ಬೆಂಗಳೂರು
ಸರ್ಕಾರಿ ಖಾಲಿ ಕರಾಬು ಜಾಗದ ವಿವಾದದಿಂದ ಆಕ್ರೋಶಗೊಂಡು ಮಹಿಳೆಯೊಬ್ಬರನ್ನು ಸನಿಕೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವ ಯುವಕನಿಗಾಗಿ ಚಿಕ್ಕಬಳ್ಳಾಪುರದ ದಿಬ್ಬೂರಹಳ್ಳಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಸೀತಹಳ್ಳಿಯ ನಾರಾಯಣಮ್ಮ(40)ಎಂದು ಕೊಲೆಯಾದ ಮಹಿಳೆಯನ್ನು ಗುರುತಿಸಲಾಗಿದೆ,ಕೃತ್ಯವೆಸಗಿ ಇದೇ ಗ್ರಾಮದ ಶಿವಕುಮಾರ್(24) ಪರಾರಿಯಾಗಿದ್ದು ಆತನ ಸುಳಿವು ಪತ್ತೆಹಚ್ಚಿರುವ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಗ್ರಾಮದ ಖಾಲಿ ಖರಾಬು ಜಾಗ ತಮಗೆ ಸೇರಬೇಕು ಅಂತ ನಾರಾಯಣಮ್ಮ ಹಾಗೂ ಶಿವಕುಮಾರ್ ಕುಟುಂಬಸ್ಥರ ನಡುವೆ ಹಲವು ವರ್ಷಗಳಿಂದ ವಾದ-ವಿವಾದಗಳು ನಡೆಯುತ್ತಿತ್ತು. ಈ ಹಿಂದೆ ಸಹ ಈ ಪ್ರಕರಣ ಮೂರು-ನಾಲ್ಕು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಎರಡು ಕಡೆಯವರಿಗೂ ಪೊಲೀಸರು ಬುದ್ಧಿವಾದ ಹೇಳಿ ಗಲಾಟೆ ಮಾಡಿಕೊಳ್ಳದಂತೆ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು. ಆದರೆ ಶಿವಕುಮಾರ್ ಖಾಲಿ ಖರಾಬು ಜಾಗದಲ್ಲಿ ಕ್ಲೀನ್ ಮಾಡಲು ಮುಂದಾಗಿದ್ದಾಗ ನಾರಾಯಣಮ್ಮ ಪ್ರಶ್ನೆ ಮಾಡಿದ್ದಾರೆ. ಇಬ್ಬರ ನಡುವೆ ವಾದ-ವಿವಾದ ನಡೆದಿದ್ದು, ಈ ವೇಳೆ ಶಿವಕುಮಾರ್ ಸನಿಕೆಯಿಂದ ತಲೆಗೆ ಹೊಡೆದಿದ್ದಾನೆ. ಇದರಿಂದ ತಲೆಗೆ ಗಂಭೀರವಾಗಿ ಗಾಯವಾದ ಪರಿಣಾಮ ಮಹಿಳೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಕೂಡಲೇ ಆರೋಪಿ ಶಿವಕುಮಾರ್ ಊರು ಬಿಟ್ಟು ಪರಾರಿಯಾಗಿದ್ದಾನೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಹಿಂದೆ ರಾಜಿ ಪಂಚಾಯತಿ ಮಾಡಿದ್ದರೂ ನಮ್ಮ ಮನೆ ಮಗಳನ್ನ ಕೊಂದು ಬಿಟ್ಟರಲ್ಲ ಎಂದು ಮೃತಳ ಸಂಬಂಧಿಕರು ಪೊಲೀಸರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ