ಚಿತ್ರದುರ್ಗ
ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇವೆ, ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಯಾರ ಬಳಿಯೂ ಹೋಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನ ಬನ್ನಿ ಎಂದು ಕರೆದಿಲ್ಲ ಎಂದು ಮೊಳಕಾಲ್ಮೂರು ಪಟ್ಟಣದಲ್ಲಿ ಶಾಸಕ ಶ್ರೀರಾಮುಲು ಸ್ಪಷ್ಟ ಪಡಿಸಿದ್ದಾರೆ.
ಮೊಳಕಾಲ್ಮೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಜೆಡಿಎಸ್ಗೆ ಸಿಎಂ ಸ್ಥಾನ ನೀಡಿದ್ದು, ಅವರ ಶಾಸಕರು ತಳಮಳಗೊಂಡು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದನ್ನ ಪ್ಯಾಚಪ್ ಮಾಡಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇಷ್ಟು ದಿನ ಶ್ರೀರಾಮುಲು, ಯಡಿಯೂರಪ್ಪ ಅಂದರು, ಈಗ ನಮ್ಮ ಪಿಎಗಳ ಸರದಿಯಾಗಿದೆ. ನಿಮ್ಮ ಶಾಸಕರನ್ನ ನೀವು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ. ಕುಣಿಯಲು ಆಗದವರು ನೆಲ ಡೊಂಕು ಅಂದ ಹಾಗೇ ನಾಟಕ ಮಾಡಬೇಡಿ. ನಾವ್ಯಾರೂ ಯಾರ ತಂಟೆಗೂ ಹೋಗಿಲ್ಲ, ನಿಮ್ಮ ಕೆಲಸ ನೀವು ಮಾಡಿ, ಸತ್ಯವನ್ನ ಜನರಿಗೆ ಹೇಳಿ ಎಂದು ಮೈತ್ರಿ ಸರ್ಕಾರದ ನಾಯಕರ ವಿರುದ್ಧ ರಾಮುಲು ಗುಡುಗಿದರು.
ನಾವು ಏನು ಮಾಡಿದ್ದೇವೆ, ಅದು ಯಾವಾಗೋ ಒಂದು ಸಮಯದಲ್ಲಿ ಅಪರೇಷನ್ ಕಮಲ ಮಾಡಿದ್ದೇವೆ. ಪದೇ ಪದೇ ಯಾಕೆ ಇದನ್ನ ಇಟ್ಟುಕೊಂಡಿದ್ದಿರೋ ಅರ್ಥ ಆಗುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಮ್ಮ ಪಕ್ಷದ ಶಾಸಕರನ್ನ ಅಪರೇಷನ್ ಮಾಡಲು ಹೊರಟಿದ್ದಾರೆಂದು ಎಂದು ಶ್ರೀರಾಮುಲು ಅವರು ಹೊಸ ಬಾಂಬ್ ಹಾಕಿದ್ದಾರೆ.
ಜನರಲ್ಲಿ ಈ ರೀತಿಯ ಗುಮಾನಿ ಸೃಷ್ಡಿಯ ಮಾಡುವುದು ಮೈತ್ರಿ ಸರ್ಕಾರಕ್ಕೆ ಹೊಸ ಪ್ಯಾಷನ್ ಆಗಿದೆ. ಆ ಹೊಸ ಪ್ಯಾಷನ್ನಲ್ಲಿ ಸಿಕ್ಕಿಕೊಳ್ಳಲು ನಾವು ರೆಡಿ ಇಲ್ಲ. ಮೈತ್ರಿ ಸರ್ಕಾರದಲ್ಲಿ ಎಲ್ಲರು ಒಗ್ಗಟ್ಟಿಲ್ಲ, ಬೇರೆಯವರನ್ನ ಭಯ ಬೀಳಿಸಲು ಈ ರೀತಿ ಸೃಷ್ಠಿ ಮಾಡುತ್ತಿದ್ದಾರೆ. ಅವರಿಗೆ ತಾಕತ್ ಇದ್ದರೆ ತಮ್ಮ ಶಾಸಕರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ. ಬರದ ಬಗ್ಗೆ ಗಮನ ನೀಡದೇ, ಅಪರೇಷನ್ ಕಮಲ ಅಂತಾ ಜನರನ್ನ ಇಕ್ಕಟ್ಡಿಗೆ ಸಿಲುಕಿಸಿ ಅನುಕಂಪ ಬರುವಂತೆ ಮಾಡುತ್ತಿದ್ದಾರೆ. ಜನರನ್ನ ತಪ್ಪು ದಾರಿಗೆ ಎಳೆದುಕೊಂಡು ಹೋಗಿ ಮಸಿ ಬಳಿಯುವ ಕೆಲಸ ಬಿಡಿ ಎಂದು ಮೈತ್ರಿ ಸರ್ಕಾರದ ವಿರುದ್ದ ರಾಮುಲು ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ