ಚಳ್ಳಕೆರೆ
ನಗರದಲ್ಲಿ ಪ್ರಗತಿಯಲ್ಲಿರುವ ಹಲವಾರು ಕಾಮಗಾರಿಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ವೀಕ್ಷಿಸಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರಲ್ಲದೆ, ಪ್ರತಿಯೊಂದು ಹಂತದಲ್ಲೂ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸುವಂತೆ ಇಂಜಿಯರ್ಗೆ ಸೂಚನೆ ನೀಡಿದರು.
ಶಾಸಕ ಟಿ.ರಘುಮೂರ್ತಿ ನಗರದ ಮಧ್ಯಭಾಗದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, ನಿಲ್ದಾಣ ಪಕ್ಕದಲ್ಲಿರುವ ಶೌಚಾಲಯವನ್ನು ಕೆಡವಿಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರಿಂದ ಚಿತ್ರದುರ್ಗ ರಸ್ತೆಯಿಂದ ನೇರವಾಗಿ ರಹೀಂನಗರದ ಮೂಲಕ ಶ್ರೀಜಗಲ್ಯೂರಜ್ಜ ಸ್ವಾಮೀ ದೇವಸ್ಥಾನ ಹಾಗೂ ಯಾತ್ರಿ ನಿವಾಸಕ್ಕೆ ನೇರ ರಸ್ತೆ ಕಲ್ಪಿಸಲು ಸೂಚನೆ ನೀಡಿದರು.
ಸದರಿ ಖಾಸಗಿ ಬಸ್ ನಿಲ್ದಾಣದಲ್ಲಿ ಮಳೆ ಬಂದ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯಲು ಅವಶ್ಯವಿದ್ದಲ್ಲಿ ಚರಂಡಿ ವ್ಯವಸ್ತೆಯನ್ನು ಮಾಡುವಂತೆ ಸೂಚನೆ ನೀಡಿದರು. ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ನಗರಸಭೆಯ ನೂತನ ಕಟ್ಟಡದ ಕಾಮಗಾರಿಯನ್ನು ಸಹ ಶಾಸಕರು ಪರಿಶೀಲನೆ ನಡೆಸಿದರು. ಚಿತ್ರದುರ್ಗ ರಸ್ತೆಯ ಅರಣ್ಯ ಇಲಾಖೆಯ ಬಳಿ ರಸ್ತೆ ಅಗಲೀಕರಣ, ಡಾಂಬರೀಕರ ಕಾಮಗಾರಿಯನ್ನು ವೀಕ್ಷಿಸಿ ಶಾಸಕರು ಸುಮಾರು 3 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿ ವಾಹನಗಳ ಓಡಾಟ ಹೆಚ್ಚಿದ್ದು, ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿ ಕಳಪೆಯಾಗದಂತೆ ಜಾಗೃತೆ ವಹಿಸಬೇಕೆಂದರು.
ಪೌರಾಯುಕ್ತ ಪಿ.ಪಾಲಯ್ಯ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಲಕ್ಷ್ಮಿನಾರಾಯಣ, ಇಂಜಿನಿಯರ್ ಲೋಕೇಶ್, ವಿನಯ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
