ತುಮಕೂರು
ಯಾದವ ಜನಾಂಗಕ್ಕೆ ಹೆಚ್ಚಿನ ಸ್ಥಾನಮಾನ ನೀಡಿರುವ ಬಿಜೆಪಿಯನ್ನು ಬೆಂಬಲಿಸಿ, ನಿರ್ಲಕ್ಷಿಸಿರುವ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ಯಾದವ ಮುಖಂಡರು ತಮ್ಮ ಸಮಾಜದ ಮತದಾರರಿಗೆ ಮನವಿ ಮಾಡಿದರು.
ಯಾದವ ಸಮಾಜದ ಮುಖಂಡರಾದ ಅಕ್ಕಲಪ್ಪ ಯಾದವ್, ಚಿಕ್ಕರಾಜು, ಜೆ ಜಗದೀಶ್, ತೀರ್ಥಕುಮಾರ್ ಮೊದಲಾದವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾದವ ಸಮಾಜದ ಎ ಕೃಷ್ಣಪ್ಪ ಅವರಿಗೆ ಟಿಕೆಟ್ ಕೊಟ್ಟು ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಜೆಡಿಎಸ್ನವರೇ ಪಕ್ಷದ ಅಭ್ಯರ್ಥಿಗೆ ಮತ ನೀಡದೆ ಸೊಲಿಸಿದರು, ಆ ಅವಮಾನವನ್ನು ಈ ಬಾರಿ ಮೈತ್ರಿ ಅಭ್ಯರ್ಥಿ ಸೋಲಿಸಿ ಸೇಡು ತಿರಿಸಿಕೊಳ್ಳುತ್ತೇವೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಯಾದವ ಮತದಾರರು 1.4 ಲಕ್ಷ ಇದ್ದಾರೆ. ಈ ಬಾರಿ ಸಮಾಜದ ಮತದಾರರು ಒಮ್ಮತವಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು
ಚಿಕ್ಕನಾಯಕನಹಳ್ಳಿ ತಾಲ್ಲೂಕು ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಶಾಸಕ ಮಾಧುಸ್ವಾಮಿ ಅವರು ಗೊಲ್ಲರ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಜೆಡಿಎಸ್ನ ಕುಮ್ಮಕ್ಕಿನಿಂದ ಆಗಿದೆ ಎಂದು ಮುಖಂಡ ತೀರ್ಥಕುಮಾರ್ ಹೇಳಿದರು. ಸೋಲಿನ ಭಯದಿಂದ ಜೆಡಿಎಸ್ನವರು ಇಂತಹ ಕೆಲಸ ಮಾಡಿದ್ದಾರೆ, ಚುನಾವಣಾ ಪ್ರಚಾರ ಸಭೆಗೆ ಬಂದು ಗಲಾಟೆ ಎಬ್ಬಿಸಿ ಈ ಘಟನೆಗ ಕಾರಣರಾಗಿದ್ದಾರೆ, ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಗೊಲ್ಲರಹಟ್ಟಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ವೇಳೆ ಹೆಚ್ಚು ಜನರ ಬೆಂಬಲ ವ್ಯಕ್ತವಾಗಿದ್ದನ್ನು ಕಂಡು ಸಹಿಸಲಾಗದ ಜೆಡಿಎಸ್ನವರು ಬಂದು ಗಲಾಟೆ ಮಾಡಿದರು. ಸೊಲಿನ ಹತಾಶೆಯಿಂದ ಹೀಗೆ ಗೊಂದಲ ಸೃಷ್ಠಿಸಿದರು, ಯಾರ ಮೇಲೂ ಬಿಜೆಪಿಯವರು ಹಲ್ಲೆ ಮಾಡಿಲ್ಲ ಎಂದು ಹೇಳಿದರು.
ಇದೇ ಭಾನುವಾರ ಮಧ್ಯಾಹ್ನ 12ಗಂಟೆಗೆ ಮಧುಗಿರಿಯಲ್ಲಿ ಬಿಜೆಪಿ ಬೆಂಬಲಿತ ಯಾದವರ ಸಮಾವೇಶ ನಡೆಯಲಿದೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು, ಮಾಜಿ ವಿಧಾನಪರಿಷತ್ ಸದಸ್ಯ ಡಾ. ಎಂ ಆರ್ ಹುಲಿನಾಯ್ಕರ್ ಮೊದಲಾದವರು ಭಾಗವಹಿಸುವರು ಎಂದರು.ಮುಖಂಡರಾದ ಗೋವಿಂದರಾಜು, ಬಸವರಾಜು, ನಾಗರಾಜು, ಪ್ರಕಾಶ್, ಶಿವಣ್ಣ ಮೊದಲಾದವರು ಹಾಜರಿದ್ದರು.