ರಾಷ್ಟ್ರದ 50 ಲೋಕಸಭಾ ಕ್ಷೇತ್ರಗಳಲ್ಲಿ ಪಿರಮಿಡ್ ಪಕ್ಷದ ಸ್ಪರ್ಧೆ

ಚಳ್ಳಕೆರೆ

         ಕಳೆದ 20 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯಮಟ್ಟದ ರಾಜಕೀಯ ಕ್ಷೇತ್ರದಲ್ಲಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಪಕ್ಷದ ಮೂಲ ಉದ್ದೇಶ ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಂತನಾಗಿರಬೇಕು, ಚಿಂತನೆಯಿಂದ ದೂರವಿರಬೇಕು, ಧ್ಯಾನ ಮಾಡುವ ಮೂಲಕ ಆರೋಗ್ಯ ಮತ್ತು ಆನಂದವನ್ನು ಪಡೆದು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.

       ಹಾಗಾಗಿ ನಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳು ಮತಯಾಚನೆ ಜೊತೆ ಜೊತೆಯಲ್ಲಿಯೇ ಆರೋಗ್ಯ ಜಾಗೃತಿಯನ್ನು ಸಹ ಮೂಡಿಸುತ್ತಿದ್ದಾರೆಂದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೈ.ಅರುಣಾಚಲಂ ತಿಳಿಸಿದರು.

       ಅವರು, ಬುಧವಾರ ಇಲ್ಲಿನ ಪಿರಮಿಡ್ ಪಾರ್ಕ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಿಂದ ಒಟ್ಟು 50ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಳ್ಳಾರಿ ಮೂಲದ ನಾನು ಇದೇ ಮೊದಲ ಬಾರಿಗೆ ಈ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಹಲವಾರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಿಗೆ ಭೇಟಿ ನೀಡಿದ್ದು, ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದರು.

       ನಗರದ ಪಿರಮಿಡ್ ಧ್ಯಾನ ಕೇಂದ್ರದ ತಾಲ್ಲೂಕು ಸಂಚಾಲಕ ಎ.ನಾಗೇಂದ್ರನ್ ಮಾತನಾಡಿ, ಈಗಾಗಲೇ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ವೈ. ಅರುಣಾಚಲಂ ಸ್ಪರ್ಧಿಸಿದ್ದು, ಮೊದಲ ಹಂತದ ಪ್ರಚಾರವನ್ನು ಮುಗಿಸಿದ್ಧಾರೆ. ಈ ಬಾರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹೆಚ್ಚು ಮತದಾರರನ್ನು ಭೇಟಿ ಮಾಡಿದ್ಧಾರೆ. ಆರೋಗ್ಯಭಾಗ್ಯದ ನಂತರ ಮತದಾನದ ಭಾಗ್ಯದ ಬಗ್ಗೆ ಚಿಂತನೆ ನಡೆಯಲಿದೆ ಎಂದರು.

        ಈ ಸಂದರ್ಭದಲ್ಲಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಗಳಾದ ಕೆ.ಕೃಷ್ಣ, ಬೋರಯ್ಯ, ಎಂ.ರಾಮಾಂಜನೇಯ, ತಿಪ್ಪಾರೆಡ್ಡಿ, ರಘು, ಪಿ.ಭಾಸ್ಕರ್‍ರಾವ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap