ದಾವಣಗೆರೆ:
ವಾಕ್ ಮತ್ತು ಶ್ರವಣದೋಷವುಳ್ಳವರಿಗೆ ಶಾಸಕರ ಅನುದಾನದಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಕಲ್ಪಿಸಲು ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಸೇರಿದಂತೆ ವಿಷಯಗಳ ಬಗ್ಗೆ ಸದನದಲ್ಲಿ ದನಿ ಎತ್ತುವುದಾಗಿ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಭರವಸೆ ನೀಡಿದರು.
ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಕಚೇರಿ(ಐಎಂಎ)ಹಾಲ್ನಲ್ಲಿ ಗುರುವಾರ ಜಿಲ್ಲಾ ಕಿವುಡರ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವ ವಾಕ್ ಮತ್ತು ಶ್ರವಣದೋಷವುಳ್ಳವರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.
ಪ್ರಸ್ತುತ ನಿಯಮ ಹಾಗೂ ಕಾನೂನು ಅನ್ವಯ ಶಾಸಕರ ಅನುದಾನದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಕೊಡಲು ಬರುವುದಿಲ್ಲ.
ಹೀಗಾಗಿ ಶಾಸಕರ ಅನುದಾನದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಶಾಸಕರ ಅನುದಾನದಲ್ಲಿ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತರವುದು ಸೇರಿದಂತೆ ಇತರೆ ಸೌಲಭ್ಯಗಳ ವಿಚಾರದ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕಿವುಡರ ಸಂಘದಲ್ಲಿ 500 ಜನ ಸದಸ್ಯರಿದ್ದು, ಸಂಘ ಚೆನ್ನಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕಿವುಡರು ಸೇರಿದಂತೆ ಇತರೆ ವಿಕಲಚೇತನರ ಸಂಖ್ಯೆ ಹೆಚ್ಚಾಗದಂತೆ ತಡೆಯಲು ಆರೋಗ್ಯ, ಸಾಮಾಜಿಕ, ವೈಜ್ಞಾನಿಕ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ವಾಕ್ ಮತ್ತು ಶ್ರವಣದೋಷವುಳ್ಳವರನ್ನು ಸಾಮಾನ್ಯವಾಗಿ ಯಾರೂ ಸಹ ಮದುವೆ ಆಗಲು ಮುಂದೆಬರುವುದಿಲ್ಲ. ಆದ್ದರಿಂದ ವಾಕ್ ಮತ್ತು ಶ್ರವಣದೋಷವುಳ್ಳವರು ನಡುವೆ ಮಾಡಿಕೊಳ್ಳುವ ವಿವಾಹಕ್ಕೆ ಸರ್ಕಾರ ಪ್ರೋತ್ಸಾಹ ಧನ ನೀಡಬೇಕೆಂದು ಮನವಿ ಸಲ್ಲಿಸಿದ್ದೀರಿ. ಆದರೆ, ನನಗೆ ತಿಳಿದಂತೆ ವಾಕ್ ಮತ್ತು ಶ್ರವಣದೋಷವುಳ್ಳವರೇ ತಮ್ಮೊಳಗೆಯೇ ಮದುವೆ ಆಗುವುದರಿಂದ ಮುಂದೆ ಅವರಿಗೆ ಹುಟ್ಟುವ ಮಕ್ಕಳು ಸಹ ಅದೇ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವಾಕ್ ಮತ್ತು ಶ್ರವಣದೋಷವುಳ್ಳವರನ್ನು ಸಾಮಾನ್ಯರು ಮದುವೆ ಆಗುವುದು ಒಳ್ಳೆಯದು ಎಂದರು.
ಸಿಆರ್ಸಿ ಸೆಲ್ ನಿರ್ದೇಶಕ ಜ್ಞಾನವೇಲು ಮಾತನಾಡಿ, ಸಾಮಾನ್ಯರು ಸಹ ಸಂವಹನ ಭಾಷೆ ಕಲಿಯುವ ಮೂಲಕ ವಾಕ್ ಮತ್ತು ಶ್ರವಣದೋಷವುಳ್ಳವರೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದಾಗಿದೆ. ಶಾಲಾ-ಕಾಲೇಜುಗಳಲ್ಲಿ ಸಂವಹನ ಭಾಷೆ ಐಚ್ಛಿಕ ಭಾಷೆಯನ್ನಾಗಿಸಿ, ವಾಕ್ ಮತ್ತು ಶ್ರವಣದೋಷವುಳ್ಳವರಿಗೂ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
1 ವರ್ಷದ ಒಳಗಾಗಿ ವಾಕ್ ಮತ್ತು ಶ್ರವಣದೋಷವುಳ್ಳವರ ಸಮಸ್ಯೆ ಗುರುತಿಸಿ, ಚಿಕಿತ್ಸೆ ನೀಡುವ ಮೂಲಕ ಮಾತನಾಡುವಂತೆ ಮಾಡಬಹುದು. ಇದಕ್ಕೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ ಇದೆ. 5 ವರ್ಷದ ಮೇಲ್ಪಟ್ಟ ನಂತರ ಸಂವಹನ ಭಾಷೆ ಕಲಿಸಬೇಕಾಗುತ್ತದೆ. 1 ವರ್ಷದ ಒಳಗೆ ಗುರುತಿಸಿ, ಪರಿಣಾಮಕಾರಿ ಚಿಕಿತ್ಸೆ ನೀಡಿದಲ್ಲಿ ಮುಂದೆ ಕಿವುಡರೇ ಇಲ್ಲದಂತಹ ವಾತಾವರಣ ಸೃಷ್ಟಿಸಬಹುದಾಗಿದೆ ಎಂದರು.
ವಿಕಲಚೇತನರು, ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಿ.ಎಸ್. ಶಶಿಧರ್ ಮಾತನಾಡಿ, ಶಾಸಕರು 10 ಲಕ್ಷದವರೆಗೆ ವಿಕಲಚೇತನರ ಸೌಲಭ್ಯಕ್ಕೆ ಅನುದಾನ ನೀಡಬಹುದು. ವಾಕ್ ಮತ್ತು ಶ್ರವಣದೋಷವುಳ್ಳವರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಆಗುವಂತೆ ಅನುದಾನ ನೀಡುವ ಅಗತ್ಯತೆ ಇದೆ. ಹಾಗಾಗಿ ಕಾನೂನು ತಿದ್ದುಪಡಿಯ ಬಗ್ಗೆ ಸದನದಲ್ಲಿ ಶಾಸಕರು ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ, ನ್ಯಾಯವಾದಿ ನಿಟುವಳ್ಳಿ ಟಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಾಜಿ ಪಾಟೀಲ್, ಎಸ್.ಜಿ. ಸಿದ್ದೇಶ್, ಶಾರುಖ್ಖಾನ್ ಇತರರು ಉಪಸ್ಥಿತರಿದ್ದರು. ಸಂಕಲ್ಪ ಸಂಸ್ಥೆ ನಿರ್ದೇಶಕ ಎಸ್. ಸುರೇಶ್ ಪ್ರಾಸ್ತಾವಿಕ ಮಾತುಗಳಾಡಿದರು. ಸಾವಿತ್ರಮ್ಮ ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
