ದಾವಣಗೆರೆ:
ಸ್ವಚ್ಛತೆಯ ವಿಷಯದಲ್ಲಿ ಸಾರ್ವಜನಿಕರು ಪಾಲಿಕೆಯೊಂದಿಗೆ ಕೈ ಜೋಡಿಸಿದರೆ, ಸುಂದರ ನಗರ ನಿರ್ಮಾಣ ಸಾಧ್ಯವಾಗಲಿದೆ ಎಂದು ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ ತಿಳಿಸಿದರು.
ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಮಹಾನಗರ ಪಾಲಿಕೆಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಚ್ಛ ಭಾರತ ಕುರಿತ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆಯೊಂದರಿಂದಲೇ ಮಾತ್ರ ಸ್ವಚ್ಛತೆ ಕಾಪಾಡಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ, ಸಹಭಾಗಿತ್ವವೂ ಅತೀ ಮುಖ್ಯವಾಗಿದೆ. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆಯ ವಿಷಯದಲ್ಲಿ ಪಾಲಿಕೆಯೊಂದಿಗೆ ಕೈಜೋಡಿಸಿದರೆ, ದಾವಣಗೆರೆಯನ್ನು ಸುಂದರ ನಗರವನ್ನಾಗಿ ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಈಗಾಗಲೇ ಶಾಸಕ ಶಾಮನೂರು ಶಿವಶಂಕರಪ್ಪನವರು ಕೆಲ ಉದ್ಯಾನವನಗಳನ್ನು ದತ್ತುಪಡೆದು, ಹಸರೀಕರಣ ಒತ್ತು ನೀಡಿದ್ದಾರೆ. ಇದಕ್ಕೆ ನಾಗರೀಕರ ಸಹಕಾರವು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಕಾರ್ಯಪ್ರವೃತ್ತವಾಗಬೇಕಿದೆ ಎಂದರು.
ಸ್ವಚ್ಛ ಭಾರತ ಸಂಯೋಜಕಿ ಡಾ.ಹೆಚ್.ಎಸ್.ಶಾಂತ ಮಾತನಾಡಿ, ಜ್ಞಾನ ಬಿತ್ತುವ ಮೂಲಕ ಪ್ರತಿಯೊಬ್ಬರ ಮನಸ್ಸು ಪರಿವರ್ತನೆ ಮಾಡಬೇಕಾಗಿದೆ. ಮೊದಲು ಸ್ವಚ್ಛ ನಗರ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಈಗಾಗಲೇ ಕಸ-ರಸ ಅಭಿಯಾನ ಈ ಕೆಲಸ ಮಾಡುತ್ತಿದೆ ಎಂದರು.
ಸ್ವಚ್ಛತೆಯ ಬಗ್ಗೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಸ್ವಚ್ಛತೆಯ ವಿಷಯದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತೀ ಮುಖ್ಯವಾಗಿದೆ. ನಮ್ಮ ಮನೆಗಳಲ್ಲಿ ನಾವು ಸ್ವಚ್ಛತೆಗೆ ನೀಡುವ ಮಹತ್ವವನ್ನು ನಮ್ಮ ರಸ್ತೆ, ನಮ್ಮ ನಗರ ಎಂಬ ಭಾವನೆಯಿಂದ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ನಾಗರೀಕರು ಮನೆಯಲ್ಲಿ ಉತ್ಪತ್ತಿಯಾಗು ಕಸವನ್ನು ಒಣ ಹಾಗೂ ಹಸಿ ಕಸವನ್ನಾಗಿ ವಿಂಗಡಿಸುವ ಮೂಲಕ, ಮನೆಯ ಬಾಗಿಲಿಗೆ ಕಸ ಸಂಗ್ರಹಿಸಲು ಬರುವ ಪಾಲಿಕೆಯ ಟಿಪ್ಪರ್ಗೆ ನೀಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಉಪಮೇಯರ್ ಕೆ.ಚಮನ್ ಸಾಬ್, ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್, ಕಾಲೇಜಿನ ಪ್ರಾಂಶುಪಾಲೆ ಡಾ.ಸಿ.ಆರ್.ಶಕೀಲಾ ಬಾನು, ಕೆ.ಪಿ.ರಾಜೀವನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
