ದಾವಣಗೆರೆ
ಕಳೆದ 16 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕಳೆದ 11 ದಿನಗಳಿಂದ ನಗರದ ಜಯದೇವ ವೃತ್ತದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜೆಜೆಎಂ ಕಾಲೇಜ್ನ ವೈದ್ಯಕೀಯ ವಿದ್ಯಾರ್ಥಿಗಳು ಗುರುವಾರ ತಟ್ಟೆ ಬಾರಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ 11 ಗಂಟೆಗೆ ಜಮಾಯಿಸಿದ ವೈದ್ಯಕೀ ವಿದ್ಯಾರ್ಥಿಗಳು 11 ನಿಮಿಷಗಳ ಕಾಲ ಚಮಚಗಳಿಂದ ತಟ್ಟೆಗಳನ್ನು ಬಾರಿಸಿ ಸರ್ಕಾರವನ್ನು ಎಚ್ಚರಿಸಿದರು. ಅಲ್ಲದೆ, ಕೊರೊನಾ ನಿಯಂತ್ರಣ ಕ್ರಮವಾಗಿ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರದ ದಿನ ಜನತಾ ಕಫ್ರ್ಯೂಗೆ ಕರೆ ನೀಡಿದ ಬಳಿಕ ಕೊರೊನಾ ವಾರಿಯರ್ಸ್ಗಳಿಗೆ ಗೌರವ ಸೂಚಿಸಲು ತಟ್ಟೆ ಬಾರಿಸಿ, ಚಪ್ಪಾಳೆ ತಟ್ಟಿ ಎಂಬುದಗಿ ಪ್ರಧಾನಿ ಮೋದಿ ಅವರು ಕರೆ ನೀಡಿದನ್ನು ಅಣಕಿಸುವಂತೆ ತಟ್ಟೆಗಳಿಂದ ಶಬ್ದ ಹೊರಹೊಮ್ಮುತ್ತಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ವಿದ್ಯಾರ್ಥಿ ಡಾ.ರಾಹುಲ್, ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನಮಗೆ ಸರ್ಕಾರ ಚಪ್ಪಾಳೆ ತಟ್ಟಿ ಅಭಿನಂದಿಸಿತು. ಆದೇ ರೀತಿ ತಟ್ಟೆ ಹೊಡೆಯುವುದರೊಂದಿಗೆ ನಾವುಗಳು ಸರ್ಕಾರದ ಕಾರ್ಯಾವೈಖರಿಯನ್ನು ಅವರಿಗೆ ತೋರಿಸಿದ್ದೇವೆ ಎಂದು ಹೇಳಿದರು.
ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವ ವಿಚಾರವಾಗಿ ಕಾಲೇಜಿನ ಆಡಳಿತ ಮಂಡಳಿ ಕೊಡುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ. ಸರ್ಕಾರ ನಮ್ಮಗಳ ಬೇಡಿಕೆ ಇನ್ನೆರಡು ದಿನಗಳಲ್ಲಿ ಈಡೇರಿಸದಿದ್ದಲ್ಲಿ ಕೋವಿಡ್ ಸೇವೆ ಹೊರತು ಪಡಿಸಿ, ಉಳಿದ ಸೇವೆಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ನಮ್ಮ ಕೂಗು ಕೇಳಿಸುತ್ತಿಲ್ಲ. ನಮ್ಮ ಸಂಕಷ್ಟಗಳಿಗೆ ಅವರು ಸ್ಪಂದಿಸುತ್ತಿಲ್ಲ. ಈಗಲೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದನ್ನು ನೋಡಿದರೆ ನಮ್ಮಗಳ ಮೇಲೆ ಸರ್ಕಾರಕ್ಕೆ ಎಷ್ಟು ಕಾಳಜಿ ಇದೆ ಎಂದು ತೋರಿಸಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೇ ಹಂತ ಹಂತವಾಗಿ ಕೋವಿಡ್ ಕೆಲಸ ಹೊರತು ಪಡಿಸಿ ಉಳಿದ ಕೆಲಸಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬುಧವಾರ ವಿದ್ಯಾರ್ಥಿಗಳು ಜೆಜೆಎಂ ಕಾಲೇಜಿನ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಹೋಗಿದ್ದೇವು. ಅಲ್ಲಿ ಅವರು, ನಾವು ಶಿಷ್ಯ ವೇತನ ಕೊಡುವುದಿಲ್ಲ ಎಂದು ಹೇಳಿದರು ಮತ್ತು ಪತ್ರವನ್ನು ಸಹ ಕೊಟ್ಟಿದ್ದಾರೆ. ಇಂದಿಗೆ ನಮ್ಮ ಹೋರಾಟ 11ನೇ ದಿನಕ್ಕೆ ಬಂದಿದೆ. 10 ದಿನವಾದರೂ ಕಿವುಡು ಸರ್ಕಾರಕ್ಕೆ ನಮ್ಮಗಳ ಧ್ವನಿ ಮುಟ್ಟಿಲ್ಲ. ಬಿಸಿಲು, ಮಳೆಯಲ್ಲಿ ಹುಡುಗರು, ಹುಡುಗಿಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಹೆಣ್ಣು ಮಕ್ಕಳಿಗೆ ಚರ್ಮದ ತೊಂದರೆ ಕಂಡು ಬರುತ್ತಿದೆ ಎಂದರು.
ಶಿಷ್ಯ ವೇತನ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು. ವಿವಿಧ ರೀತಿಯಲ್ಲಿ ಮುಷ್ಕರ ನಡೆಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಸರ್ಕಾರ ಆಡಳಿತ ಮಂಡಳಿ ಮೇಲೆ ಹಾಕುತ್ತದೆ. ಆಡಳಿತ ಮಂಡಳಿ ಸರ್ಕಾರದ ನಿರ್ಧಾರದ ಮೇಲೆ ಹಾಕುತ್ತದೆ. ನಮಗೆ ಬೆಲೆ ಕೊಡುವುದಿಲ್ಲ ಎಂದ ಮೇಲೆ ನಾವೇಕೆ ಸರ್ಕಾರಕ್ಕೆ ಬೆಲೆ ಕೊಡಬೇಕು. ನಮ್ಮನ್ನು ಜೀತದಾಳಿನ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಸರ್ಕಾರ ಶಿಷ್ಯ ವೇತನದ ವಿಚಾರವಾಗಿ ನಿರ್ಧಾರ ಪ್ರಕಟಿಸಲಿ ಎಂದು ಒತ್ತಾಯಿಸಿದರು.
ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಮುಷ್ಕರದಲ್ಲಿ ಡಾ.ಹರೀಶ್, ಡಾ.ಅನಿರುದ್ಧ್, ಡಾ.ನಿಧಿ, ಡಾ.ಮೇಘನಾ, ಡಾ.ಸುಧಾಕರ್, ಡಾ.ಹಿತಾ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
