ಹಿರಿಯೂರು :
ಮೈತ್ರಿ ಸರ್ಕಾರವನ್ನು ಬಿಜೆಪಿ ಬೀಳಿಸುವ ಅಗತ್ಯವಿಲ್ಲ ಅವರವರೇ ಕಚ್ಚಾಡಿ ಬೀಳಿಸಿಕೊಳ್ಳುತ್ತಾರೆ ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.
ನಗರದ 1,2,4,5, ಮತ್ತು 22ನೇ ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪಾದಯಾತ್ರೆಯಲ್ಲಿ ತೆರಳಿ ಮತಯಾಚಿಸಿ ಅವರು ಮಾತನಾಡಿದರು.ಬಿಜೆಪಿಯ ಮೇಲೆ ಒಂದು ಸಮುದಾಯದವರನ್ನು ಎತ್ತಿ ಕಟ್ಟುವ ಮೂಲಕ ಮತಬ್ಯಾಂಕ್ ರಾಜಕೀಯ ಮಾಡಿದ್ದರಿಂದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಿಂದ ದೂರ ಉಳಿಯಬೇಕಾಯಿತು ಎಂದರು.
ಭವಿಷ್ಯದಲ್ಲಿ ಬಿಜೆಪಿ ನಡೆ ಏನೆಂಬ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಸಬ್ ಕಾ ವಿಕಾಸ್ ಜೊತೆ ಸಬ್ ಕಾ ವಿಶ್ವಾಸ್ ನಮ್ಮ ಧ್ಯೇಯ. ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿ ಬಗ್ಗೆ ಭಯಪಡುವ ಅಗತ್ಯವಿಲ್ಲ.ಮೋದಿಯವರ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ. ಶಿಕ್ಷಣದಿಂದ ವಂಚಿತರಾಗಿರುವ, ಬಡತನವನ್ನು ಹಾಸು ಹೊಕ್ಕಾಗಿಸಿಕೊಂಡಿರುವ ಜನ ಇನ್ನಾದರೂ ತಮ್ಮ ಸ್ಥಿತಿಗೆ ಕಾರಣರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಸತೀಶ್ ಜಾರಕಿಹೊಳೆ ಅವರು ಬಿಜೆಪಿ ಶಾಸಕರು ತಮ್ಮ ಕಡೆ ಬರುತ್ತಾರೆ ಎಂದು ಹೇಳಿರುವ ಮಾತು ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ ಎಂಬಂತಿದೆ. ನಗರಸಭೆ ಆಡಳಿತ ಬಿಜೆಪಿಗೆ ಬಂದಲ್ಲಿ ಒಳಚರಂಡಿ ವ್ಯವಸ್ಥೆ ಉದ್ಯಾನವನಗಳ ಅಭಿವೃದ್ಧಿ, ರಸ್ತೆ ಅಗಲೀಕರಣ, ಸೇರಿ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಪೂರ್ಣಿಮಾ ಹೇಳಿದರು.
ಇದೇ ಸಂದರ್ಭದಲ್ಲಿ ಯುವಕಾಂಗ್ರೆಸ್ ಮುಖಂಡ ಸರ್ದಾರ್ ಬಿಜೆಪಿಗೆ ಸೇರ್ಪಡೆಯಾದರು. ನಗರಸಭೆ ಮಾಜಿ ಸದಸ್ಯ ಕರಿಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಯಶವಂತರಾಜು, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ದ್ಯಾಮಣ್ಣ, ಬಿ.ಆರ್.ಮಂಜುನಾಥ್, ಹರ್ಷಶೆಟ್ಟಿ, ಸುರೇಶ್, ರಾಧ, ರುದ್ರಮ್ಮ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
