ಹುಳಿಯಾರು:
ಹುಳಿಯಾರು ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕ ಸಂಬಳದ ಮುನಿಸಿಗೆ ಊರ್ತುಂಬ ಕಸ ಬಿದ್ದಿದ್ದು ನಿವಾಸಿಗಳು, ಪಾದಾಚಾರಿಗಳು ಪಪಂಗೆ ಹಿಡಿ ಶಾಪ ಹಾಕಿ ತಿರುಗಾಡುತ್ತಿದ್ದಾರೆ.
ಇತ್ತೀಚೆಗಷ್ಟೆ ಸಂಬಳಕ್ಕಾಗಿ ಪಪಂ ಮುಖ್ಯಾಧಿಖಾರಿ ಹಾಗೂ ಪೌರಕಾರ್ಮಿಕರು ಸಾರ್ವಜನಿಕರ ಎದುರಿಗೆ ಪರಸ್ಪರ ಕೂಗಾಡಿದ್ದರು. 24 ತಿಂಗಳಿಂದ ಸಂಬಳ ಕೊಡದೆ ಬಿಟ್ಟಿ ಕೆಲಸ ಮಾಡಿಸಿಕೊಂಳ್ಳುತ್ತಿದ್ದು ಸಂಬಳ ವಿಳಂಬಕ್ಕೆ ಪಪಂ ಮುಖ್ಯಾಧಿಕಾರಿಗಳೇ ಕಾರಣರೆಂದು ಪೌರಕಾರ್ಮಿಕರು ಆರೋಪಿಸಿದರೆ ಟ್ರಜರಿಯಲ್ಲಿ ಅಕೌಂಟ್ ಮಾಡದಿರುವುದೇ ಸಮಸ್ಯೆಗೆ ಕಾರಣವಾಗಿದ್ದು ನನ್ನ ಸಂಬಳ ಸಹ ಆಗದೆ ಸಾಲ ಮಾಡಿದ್ದೇನೆ ಎಂದು ಮುಖ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
ಆದರೂ ಕೇಳದ ಪೌರಕಾರ್ಮಿಕರು ಸಂಬಳ ಪಾವತಿಗಾಗಿ ಪಟ್ಟು ಹಿಡಿದು ಅಘೋಷಿತ ಮುಷ್ಕರ ನಡೆಸುತ್ತಿದ್ದಾರೆ. ಹಾಗಾಗಿಯೇ ಕಳೆದ 2 ತಿಂಗಳಿಂದ ಪಟ್ಟಣದಲ್ಲಿ ಬೀದಿ ಕಸ ಗುಡಿಸಿಲ್ಲ, ಕಸ ವಿಲೆ ಆಗಿಲ್ಲ. ಈ ಬಗ್ಗೆ ಪೌರಕಾರ್ಮಿಕರ ಅಧ್ಯಕ್ಷ ರಾಘವೇಂದ್ರ ಅವರನ್ನು ಪ್ರಶ್ನಿಸದರೆ ನಾವು ಮುಷ್ಕರ ಮಾಡ್ತಿಲ್ಲ ಎನ್ನುತ್ತರಾದರೂ ಕಸ ಗುಡಿಸಿಲ್ವಲ್ ಎಂದರೆ ಹೌದಾ ಗುಡಿಸಿಲ್ವಾ? ವಿಚಾರಿಸುತೇನೆ ತಾಳಿ ಎಂದು ಪೋನ್ ಕಟ್ ಮಾಡ್ತಾರೆ. ಪಪಂ ಮುಖ್ಯಾಧಿಕಾರಿಗಳನ್ನು ಕೇಳಿದರೆ ಅವರ ವಿಚಾರ ನಾವು ಮಾತನಾಡುವ ಆಗಿಲ್ಲ ಸಾರ್ ಮೇಲಧಿಕಾರಿಗಳನ್ನೇ ಕೇಳಿ ಎಂದು ಜಾರಿಕೊಳ್ಳುತ್ತಾರೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಮುಖ್ಯಾಧಿಕಾರಿಗಳು, ಪೌರಕಾರ್ಮಿಕರ ಜಗಳದಲ್ಲಿ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಎರಡು ದಿನಗಳಿಂದ ಕಸ ಗುಡಿಸದ ಪರಿಣಾಮ ರಸ್ತೆಯಲ್ಲಿ ಎಲ್ಲೆಂದರಲಿ ಕಸ ಬಿದಿದೆ. ಚರಂಡಿಗಳು ಸ್ವಚ್ಚವಾಗದೆ ಗಬ್ಬು ನಾರುತ್ತಿದೆ. ಮುಷ್ಕರ ಹೀಗೆ ಮುಂದುವರಿದರೆ ಹನಿ ನೀರಿಗೂ ಜನ ಪರದಾಡುವಂತ್ತಾಗುತ್ತದೆ. ಇಷ್ಟಾದರೂ ಮೇಲಧಿಕಾರಿಗಳು ಇತ್ತ ಗಮನ ಹರಿಸದೆ ಮೌನಕ್ಕೆ ಶರಣಾಗಿದ್ದಾರೆ.
ಒಟ್ಟಾರೆ ಮುಷ್ಕರ ಹೀಗೆ ಮುಂದುವರಿದರೆ ಪಟ್ಟಣ ಗಬ್ಬು ನಾರುವ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹಾಗಾಗಿ ಟ್ರಜರಿಯಲ್ಲಿನ ತಾಂತ್ರಿಕ ತೊಂದರೆಯನ್ನು ಪರಿಹರಿಸಿ ಪಪಂ ನೌಕರರ ಸಂಬಳ ಪಾವತಿ ಮಾಡಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ವಿಶೇಷ ಕಾಳಜಿವಹಿಸುವರೇ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/01/22HULIYAR3C.gif)