ಹುಳಿಯಾರು : ವಾಟರ್ ಪ್ಲಾಂಟ್ ದುರಸ್ತಿ ಯಾವಾಗ?

ಹುಳಿಯಾರು

     ಹುಳಿಯಾರು ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಹುಳಿಯಾರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅವರು ಒತ್ತಾಯಿಸಿದ್ದಾರೆ.

    ಹುಳಿಯಾರು ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ಸಂಸದರಾಗಿದ್ದ ಕಾಲದಲ್ಲಿ ಎಸ್.ಪಿ.ಮುದ್ಧಹನುಮೇಗೌಡರು ಬಸ್ ನಿಲ್ದಾಣದಲ್ಲಿ ಕಿರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು. ಈ ಘಟಕಕ್ಕೆ ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ ನೀರು ಸರಬರಾಜು ಮಾಡುತ್ತಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ನೀರು ಬರದಂತಾಗಿದೆ. ಪರಿಣಾಮ ಬಸ್ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು. ಮಹಿಳೆಯರು, ವೃದ್ಧರು ನೀರಿಲ್ಲದೆ ಪರದಾಡುವಂತ್ತಾಗಿದೆ.

   ಈ ಹಿಂದೆ ಬಸ್ ನಿಲ್ದಾಣದಲ್ಲಿ ಟೀ ಅಂಗಡಿಗಳು, ಕೆರೆ ದಡದಲ್ಲಿ ಹೋಟೆಲ್‍ಗಳು ಇದ್ದವು. ನೀರಿನ ಘಟಕ ಕೆಟ್ಟಿದ್ದರೂ ಅಲ್ಲಿಗೆ ಹೋಗಿ ನೀರು ಕುಡಿಯುತ್ತಿದ್ದರು. ಆದರೆ ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳನ್ನು ತೆರವು ಮಾಡಿದ ನಂತರ ನೀರಿರುವ ಒಂದೇ ಒಂದು ಸ್ಥಳ ಇಲ್ಲಿ ಇಲ್ಲದಂತಾಗಿದೆ. ಪರಿಣಾಮ ಬಾಯಾರಿಕೆ ತಡೆಯಲಾಗದೆ ದುಡ್ಡು ಕೊಟ್ಟು ನೀರಿನ ಬಾಟಲ್ ಖರೀದಿಸುತ್ತಿದ್ದಾರೆ.

   ಈ ಬಗ್ಗೆ ಪಪಂ ಅಧಿಕಾರಿಗಳನ್ನು ಸಂಪರ್ಕಿಸಿದರೆ ಘಟಕದ ನಿರ್ವಹಣೆಯ ಗುತ್ತಿಗೆ ಪಡೆದವರು ಇದನ್ನು ದುರಸ್ತಿ ಮಾಡಿಸಬೇಕಿದ್ದು ನಾವು ನೀರು ಮಾತ್ರ ಕೊಡುತ್ತೇವೆ ಎಂದೇಳಿ ಜಾರಿಕೊಳ್ಳುತ್ತಾರೆ. ಆದರೆ ಬಸ್ ಸುಂಕ ಸಂಗ್ರಹಿಸುವ ಪಪಂ ಮೂಲ ಸೌಕರ್ಯ ಕಲ್ಪಿಸುವ ಹೊಣೆ ನಮ್ಮದೆನ್ನುವುದನ್ನು ಮರೆತಿದ್ದಾರೆ. ಹಾಗಾಗಿ ಆಡಳಿತಾಧಿಕಾರಿಗಳಾಗಿರುವ ತಹಸೀಲ್ದಾರ್ ಅವರು ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ನೀರಿನ ಘಟಕ ದುರಸ್ತಿಗೆ ಮುಂದಾಗಲಿ ಎಂದು ಮನವಿ ಮಾಡಿದ್ದಾರೆ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap