ಓದುಗರ ಸಂಖ್ಯೆ ಕ್ಷೀಣಸಿ ಅಕ್ಷರ ಸಂಸ್ಕೃತಿ ವಿರಳವಾಗುತ್ತಿದೆ..!!

ದಾವಣಗೆರೆ

   ಪ್ರಸ್ತುತ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅಕ್ಷರ ಸಂಸ್ಕೃತಿಯೂ ವಿರಳ ಆಗುತ್ತಿದೆ ಎಂದು ಸೋಮೇಶ್ವರ ವಿದ್ಯಾಯಲದ ಗೌರವ ಕಾರ್ಯದರ್ಶಿ ಸುರೇಶ್ ಕೆ.ಎಂ. ವಿಷಾದ ವ್ಯಕ್ತಪಡಿಸಿದರು.

   ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಜನಮಿಡಿತ ದಿನಪತ್ರಿಕೆ, ಚುಟುಕು ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾಘಟಕ ಹಾಗೂ ಅಣಬೇರಿನ ಭಾವಸಿರಿ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕವಿ ಅಣಬೇರು ತಾರೇಶ್ ಕೆ.ಪಿ. ಅವರ ಮೂರನೇ ಕವನ ಸಂಕಲನ ‘ಒಂಟಿ ಪಯಣ’ ಹಾಗೂ ಕವಿ ಕೆ.ಎನ್.ಪರಮೇಶ್ವರ್ ಗೋಪನಾಳ್ ಅವರ ಪ್ರಥಮ ಚುಟುಕು ಸಂಕಲನ ‘ಒಡಲ ಹನಿಗಳು’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

    ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ 20 ಅಂಕಗಳ ಪ್ರಾಜೆಕ್ಟ್ ವರ್ಕ್ ನೀಡಿದರೆ, ಆ ಮಕ್ಕಳ ಪೋಷಕರು ಬಂದು ಪ್ರಾಜೆಕ್ಟ್ ವರ್ಕ್ ಕೊಡಬೇಡಿ ಎಂಬುದಾಗಿ ಕೇಳಿಕೊಳ್ಳುತ್ತಾರೆ. ಏಕೆ ಎಂಬುದಾಗಿ ನಾವು ಪ್ರಶ್ನಿಸಿದರೆ, ನೀವು ಪ್ರಾಜೆಕ್ಟ್ ಕೊಟ್ಟಾಗೆಲ್ಲ ಮಕ್ಕಳು ಇಂಟರ್‍ನೆಟ್ ಕೆಫೆಗೆ ಹೋಗಿ, ಗೂಗಲ್‍ನಲ್ಲಿ ಸರ್ಚ್ ಮಾಡಿ, ಕಾಪಿ ಮಾಡಿಕೊಂಡು ಬಂದು ಶಾಲೆಗೆ ಕೊಡ್ತಾರೆ ಎಂಬ ಉತ್ತರ ನೀಡುತ್ತಾರೆ. ಪ್ರಾಜೆಕ್ಟ್ ವರ್ಕ್ ಕೊಡುವುದು ಪಠ್ಯದ ಮೇಲೆಯೇ ಏಕೆ ನಿಮ್ಮ ಮಕ್ಕಳಿಂದ ಪಠ್ಯ ಓದಿಸಿ, ಅದರಿಂದ ಮಾಹಿತಿ ಪಡೆಯಬಾರದು ಎಂಬ ಮರು ಪ್ರಶ್ನೆ ಮಕ್ಕಳ ಪೋಷಕರಿಗೆ ನೀಡಿದರೆ, ಮರು ಉತ್ತರವೇ ಇರುವುದಿಲ್ಲ ಎಂದರು.

     ಶಾಲೆಗಳಲ್ಲಿ ಪ್ರಾಜೆಕ್ಟ್ ವರ್ಕ್ ಕೊಟ್ಟಾಗ ಮಕ್ಕಳನ್ನು ದಯವಿಟ್ಟು ಇಂಟರ್‍ನೆಟ್ ಕೆಫೆಗಳಿಗೆ ಕಳುಹಿಸಬೇಡಿ, ಬದಲಿಗೆ ಮಕ್ಕಳಿಗೆ ಓದುವ ಸಂಸ್ಕøತಿಯನ್ನು ಕಲಿಸಿ, ಅಭ್ಯಾಸ ಮಾಡಿಸಿ ಎಂದು ಸಲಹೆ ನೀಡಿದ ಅವರು, ಇಂದು ಪೋಷಕರು ಓದುತ್ತಿಲ್ಲ ಹಾಗೂ ಮಕ್ಕಳಿಗೂ ಓದುವುದನ್ನು ಕಲಿಸುತ್ತಿಲ್ಲ. ಇಂತಹ ಕಾಲಘಟ್ಟದಲ್ಲಿ ತಾಂತ್ರಿಕ ಕೆಲಸ ಮಾಡುತ್ತಿರುವ ತಾರೇಶ್ ಹಾಗೂ ರೈತಾಪಿಯಾಗಿರುವ ಪರಮೇಶ್ವರ್ ಗೋಪನಾಳ್ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಹಿಂದೆ ಸಾಹಿತಿಗಳಲ್ಲಿ ಪರಸ್ಪರ ಹೋಂದಾಣಿಕೆಯ ವಾತಾವರಣ ಇರುತಿತ್ತು. ಆಗ ಒಬ್ಬರ ಬೆನ್ನನ್ನು ಒಬ್ಬರು ಚಪ್ಪರಿಸುತ್ತಿದ್ದರು. ಆದರೆ, ಈಗ ಯಾರಿಗಾದರೂ ಸಣ್ಣ ಪ್ರಶಸ್ತಿ ಬಂದರೂ ವಸೂಲಿ ಬಾಜಿ ಮಾಡಿಕೊಂಡು, ತೆಗೆದುಕೊಂಡು ಬಂದಿದ್ದಾರೆಂಬುದಾಗಿ ತೆಗಳುವವರೆ ಹೆಚ್ಚಾಗಿದ್ದಾರೆ ಎಂದು ಹೇಳಿದರು.

      ಓದುವ ಅಭಿರುಚಿ ಇದ್ದರೆ, ಧನಾತ್ಮಕ ಚಿಂತನೆಗಳನ್ನು ಮನುಷ್ಯನಲ್ಲಿ ಹುಟ್ಟುತ್ತವೆ. ಓದುವ ಮನಸ್ಸು ಇಲ್ಲದೇ ಇದ್ದರೆ, ಋಣಾತ್ಮ ಚಿಂತನೆಗಳು ಆವರಿಸುತ್ತವೆ ಎಂದ ಅವರು, ಮಕ್ಕಳನ್ನು ಇಂತಹ ಸಾಹಿತ್ಯ ಚಟುವಟಿಕೆಗಳ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವ ಮೂಲಕ ಅವರಲ್ಲಿ ಓದುವ ಹವ್ಯಾಸ ಬೆಳೆಸಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಿ ಎಂದು ಸಲಹೆ ನೀಡಿದರು.

       ‘ಒಂಟಿ ಪಯಣ’ ಕೃತಿ ಕುರಿತು ಮಾತನಾಡಿದ ಸಾಹಿತಿ ಆನಂದ್ ಋಗ್ವೇದಿ, ಭಾವಜೀವಿ, ಕನಸುಗಾರ, ಅಪ್ಪಟ ವಾಸ್ತವವಾದಿಯಾಗಿರುವ ಅಣಬೇರು ತಾರೇಶ್ ಅವರ ಒಂಟಿ ಪಯಣ ಕವನ ಸಂಕಲನ ಒಂದಿಷ್ಟು ಭರವಸೆ ಮೂಡಿಸಿದೆ. ಸಮಾಜದಲ್ಲಿ ಕ್ಷೀಣಿಸುತ್ತಿರುವ ಮಾನವೀಯ ಮೌಲ್ಯಗಳ ಕೊರತೆಯನ್ನು, ಪ್ರೀತಿಯನ್ನೇ ವ್ಯವಹಾರಿಕ ದೃಷ್ಟಿಕೋನದಿಂದ ನೋಡುವ ವಿಛಿದ್ರಕಾರಿ ಸಂಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಅವರ ಹೃದಯ ವಂತಿಕೆಯನ್ನು ತೋರಿಸಲಿದೆ ಎಂದು ವಿಶ್ಲೇಷಿಸಿದರು.

      ಯಾವತ್ತೂ ವರ್ತನಮಾನದ ಇತಿಹಾಸಕಾರನಾಗಿರುವ ಕವಿ, ಯಾವುದೋ ಕಾಲದ ಗತಿಸಿದ ಘಟನಾವಳಿಗಳ ಬಗ್ಗೆ ಬರೆಯಲಾರ. ವರ್ತಮಾನದ ಸಮಸ್ಯೆಗಳ ಮೇಲೆ ಮಾತ್ರ ಬೆಳಕು ಚೆಲ್ಲಬಲ್ಲ. ಆದ್ದರಿಂದ ಇಂದು ವರ್ತಮಾನದ ಕವಿಗಳಾಗುವ ತುರ್ತು ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

      ಇಂದು ನಡೆಯುತ್ತಿರುವ ಕೌಟುಂಬಿಕ, ಸಾಮಾಜಿಕ ಕಲಹಗಳಿಗೆ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಹೆಚ್ಚಾಗುತ್ತಿರುವುದೇ ಕಾರಣವಾಗಿದೆ ಎಂದ ಅವರು, ಯಾರು ಪ್ರೀತಿಗಾಗಿ ಹಂಬಲಿಸುತ್ತಾರೋ, ಅವರಿಗೆ ನೋಂದ ಜೀವಗಳು ಕಾಣಲು ಸಾಧ್ಯ. ಬಹುತೇಕರು ಅತೀಯಾಗಿ ಎಲ್ಲವನ್ನೂ ನಿರೀಕ್ಷಿಸುತ್ತಾರೆ. ಆದರೆ, ಬೇರೆಯವರ ನಿರೀಕ್ಷೆಗಳಿಗೆ ಸ್ಪಂದಿಸುವುದಿಲ್ಲ ಎಂದು ನುಡಿದರು.

      ಎನ್.ಕೆ.ಪರಮೇಶ್ವರ್ ಅವರ ‘ಒಡಲ ಹನಿಗಳು’ ಕೃತಿ ಕುರಿತು ಮಾತನಾಡಿದ ಸಾಹಿತಿ ಬಸವರಾಜ್ ಹನುಮಲಿ, ಕಟ್ಟುವ ಕಾವ್ಯಗಳನ್ನು ಬಡೆಯುತ್ತಿರುವ ತಾರೇಶ್ ಹಾಗೂ ಪರಮೇಶ್ವರ್ ಸವಾಲುಗಳನ್ನು ಮೀರಿ ಬಳೆಯುತ್ತಿದ್ದಾರೆ. ಪ್ರಕೃತಿ, ಬದುಕು ಹಾಗೂ ಸಮಾಜದ ಕ್ರೌರ್ಯದ ಬಗ್ಗೆ ಇಬ್ಬರೂ ಕಾವ್ಯ ರಚಿಸುವ ಮೂಲಕ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದರು.

     ಕೃಷಿ ಚಟುವಟಿಕೆಯ ಮೂಲಕ ಜಮೀನಿಗೆ ವಿಷವನ್ನೇ ಸುರಿಯುತ್ತಿದ್ದೇವೆ. ಹೀಗಾಗಿ ಹಳ್ಳ, ಕೊಳ್ಳದ ನೀರು ಕಲುಷಿತವಾಗಿದೆ. ಈಗ ರೈತರು ಕಳೆ ತಗೆಯುವ ಉಸಾಬರಿ ನಮಗೇಕೆ ಅಂತಾ ಕಳೆ ನಾಶಕ ಹಾಕುತ್ತಿದ್ದು, ಮುಂದೊಂದಿನ ಆಹಾರ ಎಲ್ಲವೂ ವಿಷವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದ ಅವರು, ರೈತರ ಬವಣೆ, ನೋವುಗಳನ್ನು ಪರಮೇಶ್ವರ್ ಚುಟುಕು ಸಾಹಿತ್ಯದ ಮೂಲಕ ಅನಾವರಣ ಗೊಳಿಸಿದ್ದಾರೆಂದು ಹೇಳಿದರು.

      ಜನಮಿಡಿತ ಪತ್ರಿಕೆ ಸಂಪಾದಕ ಜಿ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಭಾವಸಿರಿ ಪ್ರಕಾಶನದ ಗಂಗಮ್ಮ ಪರಮೇಶ್ವರಪ್ಪ, ಅಮೇರಿಕ ಸಾಫ್ಟವೇರ್ ಇಂಜಿನಿಯರ್ ಶಿವಬಸವ ಕೆ.ಕೆ. ಕಕ್ಕರಗೊಳ್ಳ, ವಿನೋದಮ್ಮ ಮತ್ತಿತರರು ಉಪಸ್ಥಿತರಿದ್ದರು.

       ನಂತರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ್ ಗುಂಡಗಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 30 ಕವಿಗಳು ಸ್ವರಚಿತ ಕಾವ್ಯ ವಾಚಿಸಿದರು. ಕೃತಿಕಾರರನ್ನು ಚಂದ್ರಿಕಾ ಜಗನ್ನಾಥ್ ಹಾಗೂ ಗೀತಾ ಭರಮಸಾಗರ ಪರಿಚಯಿಸಿದರು. ಶೋಭಾ ಮಂಜುನಾಥ್ ಪ್ರಾರ್ಥಿಸಿದರು. ಅಮುಭಾವಜೀವಿ ಸ್ವಾಗತಿಸಿದರು. ಸುನೀತಾ ಪ್ರಕಾಶ್, ಅರವಿಂದ್ ಎನ್.ಪಿ. ನಿರೂಪಿಸಿದರು. ರೇಖಾ ನಾಗರಾಜ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link