ತಿಪಟೂರು
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ನಾಗತಿಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ನಡೆದಿದ್ದ ವಸಗೆ ಊಟವನ್ನು ಸೇವಿಸಿ ಸುಮಾರು 60 ಜನ ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆ ನಂತರ ಬಹುತೇಕ ಎಲ್ಲರೂ ಚೇತರಿಸಿಕೊಂಡಿದ್ದಾರೆ.
ನೆಂಟರು, ಊರಿನವರು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನ ವಸಗೆಗೆ ಮಾಡಿದ್ದ ಊಟವನ್ನು ಸೇವಿಸಿದ್ದು ಮುಂಜಾನೆ 5 ರ ವೇಳೆಯಲ್ಲಿ ನಾಗತಿಹಳ್ಳಿ ಗ್ರಾಮದ ಹಲವರಿಗೆ ತಲೆ ಸುತ್ತು, ವಾಂತಿ, ಭೇದಿ ಕಂಡು ಬಂದಿದ್ದು ತಕ್ಷಣ ಅವರನ್ನು ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಅವರಲ್ಲಿ ಸುಸ್ತಾಗಿದ್ದ 20ಕ್ಕೂ ಹೆಚ್ಚು ಜನರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಸಂಜೆ ವೇಳೆಗೆ ಈ ಸಂಖ್ಯೆ ಹೆಚ್ಚಾಗಿದ್ದು 30 ಜನರನ್ನು ದಾಟಿದ್ದು ಬಹುತೇಕ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಊಟ ಸೇವಿಸಿದ್ದ ಅರಸೀಕೆರೆ ತಾಲ್ಲೂಕಿನ ನೆಂಟರಲ್ಲಿ ಕೆಲವರು ಅಸ್ವಸ್ಥಗೊಂಡಿದ್ದು ಅವರನ್ನು ಅರಸೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದ ತಕ್ಷಣ ಗ್ರಾಮಕ್ಕೆ ಧಾವಿಸಿ ಅಸ್ವಸ್ಥರೆಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲರೂ ಚೇತರಿಸಿಕೊಂಡಿದಾರೆ.
ವಿಷಯ ತಿಳಿದ ತಕ್ಷಣ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ತೆರಳಿ ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಮೋಹನ್ ಮತ್ತು ಸಿಬ್ಬಂದಿ ತುಮಕೂರಿನಿಂದ ಆಗಮಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದರು. ಘಟನೆ ಹೊನ್ನವಳ್ಳಿ ಪೊಲೀಸ್ಠಾಣೆಯಲ್ಲಿ ದಾಖಲಾಗಿದೆ.
ಭಾನುವಾರ ಮಧ್ಯಾಹ್ನ ಅಡುಗೆ ಮಾಡಿದ್ದರಿಂದ ಅದರ ಸ್ಯಾಂಪಲ್ ಸಿಕ್ಕಿಲ್ಲ. ಅಡುಗೆಗೆ ಬಳಸಿದ್ದ ಸಾಮಗ್ರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕಲಾಯಿ ಇಲ್ಲದ ಪಾತ್ರೆಯಲ್ಲಿ ಅಡುಗೆ ಮಾಡಲಾಗಿತ್ತು ಎಂಬುದರ ಕುರಿತೂ ಪರಿಶೀಲನೆ ನಡೆಯುತ್ತಿದೆ. ಸದ್ಯಕ್ಕೆ ಫುಡ್ ಪಾಯ್ಸನ್ ನಿಂದ ಹೀಗಾಗಿರಬಹುದು ಎಂದು ಶಂಕಿಸಲಾಗಿದ್ದು ಎಲ್ಲಾ ಅಸ್ವಸ್ಥರ ಸೂಕ್ತ ಚಿಕಿತ್ಸೆ ನೀಡಿ ನಿಗಾ ಇಡಲಾಗಿದೆ. ಡಾ. ರವಿಕುಮಾರ್ ತಾಲ್ಲೂಕು ಆರೋಗ್ಯಾಧಿಕಾರಿ, ತಿಪಟೂರು.