ಮಹಿಳಾ ಸುರಕ್ಷತೆ ಎನ್ನುವುದು ಜನ ಜಾಗೃತಿಯ ಕೆಲಸವಾಗಬೇಕು: ಬಿಕೆ ಹರಿಪ್ರಸಾದ್

ಬೆಂಗಳೂರು

   ರಾತ್ರಿ ವೇಳೆ ಬಾರ್, ಕ್ಲಬ್‍ಗಳಲ್ಲಿ ಮಹಿಳೆಯರು ದುಡಿಯಲು ಅವಕಾಶ ನೀಡಲಾಗಿದ್ದು, ಎಲ್ಲಿ? ಯಾವಾಗ ದುಡಿಯಬೇಕು ಎಂಬ ಆಯ್ಕೆ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಸೇರಿದ್ದು ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ.

    ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2020 ಮಂಡನೆ ಚರ್ಚೆಯ ವೇಳೆ ಸಚಿವ ಶಿವರಾಮ್ ಹೆಬ್ಬಾರ್, ಇದು ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಜಾರಿಗೆ ತಂದಿರುವ ವಿಧೇಯಕ. ಐಟಿ-ಬಿಟಿ ಮಾಲ್‍ಗಳಲ್ಲಿ ರಾತ್ರಿ ವೇಳೆ ಮಹಿಳೆಯರು ದುಡಿಯುತ್ತಿದ್ದು, ಇನ್ನು ಮುಂದೆ ಅಂಗಡಿಗಳಲ್ಲಿಯೂ ದುಡಿಯಬಹುದು. ರಾತ್ರಿ ವೇಳೆ ದುಡಿಯುವ ಮಹಿಳೆ ವಾಹನ ಹತ್ತಿದಾಗ ಆಕೆಯನ್ನು ಮೊದಲ ಪ್ರಯಾಣಿಕಳಾಗಿ ಹತ್ತಿಸಬಾರದು ಮತ್ತು ಕೊನೆಯದಾಗಿ ಇಳಿಯಬಾರದು ಎಂದರು.

   ಬಿಜೆಪಿಯ ಆಯನೂರು ಮಂಜುನಾಥ್ ಮಾತನಾಡಿ, ಅಂಗಡಿಗಳಲ್ಲಿ ರಾತ್ರಿಯಲ್ಲಿ ಮಹಿಳೆಯರು ಕೆಲಸ ಮಾಡುವ ಅಂಗಡಿಗಳು, ಉದ್ಯಮಗಳು ಯಾವುವು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.ಅಪ್ಪಾಜಿಗೌಡ ಮಾತನಾಡಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಜೊತೆ ಅವರ ಸಣ್ಣ ಮಕ್ಕಳಿಗೂ ಅವಕಾಶ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯವಾದರೂ, ಯಾವ ರೀತಿ ಸೌಲಭ್ಯ? ಹೇಗೆ ಎಂಬುದನ್ನು ವಿವರಿಸಬೇಕು ಎಂದರು.

    ಜೆಡಿಎಸ್‍ನ ಮರಿತಿಬ್ಬೇಗೌಡ ಮಾತನಾಡಿ, ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಬಹುದು. ಆದರೆ ವಾಹನದಲ್ಲಿ ಮೊದಲು ಹತ್ತಬಾರದು ಕೊನೆಯದಾಗಿ ಇಳಿಯಬಾರದು ಎಂಬ ಸಚಿವರ ಹೇಳಿಕೆಯ ಅರ್ಥವೇನು? ಗಾಂಧೀಜಿ ಹೇಳಿದಂತೆ ಇನ್ನೂ ರಾಮರಾಜ್ಯ ನಮ್ಮದಾಗಿಲ್ಲ. ರಾತ್ರಿ ವೇಳೆ ಕೆಲಸ ಮಾಡುವ ಅಂಗಡಿ ಮುಂಗಟ್ಟುಗಳು ಎಂದರೆ ಯಾವುವು? ಬಾರ್‍ಗಳಲ್ಲಿ, ಮಾಲ್‍ಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡಲು ಅವಕಾಶ ನೀಡಲಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಬೇಕು ಎಂದರು.

    ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮಹಿಳಾ ಸುರಕ್ಷತೆ ಎನ್ನುವುದು ಜನ ಜಾಗೃತಿಯ ಕೆಲಸವಾಗಬೇಕು. ಬಾಂಬೆ ಮತ್ತು ಕೊಲ್ಕತ್ತಾ ಹೆಚ್ಚು ಜನಸಂಖ್ಯೆ ಇರುವ ನಗರಗಳಾಗಿವೆ. ಇವು ಕ್ರೈಂ ಸಿಟಿಗಳಾಗಿವೆ. ಆದರೆ ನಮ್ಮ ಬೆಂಗಳೂರು ಹಾಗಿಲ್ಲ. ಇಲ್ಲಿ ಜನ ಜಾಗೃತಿ ಹೆಚ್ಚಾಗಬೇಕು. ಮಹಿಳಾ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಲು ಮೇಲ್ಮನೆಯಲ್ಲಿ ಚರ್ಚೆಯಾಗಬೇಕು. ಜನಜಾಗೃತಿ ಜೊತೆಗೆ ಆಪ್ತ ಸಮಾಲೋಚನೆ ಮಾಡಬೇಕು ಎಂದರು.

   ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೌಕರರೆ ಇಲ್ಲ. ತಾಲ್ಲೂಕಿ ಗೊಬ್ಬ ಕಾರ್ಮಿಕ ಇನ್‍ಸ್ಪೆಕ್ಟರ್ ಇಲ್ಲ. ಈ ಕಾಯಿದೆ ಉಲ್ಲಂಘಿಸಿದರೆ ಯಾರು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಬೇಕು ಎಂದರು.ಆಗ ಜೆಡಿಎಸ್‍ನ ತಿಪ್ಪೇಸ್ವಾಮಿ ಮಾತನಾಡಿ, ಮಂಜಣ್ಣ ಸದನದ ಬಾವಿಗಿಳಿದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು.ಉತ್ತರಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಎಲ್ಲರ ಸಲಹೆಗಳನ್ನು ಸ್ವೀಕರಿಸಲಾಗಿದೆ. ಕಾರ್ಮಿಕರ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಇರುವುದು ನಿಜ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ ಎಂದರು.

    ಐಟಿ-ಬಿಟಿ ಮಾಲ್‍ಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆ ಕೆಲಸ ಮಾಡಿ ಎಂದು ಸರ್ಕಾರ ಒತ್ತಡ ಹೇರಿಲ್ಲ. ಇಂತಹದ್ದೇ ಕಡೆ ಕೆಲಸ ಮಾಡಿ ಎಂದಿಲ್ಲ. ಪುರುಷರಿಗಿರುವಷ್ಟು ಸ್ವಾತಂತ್ರ್ಯ ಮಹಿಳೆಯರಿಗೂ ನೀಡಿದೆ. ಬಾರ್‍ಗಳಲ್ಲಿ ರಾತ್ರಿ ದುಡಿಯಿರಿ ಎಂದು ಸರ್ಕಾರ ಹೆಣ್ಣು ಮಕ್ಕಳನ್ನು ಬಲವಂತ ಪಡಿಸುತ್ತಿಲ್ಲ. ಆಯ್ಕೆ ಅವಕಾಶವೆಲ್ಲವು ಮಹಿಳೆಯರು ಮತ್ತು ಅವರ ಕುಟುಂಬಕ್ಕೆ ಬಿಟ್ಟಿದ್ದು ಎಂದರು.

    ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ಬಾರ್‍ಗಳಲ್ಲಿ ಕೆಲಸ ಮಾಡಿ ಎಂದು ಸರ್ಕಾರ ಹೇಳಿದೆ. ಎಲ್ಲಿ ಹೋಗಬೇಕು ಬೇಡವೆಂದು ನಿರ್ಬಂಧ ಹೇರಿಲ್ಲ ಎನ್ನುವುದು ಸರಿಯಾದುದಲ್ಲ. ರಾತ್ರಿ ವೇಳೆ ಬಾರ್, ಕ್ಲಬ್‍ಗಳಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಕಲ್ಪಿಸುವುದು ಸರಿಯಲ್ಲ ಎಂದರು.

     ಬಿ.ಕೆ.ಹರಿಪ್ರಸಾದ್ ಸರ್ಕಾರ ಎಲ್ಲರಿಗೂ ಅವಕಾಶ ನೀಡಿ ಸುರಕ್ಷತೆ ನೀಡುವ ಭರವಸೆ ನೀಡಬೇಕು ಎಂದಾಗ ಇದಕ್ಕೆ ಸಚಿವರು ಒಪ್ಪಿದರು.ಬಿಜೆಪಿಯ ತೇಜಸ್ವಿನಿಗೌಡ ಮಾತನಾಡಿ, ಅನಿವಾರ್ಯತೆಗೋ ಅಥವಾ ಅವಕಾಶಕ್ಕಾಗಿಯೋ ರಾತ್ರಿ ಪಾಳಿಯಲ್ಲಿ ಮಹಿಳೆ ದುಡಿಯಲು ಹೋಗುತ್ತಾಳೆ. ಕೆಲವೆಡೆ ಅವಕಾಶವಿದ್ದರೂ ಸುರಕ್ಷತೆಯಿಲ್ಲದ ಕಾರಣ ಕೆಲಸಕ್ಕೆ ಹೋಗುವುದೇ ಇಲ್ಲ. ಇದೆಲ್ಲ ಬದಲಾಗಬೇಕು. ಮಹಿಳಾ ಸುರಕ್ಷತೆಗೆ ಸಚಿವರು ಒತ್ತು ಕೊಡುತ್ತೇವೆ ಎನ್ನುವುದು ಶ್ಲಾಘನೀಯ. ವ್ಯಭಿಚಾರದಲ್ಲಿ ಯಾರೂ ಸಹ ಉದ್ದೇಶಪೂರ್ವಕ ತೊಡಗುವುದಿಲ್ಲ. ವ್ಯಭಿಚಾರದಲ್ಲಿ ತೊಡಗುವ ಪುರುಷರನ್ನು ನೋಡುವ ರೀತಿಯೇ ಬೇರೆ, ಮಹಿಳೆಯರನ್ನು ನೋಡುವ ರೀತಿಯೇ ಬೇರೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link