ತುಮಕೂರು
ಗೂರೂರು ಡ್ಯಾಮ್ನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಲ್ಲಿ ನೀರು ಹರಿಸುವ ಸಂಬಂಧ ಬೆಂಗಳೂರಿನಲ್ಲಿ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.ಹೇಮಾವತಿ ಜಲಾಶಯದ ನೀರನ್ನು ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕೆಂಬ ನಿಯಮವಿದೆಯೋ ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ತಿಳಿಸಿದರು.
ಸಚಿವರಾದ ಮಾಧುಸ್ವಾಮಿ, ಗೋಪಾಲಯ್ಯ ಹಾಗೂ ತುಮಕೂರು ಸಂಸದ ಜಿ.ಎಸ್. ಬಸವರಾಜ್, ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಮಂಡ್ಯ, ಹಾಸನ, ತುಮಕೂರು ಶಾಸಕರು, ಪರಿಷತ್ ಸದಸ್ಯರು ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.
ನೀರು ಹಂಚಿಕೆ ವಿಚಾರದಲ್ಲಿ ಹಾಸನದವರು ಅನ್ಯಾಯ ಮಾಡಿದರೆಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಹೇಳಿದ ಸಂದರ್ಭದಲ್ಲಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಆಗ, ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಹಾಸನದವರು ಅನ್ಯಾಯ ಮಾಡಿದರು, ಹಾಸನದವರು ಅನ್ಯಾಯ ಮಾಡಿದರೆಂದು ಹೇಳುತ್ತಲೇ ಇದ್ದೀರಿ. ಚರ್ಚೆಗೆ ಅವಕಾಶ ಕೊಡಿ. ಚರ್ಚೆ ಆಗಲಿ. ಎಲ್ಲಿ ಎಷ್ಟು ನೀರು ಬರುತ್ತದೆ. ಸಂಗ್ರಹ ಎಷ್ಟಾಗುತ್ತದೆ ಎಂಬುದು ನಮಗೂ ಗೊತ್ತಿದೆ ಎಂದು ಏರು ಧ್ವನಿಯಲ್ಲಿ ಹೇಳಿದರು.
ಆಗ ಸಂಸದ ಜಿ.ಎಸ್.ಬಸವರಾಜ್ ಅವರಿಗೂ, ಶಾಸಕ ಶಿವಲಿಂಗೇಗೌಡ ನಡುವೆ ಮಾತಿನ ಚಕಮಕಿ ಉಂಟಾಯಿತು. ಚರ್ಚೆ ಆಗಲಿ ಎಂದರು ಸಂಸದ ಬಸವರಾಜ್.ಇದರ ಮಧ್ಯ ಪ್ರವೇಶಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಸಚಿವರೇ ಹಿಂದೆ ಅದಾಗಿತ್ತು, ಇದಾಗಿತ್ತು ಅನ್ನೋದರ ಬಗ್ಗೆ ಚರ್ಚೆ ಬೇಡ. ಈಗ ಇರುವ ನೀರನ್ನು ಮೂರು ಜಿಲ್ಲೆಗಳಿಗೆ ಹೇಗೆ ಮ್ಯಾನೇಜ್ ಮಾಡಬೇಕು ಅನ್ನೋದರ ಬಗ್ಗೆ ಮಾತ್ರ ಹೇಳಿ ಅಂತಾ ಪಟ್ಟು ಹಿಡಿದರು.
ಸಭೆಯಲ್ಲಿ ಹೆಚ್.ಡಿ. ರೇವಣ್ಣ ಮಾತನಾಡಿ, ನೀರನ್ನು ಸಮಾನವಾಗಿ ಹಂಚಿಕೆ ಮಾಡಿ. ಹಾಸನ, ತುಮಕೂರು, ಮಂಡ್ಯ ಬೇರೆ ಬೇರೆ ಅಲ್ಲ. ಎಲ್ಲರಿಗೂ ನೀರು ಕೊಡಬೇಕು. ರೈತರು ಬೆಳೆ ಬೆಳೆಯಬೇಕು. ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು .ಹಾಸನದವರು ನೀರು ಬಿಡುವುದಿಲ್ಲವೆಂದು ಆರೋಪ ಮಾಡ್ತಾರೆ. ನಾನು 15 ವರ್ಷಗಳ ಮಾಹಿತಿ ಕೊಡುತ್ತೇವೆ. ತುಮಕೂರಿಗೂ ನೀರು ಬಿಟ್ಟಿದ್ದೇವೆ. ನೀರು ಬಿಟ್ಟಿಲ್ಲ ಅನ್ನೋದು ಸರಿಯಲ್ಲ. ತುಮಕೂರಿಗೆ ಅನ್ಯಾಯ ಆಗ್ತಿದೆ ಅಂತ ದಿನಾ ಹೇಳ್ತಾರೆ. ರಾಜಕೀಯವಾಗಿ ಮಾತಾಡೋದು ಬೇಡ. 3 ಜಿಲ್ಲೆಗೂ ಸಮಾನತೆ ಇರಬೇಕು. ಎಲ್ಲಾ ಜಿಲ್ಲೆಗಳಿಗೆ ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.
ಇತ್ತೀಚೆಗೆ ಉತ್ತಮ ಮಳೆಯಾಗಿ ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಹೆಚ್ಚುವರಿ ನೀರನ್ನು ಹೊರಗೆ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ವ್ಯರ್ಥವಾಗುವ ನೀರನ್ನು ನಾಲೆಯಲ್ಲಿ ಹರಿಸಬೇಕು. ಈ ಹಿನ್ನೆಲೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು, ಪ್ರತಿವರ್ಷ ಜೂನ್, ಜುಲೈ ತಿಂಗಳಲ್ಲಿ ಈ ಸಭೆ ನಡೆಯುತ್ತಾ ಬಂದಿದೆ. ಶನಿವಾರ ಸಂಜೆಯಿಂದ ತುಮಕೂರು ನಾಲೆಯಲ್ಲಿ ನೀರು ಹರಿಯುತ್ತಾ ಬಂದಿದ್ದು, ಭಾನುವಾರವೇ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಪ್ರವೇಶಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
