಗಿ ಕೆಲವು ಪ್ರದೇಶಗಳಲ್ಲಿ ನಿರಂತರ ಋತುಮಾನ ಕೇಂದ್ರಗಳನ್ನು ಸ್ಥಾಪಿಸಬೇಕು. ಖಾಸಗೀಕರಣಕ್ಕೆ ಕಡಿವಾಣ ಹಾಕುವುದರ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಎಸ್ಎಫ್ ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ, ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಕ, ತಾಲ್ಲೂಕು ಮುಖಂಡರಾದ ಬಸವರಾಜ್ ದಾದಾಪುರ, ಎಚ್.ಎಂ.ಎಚ್. ಕೊಟ್ರಯ್ಯ, ಹಾಲೇಶ್, ಕಿರಣ್ ಇತರರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
